ಉಡುಪಿಯಲ್ಲಿ ಕರಾವಳಿ ಶೆಟ್ಟಿಗಾರ್ ಸಮಾವೇಶ
ಉಡುಪಿ, ಆಗಸ್ಟ್ 27: ದಕ್ಷಿಣಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು ವತಿಯಿಂದ 70ರ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕರಾವಳಿ ಶೆಟ್ಟಿಗಾರ್ ಸಮಾವೇಶವನ್ನು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಉದ್ಘಾಟಿಸಲಾಯಿತು .
ಶನಿವಾರ (ಆ 27) ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ನೇಕಾರ ವೃತ್ತಿಯನ್ನು ಕುಲಕಸುಬಾಗಿ ಮಾಡಿಕೊಂಡು ಬಂದಿರುವ ಶೆಟ್ಟಿಗಾರ್ ಯಾನೆ ಪದ್ಮಶಾಲಿ ಜಾತಿಗೆ ಮಾನ್ಯತೆ ಸಿಗಬೇಕು ಎಂದು ಒತ್ತಾಯಿಸಿದರು. ಜೊತೆಗೆ, ನೇಕಾರ ಸಮುದಾಯ ಸಮಾಜಕ್ಕೆ ಕೊಟ್ಟ ಕೊಡುಗೆಯನ್ನು ಹೆಗ್ಗಡೆಯವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಯಾಂತ್ರೀಕೃತ ಮಗ್ಗದಿಂದಾಗಿ ಕೈ ಮಗ್ಗ ಮೂಲೆ ಗುಂಪಾಗಿದೆ, ಅದೇ ರೀತಿ ಯುವ ಸಮಾಜ ಬದುಕು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಸ್ವ ಉದ್ಯೋಗದಿಂದ ವಿಮುಖವಾಗುತ್ತಿದೆ. ಹಾಗಾಗಿ, ಸರಕಾರ ಶೆಟ್ಟಿಗಾರ್ ಜಾತಿಗೆ ಮಾನ್ಯತೆ ನೀಡಿ, ಸೂಕ್ತ ಸೌಲಭ್ಯ ನೀಡಿ ಯುವ ಜನತೆಯನ್ನು ಸ್ವ ಉದ್ಯೋಗದೆಡೆಗೆ ಆಕರ್ಷಿಸಲು ಪ್ರೋತ್ಸಾಹಿಸಬೇಕು ಎಂದು ಹೆಗ್ಗಡೆಯವರು ಒತ್ತಾಯಿಸಿದರು.
ಖಾಸಗೀಕರಣ, ಜಾಗತೀಕರಣ ಈಗ ವೇಗವಾಗಿ ಸಾಗುತ್ತಿದೆ ಅದರ ಜೊತೆಗೆ ಮಾನವೀಕರಣದ ಅಗತ್ಯತೆ ಕೂಡಾ ಇದೆ ಎಂದು ಹೇಳಿದ ಹೆಗ್ಗಡೆಯವರು, ತಿರುಪತಿಯಲ್ಲಿ ತಿಮ್ಮಪ್ಪನಿಗೆ ಉಡಿಸುವ ಬಟ್ಟೆ ಇಂದಿಗೂ ಕೈಮಗ್ಗದಿಂದ ನೇಯ್ದ ಬಟ್ಟೆಯಾಗಬೇಕು ಎನ್ನುವ ನಿಯಮವಿದೆ. ಆ ಬಟ್ಟೆಯನ್ನು ಇಂದಿಗೂ ಸಿದ್ದಪಡಿಸಿ ಕೊಡುತ್ತಿರುವುದು ನೇಕಾರ ಸಮಾಜ ಎಂದು ಹೆಮ್ಮೆ ಪಡಬೇಕು ಎಂದು ಹೆಗ್ಗಡೆಯವರು ಹೇಳಿದರು.
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡುತ್ತಾ, ಬ್ರಿಟಿಷರು ಭಾರತೀಯರ ಸ್ವಾವಲಂಬನಾ ಮನೋಭಾವವನ್ನು ಕಿತ್ತುಕೊಂಡರು. ಆದರೆ ಮತ್ತೆ ನಾವು ಕೈ ಮಗ್ಗದ ಬಟ್ಟೆಗಳನ್ನು ಉಡುವ ಮೂಲಕ ಸ್ವಉದ್ಯೋಗ ಮಾಡುವವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ರೈತಾಪಿ ವರ್ಗವನ್ನು ಕೂಡಾ ನಾವು ಬೆಂಬಲಿಸಬೇಕು. ವಿದ್ಯುತ್ ಇಲ್ಲದೆ ನೇಕಾರ ವರ್ಗ ತೊಂದರೆಯನ್ನು ಅನುಭವಿಸುತಿತ್ತು. ನಾನು ಇಂಧನ ಸಚಿವೆಯಾಗಿದ್ದಾಗ ಈ ಸಮಸ್ಯೆಯನ್ನು ಪರಿಹರಿಸಿದ್ದೆ. ಅದೇ ರೀತಿ ನಮ್ಮ ಸರಕಾರವು ನೇಕಾರ ಭವನಕ್ಕಾಗಿ 65ಕೋಟಿ ರೂಪಾಯಿಗಳನ್ನು ಮೀಸಲಿರಿಸಿತ್ತು.
ಅದರಲ್ಲಿ 35ಲಕ್ಷ ರೂಪಾಯಿ ಉಡುಪಿಗೂ ನೀಡಲಾಗಿತ್ತು. ಆದರೆ ಅದು ತಾಂತ್ರಿಕ ಕಾರಣಗಳಿಂದ ಬಿಡುಗಡೆಯಾಗಿರಲಿಲ್ಲ, ಅದನ್ನು ಆದಷ್ಟು ಬೇಗ ಬಿಡುಗಡೆಗೊಳಿಸಲು ಸರಕಾರ ಪ್ರಯತ್ನಿಸಬೇಕು ಎಂದು ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತಾಡಿದ ದ.ಕ ಜಿಲ್ಲಾ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಪುರಂದರ ಡಿ ಶೆಟ್ಟಿಗಾರ್, ನಮ್ಮ ಶೆಟ್ಟಿಗಾರ್ ಸಮಾಜ ಜಾತಿ ಸರ್ಟಿಫಿಕೇಟ್ ಪಡೆಯಲು ಕೂಡಾ ತೊಂದರೆ ಅನುಭವಿಸುತ್ತಿದೆ. ಸರಕಾರ ಇದನ್ನು ಆದಷ್ಟು ಬೇಗ ಪರಿಹರಿಸಬೇಕು, ಪದ್ಮಶಾಲಿ ಯಾನೆ ಶೆಟ್ಟಿಗಾರ್ ಯನ್ನು ಅಧಿಕೃತ ಜಾತಿಯಾಗಿ ಗುರುತಿಸಬೇಕು ಎಂದು ಆಗ್ರಹಿಸಿದ್ದಾರೆ.