ತುಮಕೂರಿನಲ್ಲಿ ದೇವೇಗೌಡ್ರ ಸೋಲಿಗೆ ಕಾರಣ ಏನು? ರಹಸ್ಯ ಬಿಚ್ಚಿಟ್ಟ ಜೆಡಿಎಸ್ ಶಾಸಕ
ತುಮಕೂರು, ಡಿ 20: ಚುನಾವಣೆಯಲ್ಲಾದ ಸೋಲಿಗೆ ಒಬ್ಬೊಬ್ಬರೇ ಕಾರಣ ಬಿಚ್ಚಿಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಮಗೆ ಚಾಮುಂಡೇಶ್ವರಿಯಲ್ಲಾದ ಸೋಲಿಕೆ 'ನಮ್ಮವರೇ ಕಾರಣ'ಎಂದಿದ್ದರು.
ಈಗ, ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಸೋಲಲು ಕಾರಣವಾದ ಅಂಶದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!
ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್, "ತುಮಕೂರಿನಲ್ಲಿ ಗೌಡ್ರನ್ನು ಸೋಲಿಸಲು ಯಾವುದೇ ಒಳ ಒಪ್ಪಂದ ನಡೆದಿರಲಿಲ್ಲ"ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಮುನಿಸಿಕೊಂಡು, ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಶ್ರೀನಿವಾಸ್, "ನಾನಿನ್ನೂ ಜೆಡಿಎಸ್ ನಲ್ಲೇ ಇದ್ದೇನೆ. ದೇವೇಗೌಡ್ರು ನಮ್ಮ ನಾಯಕರು"ಎಂದು ಸ್ಪಷ್ಟ ಪಡಿಸಿದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ದಹನುಮೇಗೌಡ
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿತ್ತು. ಅದರಂತೇ, ತುಮಕೂರು ಕ್ಷೇತ್ರದಿಂದ ದೇವೇಗೌಡ್ರು ಸ್ಪರ್ಧಿಸಿದ್ದರು. ಇದು ಕಳೆದ ಬಾರಿ ಚುನಾವಣೆ ಗೆದ್ದಿದ್ದ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ದಹನುಮೇಗೌಡರನ್ನು ಕೆರಳಿಸಿತ್ತು. ಜೊತೆಗೆ, ಕ್ಷೇತ್ರದ ಪ್ರಬಾವೀ ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಅಸಮಾಧಾನಕ್ಕೂ ಕಾರಣವಾಗಿತ್ತು.
ದೇವೇಗೌಡರ ಅತಿಯಾದ ಆತ್ಮವಿಶ್ವಾಸವೇ ಅವರ ಸೋಲಿಗೆ ಕಾರಣ
"ಕಳೆದ ಲೋಕಸಭಾ ಚುನಾವಣೆಯಲ್ಲಿ ಒಳ ಒಪ್ಪಂದವಾಗಿರಲಿಲ್ಲ. ಬದಲಿಗೆ, ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇನೆ ಎನ್ನುವ ದೇವೇಗೌಡರ ಅತಿಯಾದ ಆತ್ಮವಿಶ್ವಾಸವೇ ಅವರ ಸೋಲಿಗೆ ಕಾರಣವಾಯಿತು" ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಹೇಳಿದರು. ಆ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜ್, ಗೌಡ್ರನ್ನು ಹದಿಮೂರು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.
ಗುಬ್ಬಿ ಶಾಸಕ ಶ್ರೀನಿವಾಸ್
"ದೇವೇಗೌಡರ ಬಗ್ಗೆ ಯಾರ ವಿರೋಧವೂ ಇಲ್ಲ. ಈಗಲೂ ಅವರೇ ನಮ್ಮ ನಾಯಕರು. ನಮ್ಮ ನಾಯಕರೇ ಬಿಜೆಪಿಗೆ ಬೆಂಬಲ ನೀಡುತ್ತಿರುವುದರಿಂದ ಬಿಜೆಪಿ ಸರಕಾರ ಅವಧಿಯನ್ನು ಪೂರೈಸಲಿದೆ. ನಮ್ಮ ಪಕ್ಷ ಹುಟ್ಟಿದ್ದೇ ಜಗಳದಿಂದ ಅಲ್ಲವೇ, ಹಾಗಾಗಿ ನಮ್ಮಲ್ಲಿ ಜಗಳ ಸಾಮಾನ್ಯ"ಎಂದು ಶ್ರೀನಿವಾಸ್ ಹೇಳಿದರು.
ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ
ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಮಾತನಾಡುತ್ತಾ, "ನನಗೆ ದೇವೇಗೌಡರ ಮೇಲೆ ಗೌರವವಿದೆ. ಹಿಂದೊಮ್ಮೆ ನನ್ನನ್ನು ಅವರು ಶಾಸಕರನ್ನಾಗಿ ಮಾಡಿದ್ದರು, ಆ ಖುಣ ನನ್ನ ಮೇಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಎಂದು ನಾನು ಬಸವರಾಜ್ ಅವರನ್ನು ಬೆಂಬಲಿಸಲು, ವ್ಯಕ್ತಿಗತವಾಗಿ ಅವರಿಗೆ ಬೆಂಬಲ ಕೊಟ್ಟೆ"ಎಂದು ಹೇಳಿದರು.