ತುಮಕೂರು ಜಿಲ್ಲೆಯಲ್ಲಿ ಶಾಸಕರ ನಿಧಿ ಬಳಕೆ: ಸುರೇಶ್ ಗೌಡ ನಂಬರ್ ಒನ್
ತುಮಕೂರು, ಏಪ್ರಿಲ್ 9: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಬಳಕೆ ತುಮಕೂರಿನಲ್ಲಿ ಹೇಗೆ ಆಗಿದೆ? ಯಾವ ಶಾಸಕರು ಹೆಚ್ಚು ಪರಿಣಾಮಕಾರಿಯಾಗಿ ಆ ಅನುದಾನ ಬಳಸಿಕೊಂಡಿದ್ದಾರೆ ಎಂಬುದನ್ನು ಈ ವರದಿ ಬಹಿರಂಗ ಪಡಿಸುತ್ತಿದೆ. 2013ರಿಂದ 2017ರವರೆಗೆ ರಾಜ್ಯ ಸರಕಾರ ಬಿಡುಗಡೆ ಮಾಡಿದ ಹಣ, ಆ ಪೈಕಿ ಕಳೆದ ಡಿಸೆಂಬರ್ ಕೊನೆಗೆ ಬಳಕೆ ಆಗದೆ ಉಳಿದಿರುವುದೆಷ್ಟು ಎಂಬ ವಿವರ ಇಲ್ಲಿದೆ.
ತುಮಕೂರು ಜಿಲ್ಲೆಯಲ್ಲಿ ಒಟ್ಟು ಹನ್ನೊಂದು ವಿಧಾನಸಭಾ ಕ್ಷೇತ್ರಗಳಿದ್ದು, ಬಿಡುಗಡೆ ಆದ ಹಣ ಹಾಗೂ ಆ ಪೈಕಿ ಹೆಚ್ಚು ಖರ್ಚು ಮಾಡಿರುವುದು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ. ಅವರ ಕ್ಷೇತ್ರಕ್ಕೆ 9.46 ಕೋಟಿ ರುಪಾಯಿ ಬಿಡುಗಡೆ ಆಗಿದ್ದರೆ, ಕಳೆದ ಡಿಸೆಂಬರ್ ಕೊನೆಗೆ ಖರ್ಚಾಗದೆ ಉಳಿದಿದ್ದ ಮೊತ್ತ 72.92 ಲಕ್ಷ ರುಪಾಯಿ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಆ ನಂತರ ಸ್ಥಾನ ತುಮಕೂರು ನಗರದ ಶಾಸಕ ಡಾ.ರಫೀಕ್ ಅಹ್ಮದ್ ಅವರದು. 8.46 ಕೋಟಿ ರುಪಾಯಿ ಮೊತ್ತ ಇದೇ ಅವಧಿಯಲ್ಲಿ ಸರಕಾರದಿಂದ ಬಿಡುಗಡೆ ಆಗಿದ್ದರೆ, ಆ ಪೈಕಿ ಖರ್ಚಾಗದೆ ಉಳಿದಿದ್ದ ಮೊತ್ತ 88.90 ಲಕ್ಷ ರುಪಾಯಿ. ಜಿಲ್ಲೆಯ ಬಾಕಿ ವಿಧಾನಸಭಾ ಕ್ಷೇತ್ರಗಳ ಶಾಸಕರ ಕ್ಷೇತ್ರಗಳಿಗೂ ತಲಾ 8.46 ಕೋಟಿ ರುಪಾಯಿ ಬಿಡುಗಡೆ ಆಗಿದೆ.
ಡಿಸೆಂಬರ್ 2017ರ ಕೊನೆಗೆ ಯಾವ ಶಾಸಕರ ಲೆಕ್ಕದಲ್ಲಿ ಖರ್ಚಾಗದೆ ಉಳಿದ ಮೊತ್ತ ಎಷ್ಟು ಉಳಿದಿತ್ತು ಎಂಬುದರ ವಿವರ ಇಲ್ಲಿದೆ.
ಸುಧಾಕರ ಲಾಲ್ (ಕೊರಟಗೆರೆ) 3.30 ಕೋಟಿ
ಟಿ.ಬಿ.ಜಯಚಂದ್ರ (ಶಿರಾ) 2.52 ಕೋಟಿ
ಸಿ.ಬಿ.ಸುರೇಶ್ ಬಾಬು (ಚಿಕ್ಕನಾಯಕನಹಳ್ಳಿ) 2.37 ಕೋಟಿ
ಎಂ.ಟಿ.ಕೃಷ್ಣಪ್ಪ (ತುರುವೇಕೆರೆ) 2.35 ಕೋಟಿ
ತಿಮ್ಮರಾಯಪ್ಪ (ಪಾವಗಡ) 2.10 ಕೋಟಿ
ಡಿ.ನಾಗರಾಜಯ್ಯ (ಕುಣಿಗಲ್) 1.80 ಕೋಟಿ
ಎಸ್.ಆರ್.ಶ್ರೀನಿವಾಸ್(ಗುಬ್ಬಿ) 1.30 ಕೋಟಿ
ಕೆ.ಷಡಕ್ಷರಿ (ತಿಪಟೂರು) 1.20 ಕೋಟಿ
ಕೆ.ರಾಜಣ್ಣ (ಮಧುಗಿರಿ) 1.06 ಕೋಟಿ
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಅವರಿಗೆ ಜಿಲ್ಲೆಯ ಉಳಿದ ಶಾಸಕರಿಗಿಂತ ಸರಕಾರದ ಅನುದಾನ ಹೆಚ್ಚು ಬಿಡುಗಡೆ ಆಗಿದೆ. ಆ ಮೊತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಗೆ ಖರ್ಚು ಮಾಡಿರುವುದರಲ್ಲಿ ಅವರೇ ಮುಂಚೂಣಿಯಲ್ಲಿದ್ದಾರೆ.
ಅನುದಾನ ಬಿಡುಗಡೆ ಮೊತ್ತದ ಪೈಕಿ ಹೆಚ್ಚು ಬಾಕಿ ಉಳಿಸಿಕೊಂಡವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೊರಟಗೆರೆ ಶಾಸಕ ಪಿ.ಆರ್.ಸುಧಾಕರ್ ಲಾಲ್ ಇದ್ದರೆ, ಎರಡನೇ ಸ್ಥಾನದಲ್ಲಿ ಶಿರಾ ವಿಧಾನಸಭೆ ಕ್ಷೇತ್ರ ಪ್ರತಿನಿಧಿಸುವ- ಸಚಿವರಾದ ಟಿ.ಬಿ.ಜಯಚಂದ್ರ ಇದ್ದಾರೆ.
ಶಾಸಕರ ಅನುದಾನ ಬಳಕೆ ಯಾವುದಕ್ಕೆ ಮಾಡಿರುವುದು ಎಂಬ ಬಗ್ಗೆ ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಬಿ.ಸುರೇಶ್ ಗೌಡ, ಶಾಸಕರ ಅನುದಾನವನ್ನು ಹೆತ್ತೇನಹಳ್ಳಿ ಶಾಲೆ, ಗೂಳೂರು ಶಾಲೆ, ನಾಗವಲ್ಲಿ ಶಾಲೆ, ಹೊನಸಕೆರೆ ಶಾಲೆ, ಮಸ್ಕಲ್ ಶಾಲೆ, ಬುಗುಡನಹಳ್ಳಿ, ದುರ್ಗದಹಳ್ಳಿ, ಹಿರೇಹಳ್ಳಿ, ಹೊನ್ನುಡಿಕೆ ಶಾಲೆಗಳಿಗೆ ಖರ್ಚು ಮಾಡಿದ್ದೇನೆ ಎಂದರು.
ಅದೇ ರೀತಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೂ ವೆಚ್ಚ ಮಾಡಿದ್ದಾರೆ. ಆಸ್ಪತ್ರೆಗಳ ರಿಪೇರಿಗೆ ವೆಚ್ಚ, ಹೊನ್ನುಡಿಕೆ ಜನಾರ್ದನ ಸ್ವಾಮಿ ದೇವಸ್ಥಾನ, ನಿಡುವಳಲ್ ಲಕ್ಷ್ಮಿ ದೇವಸ್ಥಾನ, ತಿಮ್ಮಸಂದ್ರ ಲಕ್ಶ್ಮಿ ದೇವಸ್ಥಾನ, ಸಿರಿವಾರದ ಕೊಲ್ಲಾಪುರದಮ್ಮ, ಕೆರೆಬಂಡಿಪಾಳ್ಯದ ದೇವಸ್ಥಾನ ಹೀಗೆ ವಿವಿಧ ದೇವಸ್ಥಾನಗಳಿಗೂ ಖರ್ಚು ಮಾಡಿದ್ದಾರೆ.
ಡಿಸೆಂಬರ್ ನಲ್ಲಿ ಬಾಕಿಯಿದ್ದ ಮೊತ್ತವನ್ನು ಪೂರ್ತಿಯಾಗಿ ಕ್ಷೇತ್ರದ ಅಭಿವೃದ್ಧಿಗಾಗಿಯೇ ಖರ್ಚು ಮಾಡಿದ್ದೇನೆ ಎಂದ ಸುರೇಶ್ ಗೌಡ, ಗ್ರಾಮಾಂತರ ಭಾಗದಲ್ಲಿ ಅಭಿವೃದ್ಧಿ ಮಾಡಲು ಸಾಕಷ್ಟು ಕೆಲಸಗಳಿರುತ್ತವೆ. ಆದ್ದರಿಂದ ಖರ್ಚಾಗಿದೆ. ನಾನು ಓದಿದ್ದು, ಸರಕಾರಿ ಶಾಲೆ-ಕಾಲೇಜುಗಳಲ್ಲಿ. ಆದ್ದರಿಂದ ಅದಕ್ಕಾಗಿಯೇ ಹೆಚ್ಚು ಅನುದಾನ ಮೀಸಲಿಟ್ಟಿದ್ದೇನೆ. ಈ ಹಿಂದಿ ಅವಧಿಯಲ್ಲೂ ಶಾಸಕರ ಸ್ಥಳೀಯ ಅಭಿವೃದ್ಧಿ ನಿಧಿಯನ್ನು ಸಂಪೂರ್ಣ ಖರ್ಚು ಮಾಡಿದ್ದೆ ಎಂದರು.
ಇನ್ನು ಹೆಚ್ಚಿನ ಮೊತ್ತ ಬಾಕಿ ಉಳಿಸಿಕೊಂಡಿದ್ದ ಸುಧಾಕರ್ ಲಾಲ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.