ಇನ್ನೇನು ರೈಲಿಗೆ ಹಾರಿ ಪ್ರಾಣ ಬಿಡಬೇಕು ಅಂದುಕೊಂಡ ಯುವಕ ಬದುಕಿದ್ದು ಹೇಗೆ?
ತುಮಕೂರು, ಮೇ 10: ರೈಲು ಬಂದೇ ಬಿಡ್ತು ಇನ್ನು ಹಾರಿ ಬಿಡೋಣ ಎಂದು ಹೊರಟಿದ್ದ ಯುವಕನನ್ನು ತಡೆದು ರೈಲ್ವೆ ಪೊಲೀಸರೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು ಈ ಘಟನೆ ನಡೆದಿದ್ದು ತುಮಕೂರಿನಲ್ಲಿ, ಅಂದು ರಾತ್ರಿ 11.30 ರೈಲ್ವೆ ರಕ್ಷಣಾ ಪಡೆಯ ಇನ್ಸ್ಪೆಕ್ಟರ್ ಬಿಎನ್ ಕುಬೇರಪ್ಪ ಅವರು ರೈಲ್ವೆ ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದರು.
ರೈಲು ಇನ್ನೇನು ಪ್ಲಾಟ್ಫಾರಂಗೆ ಆಗಮಿಸಬೇಕು ಅಷ್ಟರಲ್ಲಿ ಪ್ಲಾಟ್ಫಾರಂ ಕಡೆ ನೋಡಿದ್ದಾರೆ ಅಲ್ಲಿ 20 ವರ್ಷದ ಯುವಕನೊಬ್ಬ ಪ್ಲಾಟ್ಫಾರಂ ಅಂಚಿನಲ್ಲಿ ಬಂದು ನಿಂತಿದ್ದಾನೆ, ಈತ ಪ್ರಯಾಣಿಕ ಆಗಿರಲು ಸಾಧ್ಯವೇ ಇಲ್ಲ ಎಂದು ಅರಿತ ಅವರು ತಕ್ಷಣವೇ ಆತನ ಬಳಿ ಧಾವಿಸಿದ್ದಾರೆ. ಇನ್ನೇನು ಹಾರಬೇಕು ಎನ್ನುವಷ್ಟರಲ್ಲಿ ಆತನ ಕೈ ಹಿಡಿದು ಹಿಂದಕ್ಕೆ ಎಳೆದುಕೊಂಡಿದ್ದಾರೆ.

ಅವರ ಕೈಯಿಂದ ಬಿಡಿಸಿಕೊಳ್ಳಲು ಬಾಲಕ ಯತ್ನಿಸಿದ್ದಾನೆ, ತಕ್ಷಣ ರೈಲ್ವೆ ಇಲಾಖೆಯ ಇತರೆ ಸಿಬ್ಬಂದಿಗಳನ್ನು ಕರೆದು ಆತನನ್ನು ಹಿಡಿದುಕೊಳ್ಳುವಂತೆ ತಿಳಿಸಿದ್ದಾರೆ. ವೈಟಿಂಗ್ ಕೊಠಡಿಗೆ ಕರೆದೊಯ್ದು ಆತನಿಗೆ ಊಟ ನೀಡಿ ಬುದ್ಧಿವಾದ ಹೇಳಿ ಕಳುಹಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವಕ ತುಮಕೂರಿನ ಹೆಬ್ಬೂರಿನ ಕಮಲಾಪುರದವನು, ಆತ 10ನೇ ತರಗತಿಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲ್ ಆಗಿದ್ದ, ಕೆಲಸ ಪಡೆಯಲು ಎಷ್ಟೇ ಪ್ರಯತ್ನಿಸಿದರೂ ಕೆಲಸವೂ ಸಿಕ್ಕಿರಲಿಲ್ಲ.
ಸ್ನೇಹಿತನಿಂದ 500 ರೂ ಪಡೆದು ಮೇ 7ರಂದು ಬೆಂಗಳೂರಿಗೆ ಬಂದಿದ್ದ. ತುಮಕೂರಿನಲ್ಲಿ ಯಾವುದೇ ನೌಕರಿ ಸಿಕ್ಕಿರಲಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾಗ ಆತ ಅಳಲು ತೋಡಿಕೊಂಡಿದ್ದಾನೆ. ರೈಲ್ವೆ ಪೊಲೀಸರು ಎನ್ಜಿಓ ಒಂದಕ್ಕೆ ಆತನನ್ನು ಒಪ್ಪಿಸಿ, ಪೋಷಕರಿಗೆ ವಿಷಯ ತಿಳಿಸಿದ್ದಾರೆ.
ಒಂದು ವಾರದಲ್ಲಿ ಇದು ಎರಡನೇ ಪ್ರಕರಣ: ಕುಬೇರಪ್ಪ ಅವರ ಮಾಹಿತಿ ಪ್ರಕಾರ ವಾರದಲ್ಲಿ ಇದು ಎರಡನೇ ಪ್ಕರಣವಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ತೆರಳುತ್ತಿದ್ದಾಗ ಆತನನ್ನು ರಕ್ಷಣೆ ಮಾಡಿ ಮನೆಗೆ ಕಳುಹಿಸಲಾಗಿದೆ. ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೆ ಮನೆಯನ್ನು ಬಿಟ್ಟು ಓಡಿ ಬಂದಿದ್ದ, ಆತ ಮೊದಲು ಬೆಂಗಳೂರಿನಿಂದ ಶಿವಮೊಗ್ಗ ನಂತರ ತುಮಕೂರಿಗೆ ರೈಲಿನಲ್ಲಿ ಸಂಚರಿಸಿದ್ದ.












Click it and Unblock the Notifications