ನಾಮಪತ್ರ ವಾಪಸ್ ಪಡೆದ ಮುದ್ದಹನುಮೇಗೌಡ, ದೇವೇಗೌಡರ ಹಾದಿ ಸುಗಮ
Recommended Video

ತುಮಕೂರು, ಮಾರ್ಚ್ 29: ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್ ಮುಖಂಡರ ನಿರಂತರ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೇವೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು, ಕ್ಷೇತ್ರದ ಹಾಲಿ ಸಂಸದ ಮುದ್ದಹನುಮೇಗೌಡ ಅವರು ಮೈತ್ರಿಗೆ ಬಂಡಾಯವಾಗಿ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು.
ಆದರೆ ಕಾಂಗ್ರೆಸ್ ಮುಖಂಡರು ಮತ್ತು ರಾಹುಲ್ ಗಾಂಧಿ ಅವರ ನಿರಂತರ ಒತ್ತಡದ ಬಳಿಕ ಮುದ್ದಹನುಮೇಗೌಡ ಅವರು ಇಂದು ತಮ್ಮ ಆಪ್ತರ ಮೂಲಕ ನಾಮಪತ್ರ ವಾಪಸ್ ಪಡೆದಿದ್ದಾರೆ. ಅಲ್ಲಿಗೆ ದೇವೇಗೌಡ ಅವರ ಗೆಲುವಿನ ಹಾದಿ ಸುಲಭವಾದಂತಾಗಿದೆ.

ಮುದ್ದಹನುಮೇಗೌಡ ಅವರು ತುಮಕೂರು ಕ್ಷೇತ್ರದ ಕಾಂಗ್ರೆಸ್ನ ಹಾಲಿ ಸಂಸದರಾಗಿದ್ದರು, ಅವರಿಗೆ ಅಪಾರ ಜನಮನ್ನಣೆಯೂ ಇತ್ತು, ಆದರೆ ಕ್ಷೇತ್ರ ಹಂಚಿಕೆ ಸಂದರ್ಭದಲ್ಲಿ ಹೈಕಮಾಂಡ್ ತುಮಕೂರನ್ನು ದೇವೇಗೌಡ ಅವರಿಗೆ ಬಿಟ್ಟುಕೊಟ್ಟಿತ್ತು, ಇದು ಮುದ್ದಹನುಮೇಗೌಡ ಹಾಗೂ ಅವರ ಕಾರ್ಯಕರ್ತರನ್ನು ಕೆರಳಿಸಿತ್ತು.
ಮುದ್ದಹನುಮೇಗೌಡ ಅವರನ್ನು ಸತತವಾಗಿ ದಿನೇಶ್ ಗುಂಡೂರಾವ್, ಪರಮೇಶ್ವರ್, ಸಿದ್ದರಾಮಯ್ಯ ಇನ್ನಿತರ ಮುಖಂಡರು ಭೇಟಿಯಾಗಿ ಸಂಧಾನ ಮಾತುಕತೆ ನಡೆಸಿದ್ದರು, ರಾಹುಲ್ ಗಾಂಧಿ ಅವರು ನೇರವಾಗಿ ದೂರವಾಣಿ ಮುಖಾಂತರ ಮಾತನಾಡಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರು.
ಸಂಧಾನದ ಬಳಿಕ ಹೇಳಿಕೆ ನೀಡಿದ್ದ ಮುದ್ದಹನುಮೇಗೌಡ, ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಪಡಿಸುವುದಿಲ್ಲ ಎಂದಿದ್ದರು, ಹೇಳಿದ ಮಾತಿನಂತೆ ಇಂದು ನಾಮಪತ್ರ ವಾಪಸ್ ಪಡೆದಿದ್ದಾರೆ.












Click it and Unblock the Notifications