Sogadu Shivanna: ತುಮಕೂರು ನಗರ ಕ್ಷೇತ್ರ: ಬಿಜೆಪಿ ಅಲ್ಲ, ಜೆಡಿಎಸ್ ಅಲ್ಲ; ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ ಸೊಗಡು ಶಿವಣ್ಣ
ಟಿಕೆಟ್ ಸಿಗದ ಕಾರಣ ಬಿಜೆಪಿ ಪಕ್ಷ ತೊರೆದಿರುವ ಮಾಜಿ ಸಚಿವ ಸೊಗಡು ಶಿವಣ್ಣ ತುಮಕೂರು ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ (ಏಪ್ರಿಲ್ 19) ನಾಮಪತ್ರ ಸಲ್ಲಿಸಿದರು.
ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ, ಸೊಗಡು ಶಿವಣ್ಣ ಅವರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಬಂದರು.

ತುಮಕೂರು ನಗರ ಬಿಜೆಪಿ ಟಿಕೆಟ್ ಬಯಸಿದ್ದ ಸೊಗಡು ಶಿವಣ್ಣ ಅವರ ಬದಲಾಗಿ ಹಾಲಿ ಶಾಸಕ ಜ್ಯೋತಿ ಗಣೇಶ್ ಅವರಿಗೇ ಮತ್ತೆ ಟಿಕೆಟ್ ಘೋಷಣೆಯಾಯಿತು. ಹೀಗಾಗಿ ಸೊಗಡು ಶಿವಣ್ಣ ಬಿಜೆಪಿ ತೊರೆಯಬೇಕಾಯಿತು. ಒಂದು ಕಾಲದಲ್ಲಿ ಬಿಎಸ್ ಯಡಿಯೂರಪ್ಪ ಅವರ ಆಪ್ತರಾಗಿದ್ದರು ಎನ್ನುವುದು ಗಮನಾರ್ಹ.
ಬಿಜೆಪಿ ಬಿಟ್ಟ ಬಳಿಕ ಜೆಡಿಎಸ್ ಪಕ್ಷ ಸೇರ್ಪಡೆಗಾಗಿ ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯನ್ನು ಸೊಗಡು ಶಿವಣ್ಣ ಭೇಟಿಯಾಗಿದ್ದರು. ಆದರೆ, ಇದೀಗ ಯಾವುದೇ ಪಕ್ಷ ಸೇರದೆ ಪಕ್ಷೇತರನಾಗಿ ಕಣಕ್ಕಿಳಿದಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸೊಗಡು ಶಿವಣ್ಣ, "ತಮ್ಮ ಬೆಂಬಲಿಗರು ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಪುನಃ ಬಿಜೆಪಿ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದೇ ನನ್ನ ಜೀವನದ ಕೊನೆಯ ಚುನಾವಣೆ," ಎಂದು ಹೇಳಿದ್ದಾರೆ.
"ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಮತದಾರರನ್ನು ಖರೀದಿ ಮಾಡುತ್ತಿದ್ದಾರೆ. ನಾನು ಮತಗಳನ್ನು ಹಣದಿಂದ ಕೊಂಡುಕೊಳ್ಳುವುದಿಲ್ಲ. ಮತ ಭಿಕ್ಷೆ ಮಾಡುತ್ತೇನೆ. ನನ್ನ ಸ್ವಾಭಿಮಾನವನ್ನು ಪಕ್ಕಕ್ಕಿಟ್ಟು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಖರೀದಿ ರಾಜಕಾರಣ ಮಾಡುವುದಿಲ್ಲ. ಎರಡು ಜೋಳಿಗೆ ಹಿಡಿದು ಜನರ ಬಳಿಗೆ ಹೋಗುತ್ತೇನೆ. ಎದುರಾಳಿಗಳಿಗೆ ತಾಕತ್ತಿದ್ದರೆ ಸೀರೆ, ಹಣ, ಕುಕ್ಕರ್ ಬಿಟ್ಟು ಮತ ಪಡೆಯಲಿ," ಎಂದು ಸವಾಲು ಹಾಕಿದರು.

"ಭ್ರಷ್ಟಾಚಾರದ ಹಣವನ್ನು ತಂದು ಇಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ. ಕೆಲವರು ಹಣ, ಸೀರೆ ಕೊಟ್ಟು, ದೇವರ ಮೇಲೆ ಪ್ರಮಾಣ ಮಾಡಿಸುತ್ತಿದ್ದಾರೆ. ಇಂತಹವರಿಗೆ ಮತದಾರರು ಸರಿಯಾದ ಪಾಠ ಕಲಿಸಬೇಕು ಮತ್ತು ಮತದಾರರು ಸ್ವಾಭಿಮಾನದಿಂದ ಯಾವ ಆಮಿಷಗಳಿಗೆ ಬಲಿಯಾಗಾದೆ ಮತ ಚಲಾಯಿಸಬೇಕು," ಎಂದು ಸೊಗಡು ಶಿವಣ್ಣ ತಿಳಿಸಿದ್ದರು.
ಇದೀಗ ತುಮಕೂರು ನಗರ ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಜ್ಯೋತಿ ಗಣೇಶ್ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ನಿಂದ ಇಕ್ಬಾಲ್ ಅಹ್ಮದ್ ಕಣಕ್ಕಿಳಿಯಲಿದ್ದಾರೆ. ಇನ್ನು ಜೆಡಿಎಸ್ನಿಂದ ಗೋವಿಂದರಾಜು ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದ್ದರೆ, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಅಂತಿಮ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications