'ಜ್ಯೋತಿಗಣೇಶ್, ಜಿಎಸ್ ಬಿ ಹಿಂಸೆಗೆ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು'
ತುಮಕೂರು, ಏಪ್ರಿಲ್ 25 : "ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿಗಣೇಶ್ ಕೊಟ್ಟ ಹಿಂಸೆಗೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಧೈರ್ಯದಿಂದ ಧೃತಿಗೆಡದೇ ಪರಿಸ್ಥಿತಿ ಎದುರಿಸಿದ್ದೇನೆ" ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಇಲ್ಲಿ ಬುಧವಾರ ಹೇಳಿದರು.
ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಮೌನಕ್ಕೆ ಶರಣಾಗಿದ್ದ ಸೊಗಡು ಶಿವಣ್ಣ ಕೊನೆಗೂ ಮೌನ ಮುರಿದಿದ್ದಾರೆ. ಟಿಕೆಟ್ ವಂಚಿತರಾದ ಮೇಲೆ ಶಿವಣ್ಣ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ದೂರ ಉಳಿದಿದ್ದರು. ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಸೊಗಡು ಶಿವಣ್ಣ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ತಟಸ್ಥನಾಗಿರಲು ನಿರ್ಧರಿಸಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಲ್ಲಿ ಸಕ್ರಿಯನಾಗುತ್ತೇನೆ. ಯಾರೇ ಏನೇ ಹೇಳಿದರೂ ಪಕ್ಷ ತೊರೆಯುವ ಪ್ರಶ್ನೆ ಇಲ್ಲ ಎಂದು ಅವರು ಹೇಳಿದರು.

ಯಾವ ನಾಯಕರೂ ನನ್ನ ಮನವೊಲಿಸುವ ಪ್ರಯತ್ನ ಮಾಡುವುದು ಬೇಡ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದಯವಿಟ್ಟು ನನ್ನ ಮನೆಗೆ ಬರುವುದು ಬೇಡ. ಚುನಾವಣೆ ಮುಗಿದ ಬಳಿಕ ನಾನೇ ಅವರ ಮನೆಗೆ ಹೋಗಿ ಮಾತಾಡುತ್ತೇನೆ ಎಂದು ಕೈ ಮುಗಿದು ಕೇಳಿಕೊಂಡರು.












Click it and Unblock the Notifications