ವರಸೆ ಬದಲಿಸಿದ ಪರಮೇಶ್ವರ್, ದೇವೇಗೌಡರ ಸ್ಪರ್ಧೆಗೆ ಸ್ವಾಗತ
ತುಮಕೂರು, ಮಾರ್ಚ್ 25: ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗಿದ್ದಕ್ಕೆ ಬಹು ಅಸಮಾಧಾನಗೊಂಡಿದ್ದ ಪರಮೇಶ್ವರ್ ಅವರು ಹಠಾತ್ತನೆ ತಣ್ಣಗಾಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಿನ್ನೆ-ಮೊನ್ನೆಯ ವರೆಗೆ ತುಮಕೂರು ಕ್ಷೇತ್ರ ಕಾಂಗ್ರೆಸ್ಗೆ ಬೇಕು, ಹಾಲಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಲೇ ಬೇಕು ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಪರಮೇಶ್ವರ್ ಅವರು ಇಂದು ವರಸೆ ಬದಲಾಯಿಸಿದ್ದು, ದೇವೇಗೌಡ ಅವರಿಗೆ ಬಹುಪರಾಕ್ ಹೇಳಿದ್ದಾರೆ.
ದೇವೇಗೌಡ ಅವರು ತುಮಕೂರಿನಿಂದ ಸ್ಪರ್ಧಿಸುತ್ತಿರುವುದ ಐತಿಹಾಸಿಕ ನಿರ್ಣಯ ಎಂದು ಬಣ್ಣಿಸಿರುವ ಅವರು, ದೇವೇಗೌಡ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಪರಮೇಶ್ವರ್ ಅವರು ಸುದ್ದಿಗೋಷ್ಠಿ ಕರೆದು ಈ ವಿಷಯಗಳನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ.

ದೇವೇಗೌಡರು ಸ್ಪರ್ಧಿಸುತ್ತಿರುವುದು ಸುಕೃತ
ದೇವೇಗೌಡ ಅವರು ರಾಷ್ಟ್ರ ರಾಜಕಾರಣದ ಮುತ್ಸದಿ, ಅವರು ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ, ಹಲವು ಬಾರಿ ಗೆದ್ದಿರುವ ಅವರು, ಹಾಸನದ ಬದಲಿಗೆ ನಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದು ನಮ್ಮ ಸುಕೃತ ಎಂದು ಪರಮೇಶ್ವರ್ ಹೇಳಿದ್ದಾರೆ.

'ರಾಹುಲ್ ಗಾಂಧಿ ಸೂಚನೆ ಪಾಲಿಸಿದ್ದೇವೆ'
ರಾಹುಲ್ ಗಾಂಧಿ ಸೂಚನೆಯಂತೆ ತುಮಕೂರನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ದೇವೇಗೌಡ ಅವರೇ ಇಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಅಂದಾಜು ನಮಗೆ ಇರಲಿಲ್ಲ, ತುಮಕೂರು ಮತದಾರರು ದೇವೇಗೌಡ ಅವರನ್ನು ಗೆಲ್ಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಪರಮೇಶ್ವರ್ಗೆ ತೀವ್ರ ಅಸಮಾಧಾನ
ತುಮಕೂರನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದಕ್ಕೆ ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ತುಮಕೂರನ್ನು ವಾಪಸ್ ಬಿಟ್ಟುಕೊಡುವಂತೆ ಕೇಳಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.

ಇಂದು ನಾಮಪತ್ರ ಸಲ್ಲಿಕೆ
ತುಮಕೂರಿನಿಂದ ಇಂದು ದೇವೇಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ. ಅವರ ವಿರುದ್ಧವಾಗಿ ಮುದ್ದಹನುಮೇಗೌಡ ಅವರು ಸಹ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಅವರು ದೇವೇಗೌಡ ಅವರ ವಿರುದ್ಧ ಸೆಣೆಸಲಿದ್ದಾರೆ.











Click it and Unblock the Notifications