ದೇವಾಲಯ ಓಪನ್: ಶಬರಿಮಲೆ ಯಾತ್ರೆಗೆ ಹೋಗುವವರಿಗೆ ಈ ಮಾಹಿತಿ ತಿಳಿದಿರಲಿ
ತಿರುವನಂತಪುರಂ, ನವೆಂಬರ್ 14: ಕೇರಳದಲ್ಲಿ ಪವಿತ್ರ ವಾರ್ಷಿಕ ಮಂಡಲಂ ಮಕರವಿಲಕ್ಕು ಅವಧಿಗಾಗಿ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನ ನ.15ರಿಂದ ಮತ್ತೆ ಓಪನ್ ಮಾಡಲಾಗುತ್ತಿದೆ. ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಭಕ್ತರ ದಂಡು ಹರಿದುಬರಲಿದ್ದು, ಈ ಸಂದರ್ಭದಲ್ಲಿ ಯಾವುದೇ ಕೋವಿಡ್ 19 ಇರುವ ವ್ಯಕ್ತಿ ದೇವಸ್ಥಾನಕ್ಕೆ ಬಾರದಂತೆ ತಡೆಯಲು ವಿಸ್ತೃತ ವ್ಯವಸ್ಥೆ ಮಾಡಿರುವುದಾಗಿ ಕೇರಳ ಸರ್ಕಾರ ತಿಳಿಸಿದೆ.
ಇದೇ ಮೊದಲ ಬಾರಿಗೆ ಸಂಪೂರ್ಣ ಯಾತ್ರಾಸ್ಥಳವು ವರ್ಚುವಲ್ ಸರದಿ ವ್ಯವಸ್ಥೆಗ ಒಳಪಟ್ಟಿದೆ. ಹೀಗಾಗಿ ಸಾಮಾನ್ಯವಾಗಿ ಕಾಣಿಸುವ ಭಾರಿ ಜನಸಂದಣಿಗೆ ಕಡಿವಾಣ ಹಾಕಲಾಗಿದೆ ಎಂದು ಮುಜರಾಯಿ ಖಾತೆ ಸಚಿವ ಕಡಕಪಲ್ಲಿ ಸುರೇಂದ್ರನ್ ಅವರು ಶುಕ್ರವಾರ ದೇವಸ್ಥಾನದಲ್ಲಿ ನಡೆಯುತ್ತಿರುವ ಅಂತಿಮ ಸಿದ್ಧತೆಗಳ ಪರಾಮರ್ಶ ಸಂಬಂಧ ನಡೆಸಿದ ಉನ್ನತ ಮಟ್ಟದ ಸಭೆಯ ಬಳಿಕ ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಯಾತ್ರೆಯು ಸುಗಮವಾಗಿ ಸಾಗಲು ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ದೇವಸ್ಥಾನಕ್ಕೆ ಬರುವ ಪ್ರತಿ ಭಕ್ತರೂ ಕಳೆದ 24 ಗಂಟೆಯ ಒಳಗೆ ಪಡೆದುಕೊಂಡ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿಡಬೇಕು. ಮುಂದೆ ಓದಿ.

ಸ್ಥಳದಲ್ಲಿಯೇ ತಪಾಸಣೆ
ಶಬರಿಮಲೆಯ ಬೇಸ್ ಕ್ಯಾಂಪ್ಗಳಾದ ಪಂಪಾ ಮತ್ತು ನಿಲಕ್ಕಲ್ಗಳಲ್ಲಿ ಕೋವಿಡ್ 19 ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದ್ದು, ಭಕ್ತರು ಚಾರಣಕ್ಕೂ ಮುನ್ನ ಪರೀಕ್ಷೆಗೆ ಒಳಪಡಿಸಲು ನೆರವು ನೀಡುತ್ತವೆ. ಇದಲ್ಲದೆ ತಿರುವನಂತಪುರಂ, ತಿರುವಲ್ಲ, ಚೆಂಗನೂರು ಮತ್ತು ಕೊಟ್ಟಾಯಂಗಳಲ್ಲಿನ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಅನೇಕ ಕಡೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಬರುವ ಭಕ್ತರಿಗೆ ಆಂಟಿಜೆನ್ ಪರೀಕ್ಷೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರಿಗೆ ಚಿಕಿತ್ಸೆ ಸೌಲಭ್ಯ
ದರ್ಶನದ ವೇಳೆ ದೈಹಿಕ ಅಂತರ ಕಾಪಾಡಿಕೊಳ್ಳಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ಭಕ್ತರಿಗೂ ನಿರ್ದಿಷ್ಟ ಸಮಯ ಮೀಸಲಿಡಲಾಗುತ್ತದೆ. 60-65 ವರ್ಷದವರು ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರ ತರಬೇಕು. ಇತರೆ ರಾಜ್ಯಗಳಿಂದ ಬಂದವರು ಸೇರಿದಂತೆ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದವರಿಗೆ ನೆಗೆಟಿವ್ ಬರುವವರೆಗೂ ಅಲ್ಲಿಯೇ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಭಕ್ತರ ಬೇಡಿಕೆ ಆಧಾರದಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಚಾರಣದ ವೇಳೆ ಮಾಸ್ಕ್ ಕಡ್ಡಾಯವಲ್ಲ
ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರು ಚಾರಣ ಮಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಅಧಿಕ ದೈಸಹಿಕ ಚಟುವಟಿಕೆ ಸಂದರ್ಭದಲ್ಲಿ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಬೇಕಾಗುತ್ತದೆ. ಅದಕ್ಕೆ ಅನುಗುಣವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಭಕ್ತರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
Recommended Video

ಮಾಸ್ಕ್ ಸಂಗ್ರಹಕ್ಕೆ ವ್ಯವಸ್ಥೆ
ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್ ಸಹಿತ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಬಳಸಿದ ಮಾಸ್ಕ್ಗಳನ್ನು ಎಸೆಯುವಂತಿಲ್ಲ. ಅವುಗಳ ಸಂಗ್ರಹ ಮತ್ತು ಮರುಬಳಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications