ಶಬರಿಮಲೆ: ಡಿ.30 ರಿಂದ 5 ಸಾವಿರ ಭಕ್ತರಿಗೆ ಪ್ರವೇಶ ಅವಕಾಶ
ಶಬರಿಮಲೆ(ಕೇರಳ), ಡಿ. 29: ಮೊದಲ ಹಂತದ ಶಬರಿಮಲೆ ಯಾತ್ರೆಯ ಮಂಡಲ ಪೂಜೆ ಸಂಪನ್ನಗೊಂಡಿದ್ದು, ಮಕರವಿಳಕ್ಕು ಯಾತ್ರೆಯ 41 ದಿನಗಳ ಸೀಸನ್ ಶುರುವಾಗಲಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆಗೆ ವಿಧಿಸಲಾಗಿರುವ ಗರಿಷ್ಠ ಮಿತಿಯನ್ನು ಹೆಚ್ಚಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದ್ದು, ತಿಳಿದಿರಬಹುದು. ಡಿಸೆಂಬರ್ 30ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಸಂಜೆ 5 ರ ನಂತರ ದೇಗುಲದ ಬಾಗಿಲು ಓಪನ್ ಆಗಲಿದೆ.
ಶಬರಿಮಲೆ: ಮಾರ್ಗಸೂಚಿ ಪರಿಷ್ಕರಣೆ, ಭಕ್ತರು ಪಾಲಿಸಬೇಕಾಗಿದ್ದಿಷ್ಟು
ಡಿಸೆಂಬರ್ 26ರ ಮಂಡಲ ಪೂಜೆ ನಂತರ ದೇವಸ್ಥಾನವನ್ನು ಮುಚ್ಚಲಿದ್ದು, ಡಿಸೆಂಬರ್ 31 ರಿಂದ ಜನವರಿ 19ರ ತನಕ ಮಕರವಿಳಕ್ಕು ಹಬ್ಬದ ಋತು ಆರಂಭವಾಗಲಿದೆ. ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಿ, ಕೊವಿಡ್ 19 ನೆಗಟಿವ್ ಇದ್ದ ಭಕ್ತರು ಮಾತ್ರ ಶಬರಿ ಬೆಟ್ಟವನ್ನೇರಬಹುದಾಗಿದೆ. ಈ ಮುಂಚೆ ಆಂಟಿಜನ್ ಪರೀಕ್ಷೆ ವರದಿಯಲ್ಲಿ ನೆಗಟಿವ್ ಎಂದರೆ ಬಂದರೆ ಸಾಕಿತ್ತು. ಆದರೆ, ಈಗ ಹೊಸ ನಿಬಂಧನೆ ಹಾಕಲಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ 1000 ಮಂದಿ ಭಕ್ತರಿಗೆ ಮಾತ್ರ ಬರಲು ಅವಕಾಶ ನೀಡಲಾಗಿತ್ತು. ಈ ಸಂಖ್ಯೆಯನ್ನು ವಾರಾಂತ್ಯದಲ್ಲಿ 2,000ಕ್ಕೇರಿಸಲಾಯಿತು. ಆದರೆ, ಆದಾಯ ಕುಸಿತ ಕಂಡಿದ್ದರಿಂದ 2000 ದಿಂದ 3,000ಕ್ಕೇರಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿತು. ಕೇರಳ ಹೈಕೋರ್ಟ್ ಕೂಡಾ ಭಕ್ತರ ಸಂಖ್ಯೆಯನ್ನು 5,000ಕ್ಕೇರಿಸಲು ಅನುಮತಿ ನೀಡಿ ಆದೇಶ ಹೊರಡಿಸಿತು.
ಪ್ರತಿದಿನ 5000ಕ್ಕೂ ಅಧಿಕ ಭಕ್ತರ ಪ್ರವೇಶ, ದರ್ಶನಕ್ಕೆ ಅನುಮತಿ ನೀಡಿರುವ ಹೈಕೋರ್ಟ್ ಆದೇಶವನ್ನು ಕೇರಳ ಸರ್ಕಾರ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. 5000ಕ್ಕೂ ಅಧಿಕ ಭಕ್ತರು ದರ್ಶನ ಪಡೆಯುವುದರಿಂದ ದೇಗುಲದ ಆದಾಯದಲ್ಲಿ ಅಂದಾಜು 50 ಲಕ್ಷ ರು ನಷ್ಟು ಏರಿಕೆ ಕಂಡು ಬಂದಿದೆ ಎಂದು ಮಂಡಳಿ ಅಧ್ಯಕ್ಷ ಎನ್ ವಾಸು ಹೇಳಿದ್ದಾರೆ.