ಕೇರಳ ಸಿಎಂ ಆಗಲು ಸಿದ್ಧ ಎಂದ ಮೇಟ್ರೋಮ್ಯಾನ್ ಶ್ರೀಧರನ್
ತಿರುವನಂತಪುರಂ, ಫೆಬ್ರವರಿ 19: ಮೆಟ್ರೋ ಮ್ಯಾನ್ ಎಂದೇ ಖ್ಯಾತರಾಗಿರುವ ಇ ಶ್ರೀಧರನ್ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಲು ಮುಂದಾಗಿದ್ದಾರೆ. ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದಾರೆ ಎಂಬ ಸುದ್ದಿ ಖಚಿತವಾಗಿದೆ. ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ಆಗಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಿದ್ಧ ಎಂದು 88 ವರ್ಷ ವಯಸ್ಸಿನ ಕನಸುಗಾರ ಶ್ರೀಧರನ್ ಹೇಳಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದರೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು, ಸಾಲದ ಸುಳಿಯಿಂದ ರಾಜ್ಯ ಹೊರ ಬರಲು ಬೇಕಾದ ಮಾರ್ಗಗಳನ್ನು ಕಂಡುಕೊಳ್ಳಲಾಗುವುದು ಎಂದು ಶ್ರೀಧರನ್ ಹೇಳಿದ್ದಾರೆ.
ಕೇರಳದಲ್ಲಿ ಭಾನುವಾರ(ಫೆ.21)ದಂದು ನಡೆಯಲಿರುವ ವಿಜಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಶ್ರೀಧರನ್ ಅವರು ಅಧಿಕೃತವಾಗಿ ಕೇಸರಿ ಪಡೆಯನ್ನು ಫೆಬ್ರವರಿ 25ರಂದು ಸೇರಲಿದ್ದಾರೆ ಎಂದು ಸುದ್ದಿ ಬಂದಿದೆ. 88 ವರ್ಷ ವಯಸ್ಸಿನ ಶ್ರೀಧರನ್ ಅವರಿಗೆ ಭಾರತ ಸರ್ಕಾರದಿಂದ 2001ರಲ್ಲಿ ಪದ್ಮಶ್ರೀ, 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶ್ರೀಧರನ್ ಪರಿಚಯ
1932ರಲ್ಲಿ ಆಗಿನ ಬ್ರಿಟಿಷರ ಆಳ್ವಿಕೆಯಲ್ಲಿ ಮಲಬಾರ್ ಜಿಲ್ಲೆಯ ಕರುಕಪುತ್ತೂರಿನಲ್ಲಿ ಜನಿಸಿದರು. ಪಾಲಕ್ಕಾಡ್ ನ ವಿಕ್ಟೋರಿಯಾ ಕಾಲೇಜು ಹಾಗ್ ಆಂಧ್ರದ ಕಾಕಿನಾಡದಲ್ಲಿ ಎಂಜಿನಿಯರಿಂಗ್ ಮುಗಿಸಿದ ಅವರು, ಭಾರತೀಯ ಎಂಜಿನಿಯರಿಂಗ್ ಸೇವೆಗೆ ಆಯ್ಕೆಯಾದರು.
ಕೋಲ್ಕತ್ತ ಮೆಟ್ರೋದ ಡೆಪ್ಯೂಟಿ ಚೀಫ್ ಎಂಜಿನಿಯರ್ ಆಗಿ 1970ರಲ್ಲಿ ನೇಮಕವಾದರು. ಡಿಸೈನ್ ಹಾಗೂ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿದ್ದ ಅವರು, ಆ ಯೋಜನೆ 1979ರಲ್ಲಿ ಪೂರ್ಣಗೊಳಿಸಿದರು. ಆ ನಂತರ ಕೊಚ್ಚಿ ಶಿಪ್ ಯಾರ್ಡ್ ನ ನಿರ್ದೇಶಕರನ್ನಾಗಿ ಮಾಡಲಾಯಿತು. ಅವರ ನಾಯಕತ್ವದಲ್ಲೇ ಶಿಪ್ ಯಾರ್ಡ್ ನಲ್ಲಿ ಮೊದಲು ಹಡಗು ನಿರ್ಮಾಣವಾಯಿತು.

ದೆಹಲಿ ಮೆಟ್ರೋ ನಿಗದಿತ ಅವಧಿಯಲ್ಲಿ ಪೂರ್ಣ
2011ರಲ್ಲಿ ದೆಹಲಿ ಮೆಟ್ರೋ ರೈಲು ಮುಖ್ಯಸ್ಥರಾಗಿ ನಿವೃತ್ತರಾಗುವುದಕ್ಕೂ ಮುನ್ನ ದೆಹಲಿ ಸೇರಿದಂತೆ ಜೈಪುರ, ಲಕ್ನೋ ಹಾಗೂ ಕೊಚ್ಚಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು.
ನಿವೃತ್ತಿ ನಂತರವೂ ಆಗಿನ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್ ಸೇವೆ ವಿಸ್ತರಣೆ ಮಾಡಿದ್ದರು.ಕೊಂಕಣ್ ರೈಲ್ವೆಯ ಜನರಲ್ ಮ್ಯಾನೇಜರ್ ಮಾಡಲಾಯಿತು. ಅಲ್ಲಿ ಹಲವು ಯೋಜನೆಗಳನ್ನು ಶ್ರೀಧರನ್ ಕೈಗೆತ್ತಿಕೊಂಡು ಅಚ್ಚುಕಟ್ಟಾಗಿ ಪೂರೈಸಿದ್ದಾರೆ.

ರಾಜಕೀಯ, ಆಡಳಿತಕ್ಕಿಂತ ರಾಜ್ಯದ ಅಭಿವೃದ್ಧಿ ಮುಖ್ಯ
ರಾಜಕೀಯ, ಆಡಳಿತಕ್ಕಿಂತ ರಾಜ್ಯದ ಅಭಿವೃದ್ಧಿ ಮುಖ್ಯವಾಗಿದೆ ಹೀಗಾಗಿ ನಾನು ಸಾಂವಿಧಾನಿಕ ಹುದ್ದೆ ಹಾಗೂ ಆಡಳಿತವನ್ನು ಗೌರವಿಸುತ್ತಾ, ರಾಜ್ಯದ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ರೂಪಿಸಿದ್ದೇನೆ ಎಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಕೈಗಾರಿಕೆ ಅಭಿವೃದ್ಧಿ ಆದ್ಯ ವಿಷಯವಾಗಲಿದೆ ಎಂದಿದ್ದಾರೆ. ರಾಜ್ಯವು ಸಾಲದ ಹೊರೆ ಹೊತ್ತುಕೊಂಡಿದೆ, ಸಾಲ ಮುಕ್ತವಾಗಿ ಸ್ವಾವಲಂಬಿ ಬದುಕು ಕಾಣಲು ಕೇರಳದಲ್ಲಿ ಬೇಕಾದ ನೈಸರ್ಗಿಕ ಸಂಪತ್ತು ಹಾಗೂ ಮಾನವ ಸಂಪನ್ಮೂಲವಿದೆ ಎಂದು ಕೇರಳದ ಪೊನ್ನಾನಿಯಿಂದ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರತಿಯೊಬ್ಬ ಮಲಯಾಳಿಗಳ ಮೇಲೆ 1.2 ಲಕ್ಷ ಸಾಲದ ಹೊರೆ ಇದೆಯೆಂದರೆ ಸರ್ಕಾರ ಯಾವ ರೀತಿ ದಿವಾಳಯಾಗಿದೆ ಎಂಬುದನ್ನು ಯೋಚಿಸಿ, ಇದಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಮುಖ್ಯವಾಗಿದೆ ಎಂದರು.

ಬಿಜೆಪಿ ಬಯಸಿದರೆ ಚುನಾವಣೆ ಸ್ಪರ್ಧಿಸಲು ಸಿದ್ಧ
ಎಲ್ ಡಿ ಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿದ್ದು ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಬಿಜೆಪಿ ಬಯಸಿದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದರು ಹೇಳಿದರು. ಸಿಎಂ ಆಗಲು ಕೂಡಾ ಸಿದ್ಧ, ನನ್ನ ಕನಸಿನ ಕೇರಳಕ್ಕಾಗಿ ನಾನು ರೂಪಿಸಿರುವ ಯೋಜನೆಗಳು ಸಾಕಾರಗೊಳ್ಳಬೇಕಾದರೆ ಉನ್ನತ ಹುದ್ದೆಯಲ್ಲಿರಬೇಕಾಗುತ್ತದೆ. ನನ್ನ ವೃತ್ತಿಗೆ ಸಂಬಂಸಿದ ನಿಗದಿತ ಕಾರ್ಯಕ್ರಮಗಳೆಲ್ಲವೂ ಈ ತಿಂಗಳು ಮುಕ್ತಾಯವಾಗಲಿದ್ದು, ರಾಜಕೀಯದ ಹಾದಿಯ ಮೂಲಕ ಕೇರಳದ ಅಭಿವೃದ್ಧಿಗಾಗಿ ಪುನರ್ ನಿರ್ಮಾಣಕ್ಕಾಗಿ ಶ್ರಮಿಸಲು ಬಯಸಿದ್ದೇನೆ ಎಂದು ಹೇಳಿದರು.

ಬಿಜೆಪಿಯನ್ನು ಆಯ್ಕೆ ಮಾಡಲು ಏನು ಕಾರಣ
ಕೇಂದ್ರದಲ್ಲಿ ಬಿಜೆಪಿ ಸ್ಥಿರವಾದ ಸರ್ಕಾರ ಹೊಂದಿದೆ. ಮೋದಿ ಅವರ ಕಾರ್ಯ ವೈಖರಿಯನ್ನು ಹತ್ತಿರದಿಂದ ಬಲ್ಲೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇರಳದಲ್ಲಿ ಕೈಗಾರಿಕೆಗಳನ್ನು ಕಾಣಬಹುದು. ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯ. ಕಳೆದ 20 ವರ್ಷಗಳಲ್ಲಿ ಎಲ್ ಡಿಎಫ್ ಹಾಗೂ ಯುಡಿಎಫ್ ಸರ್ಕಾರಗಳು ಒಂದೇ ಒಂದು ದೊಡ್ಡ ಕೈಗಾರಿಕಾ ಸಂಸ್ಥೆಯನ್ನು ರಾಜ್ಯದಲ್ಲಿ ಹೂಡಿಕೆ ಮಾಡಲು ಬಿಟ್ಟಿಲ್ಲ. ರಾಜ್ಯದ ಅಭಿವೃದ್ಧಿ ಬಯಸುವವರಿಗೆ ಸದ್ಯಕ್ಕೆ ಬಿಜೆಪಿಯೇ ಉತ್ತರ. ಕೇರಳ ಬಿಜೆಪಿಯಲ್ಲಿರುವ ಆಂತರಿಕ ತಿಕ್ಕಾಟದ ಬಗ್ಗೆ ಬಲ್ಲೆ, ಆದರೆ, ಸುಖಾಸುಮ್ಮನೆ ಮೋದಿ ಸರ್ಕಾರ ವಿರೋಧಿಸುವುದರಿಂದ ಅಸಹಿಷ್ಣುತೆ ತೋರುವುದರಿಂದ ನಮ್ಮ ರಾಜ್ಯಕ್ಕೆ ನಷ್ಟ ಎಂದು ವಿವರಿಸಿದ್ದಾರೆ.












Click it and Unblock the Notifications