ಕೇರಳ ಚುನಾವಣೆ ಸಮೀಪದಲ್ಲೇ ರಾಜೀನಾಮೆ ನೀಡಿದ ಇಬ್ಬರು ಶಾಸಕರು
ತಿರುವನಂತಪುರಂ, ಮಾರ್ಚ್ 19: ಕೇರಳ ಕಾಂಗ್ರೆಸ್ನ ಶಾಸಕರಾದ ಪಿ.ಜೆ. ಜೋಸೆಫ್ ಮತ್ತು ಮಾನ್ಸ್ ಜೋಸೆಫ್ ಶುಕ್ರವಾರ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅನರ್ಹತೆಯ ಸಮಸ್ಯೆ ಎದುರಿಸುವ ಸಾಧ್ಯತೆ ಇರುವುದರಿಂದ ಇಬ್ಬರೂ ಸ್ಪೀಕರ್ಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ಇಬ್ಬರೂ ಮುಖಂಡರು 2016ರ ವಿಧಾನಸಭೆ ಚುನಾವಣೆಯಲ್ಲಿ ಎರಡು ಎಲೆಯ ಚಿಹ್ನೆಯೊಂದಿಗೆ ಕೇರಳ ಕಾಂಗ್ರೆಸ್ (ಎಂ) ನಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಕೇರಳ ಕಾಂಗ್ರೆಸ್ (ಎಂ) ಬಳಿಕ ಜೋಸೆಫ್ ಮತ್ತು ಜೋಸ್ ಕೆ ಮಣಿ ಎಂದು ಇಬ್ಭಾಗವಾಗಿತ್ತು. ಎರಡು ಎಲೆಯ ಚಿಹ್ನೆಯನ್ನು ಜೋಸೆಫ್ಗೆ ನೀಡಲು ಚುನಾವಣಾ ಆಯೋಗ ನಿರಾಕರಿಸಿತ್ತು. ಇದರ ಬಳಿಕ ಜೋಸೆಫ್ ಬಣವು ಪಿ.ಸಿ. ಥಾಮಸ್ ನೇತೃತ್ವದ ಕೇರಳ ಕಾಂಗ್ರೆಸ್ನೊಂದಿಗೆ ವಿಲೀನಗೊಂಡಿತ್ತು.
ಕೇರಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಂದೇ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ಪಿ.ಸಿ. ಥಾಮಸ್ ಪತ್ರ ಬರೆದಿದ್ದರು. ಆದರೆ ಅದನ್ನು ಚುನಾವಣಾ ಆಯೋಗ ಪರಿಗಣಿಸಿಲ್ಲ. ಜೋಸ್ ಕೆ ಮಣಿ ಬಣವು ಎರಡು ಎಲೆ ಚಿಹ್ನೆ ಬಳಸಲು ಆಯೋಗ ಅನುಮತಿ ನೀಡಿತ್ತು. ಇದನ್ನು ಜೋಸೆಫ್ ಬಣ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಆದರೆ ಅದರ ಅರ್ಜಿ ವಜಾಗೊಂಡಿತ್ತು.

ಈಗ ಪಕ್ಷವು ವಿಲೀನಗೊಂಡಿರುವುದರಿಂದ ತಮಗೆ ಅನರ್ಹತೆಯ ಶಿಕ್ಷೆ ಎದುರಾಗಬಹುದು ಮತ್ತು ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಗದೆ ಇರಬಹುದು ಎಂದು ಮುನ್ನೆಚ್ಚರಿಕೆಯಿಂದ ಇಬ್ಬರೂ ಶಾಸಕರು ರಾಜೀನಾಮೆ ನೀಡಿದ್ದಾರೆ.












Click it and Unblock the Notifications