ಕೇರಳ ಚುನಾವಣೆ; ಪಿಣರಾಯಿ ವಿರುದ್ಧ ಕಣದಲ್ಲಿ ವಲಯಾರ್ ಸಂತ್ರಸ್ತ ಸಹೋದರಿಯರ ತಾಯಿ
ತಿರುವನಂತಪುರಂ, ಮಾರ್ಚ್ 16: 2017ರಲ್ಲಿ ಕೇರಳದ ಪಾಲಕ್ಕಾಡ್ನಲ್ಲಿ ಲೈಂಗಿಕ ಕಿರುಕುಳ ಸಂಬಂಧ ನಿಗೂಢವಾಗಿ ಸಾವನ್ನಪ್ಪಿದ್ದ ವಲಯಾರ್ ಸಹೋದರಿಯರ ತಾಯಿ ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಣ್ಣೂರು ಜಿಲ್ಲೆಯ ಧರ್ಮದಂ ವಿಧಾನಸಭಾ ಕ್ಷೇತ್ರದಿಂದ ತಾವು ಕಣಕ್ಕಿಳಿಯಲಿದ್ದು, ತಮ್ಮ ಮಕ್ಕಳಿಗೆ ನ್ಯಾಯ ದೊರೆಯದ ಕಾರಣ ಪ್ರತಿಭಟನಾ ರೂಪದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ನಾನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನಗೆ ಯಾವುದೇ ಸಂಘ ಪರಿವಾರ, ಪಕ್ಷಗಳ ಬೆಂಬಲ ಬೇಡ. ನನ್ನ ಮಕ್ಕಳಿಗೆ ನ್ಯಾಯ ಸಿಗಬೇಕು. ನನ್ನಂತೆ ಇರುವ ಎಷ್ಟೋ ಕುಟುಂಬಗಳ ಪರವಾಗಿ ಸ್ಪರ್ಧಿಸುತ್ತಿದ್ದೇನೆ. ವಲಯಾರ್ ಸಮರ ಸಮಿತಿ ಪ್ರತಿನಿಧಿಯಾಗಿ ಸ್ವತಂತ್ರವಾಗಿ ಕಣಕ್ಕಿಳಿಯಲಿದ್ದೇನೆ. ಈ ಮೂಲಕ ಮುಖ್ಯಮಂತ್ರಿಗಳ ಮುಂದೆ ನ್ಯಾಯ ಕೇಳುತ್ತಿದ್ದೇನೆ" ಎಂದು ಹೇಳಿದ್ದಾರೆ.

ಪಿಣರಾಯಿ ನೇತೃತ್ವದ ಸರ್ಕಾರ ಇಬ್ಬರು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣವನ್ನು ನಾಲ್ಕು ವರ್ಷವಾದರೂ ಸೂಕ್ತ ರೀತಿ ತನಿಖೆ ನಡೆಸಿಲ್ಲ ಎಂದು ಆರೋಪಿಸಿ ಧಿಕ್ಕಾರ ಕೂಗಿ ಈಚೆಗೆ ಪ್ರತಿಭಟನಾ ರೂಪವಾಗಿ ಸಂತ್ರಸ್ತ ಮಕ್ಕಳ ತಾಯಿ ತಲೆ ಬೋಳಿಸಿದ್ದರು. ಇದೇ ಜನವರಿ 26ರಿಂದ ನ್ಯಾಯಕ್ಕಾಗಿ ಪಾಲಕ್ಕಾಡ್ ನಲ್ಲಿ ಸತ್ಯಾಗ್ರಹ ಕೈಗೊಂಡಿದ್ದರು.
ಇದೀಗ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಕೇರಳದ 14 ಜಿಲ್ಲೆಗಳಲ್ಲಿ ಸುತ್ತಾಡಿ ಸರ್ಕಾರದ ಬಗ್ಗೆ ವಿವರಿಸುವೆ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?: ಕೇರಳದ ಪಾಲಕ್ಕಾಡ್ನಲ್ಲಿನ ವಲಯಾರ್ನಲ್ಲಿ ಕಟ್ಟಡ ಕಾರ್ಮಿಕರ ಇಬ್ಬರು ಹೆಣ್ಣು ಮಕ್ಕಳು ನಿಗೂಢ ರೀತಿ ಸಾವಿಗೀಡಾಗಿದ್ದರು. 2017ರ ಜನವರಿ 13ರಂದು 13 ವರ್ಷದ ಬಾಲಕಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದಾದ ಎರಡು ತಿಂಗಳ ನಂತರ ಮೃತ ಬಾಲಕಿ ಸಹೋದರಿಯೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ವಲಯಾರ್ ಸಹೋದರಿಯರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆದಿದ್ದವು.












Click it and Unblock the Notifications