'ಅಗ್ನಿಪಥ್' ವಿರೋಧಿಸಿ ಕೇರಳದಲ್ಲಿ ಬೃಹತ್ ಪ್ರತಿಭಟನೆ
ತಿರುವನಂತಪುರಂ, ಜೂ. 18: ಭಾರತೀಯ ಸೈನ್ಯದ ಮೂರು ಪಡೆಗಳಿಗೆ ಮೂರು ವಿಭಾಗಕ್ಕೂ ಸೈನಿಕರ ನೇಮಕಾತಿಗಾಗಿ ಕೇಂದ್ರ ಸರ್ಕಾರ ತಂದಿರುವ ಹೊಸ ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸುವ ನಿರ್ಧಾರದ ವಿರುದ್ಧ ನೂರಾರು ಯುವಕರು ಶನಿವಾರ ಕೇರಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದೇಶಸೇವೆಗೆ ಸೇರ್ಪಡೆಗೊಳ್ಳಲು ಕಾಯುತ್ತಿರುವ ಹೆಚ್ಚಿನ ಸಂಖ್ಯೆಯ ಸೇನಾ ಉದ್ಯೋಗ ಆಕಾಂಕ್ಷಿಗಳು ಬೆಳಗ್ಗೆ ತಿರುವನಂತಪುರ ನಗರದ ಹೃದಯಭಾಗದಲ್ಲಿರುವ ತಂಪನೂರ್ನಲ್ಲಿ ಜಮಾಯಿಸಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಅಧಿಕೃತ ನಿವಾಸಕ್ಕೆ ಮೆರವಣಿಗೆ ನಡೆಸಿದರು.
ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಯೋಜನೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರವು ತಮ್ಮ ನಿರ್ಧಾರವನ್ನು ಶೀಘ್ರವಾಗಿ ಹಿಂಪಡೆಯುವಂತೆ ಒತ್ತಾಯಿಸುವ ಫಲಕಗಳು ಮತ್ತು ಬ್ಯಾನರ್ಗಳನ್ನು ಅವರು ಹಿಡಿದಿದ್ದರು.

ಪ್ರತಿಭಟನಾನಿರತ ಯುವಕರು ದಕ್ಷಿಣ ರಾಜ್ಯದ ವಿವಿಧ ಭಾಗಗಳಿಂದ ಬಂದವರು ಎಂದು ವರದಿಯಾಗಿದೆ. ಕೇಂದ್ರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಮತ್ತು ಅವರಿಗೆ ನ್ಯಾಯವನ್ನು ಖಾತರಿಪಡಿಸುವವರೆಗೆ ನಾವು ಮುಷ್ಕರವನ್ನು ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಈ ವೇಳೆ ಹೇಳಿದರು.
ನಮ್ಮಲ್ಲಿ ಹಲವರು ಸೈನ್ಯಕ್ಕೆ ಸೇರಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತಮ್ಮ ಪದವಿ ವ್ಯಾಸಂಗವನ್ನು ಅರ್ಧಕ್ಕೆ ನಿಲ್ಲಿಸಿದ ನಂತರ ಪರೀಕ್ಷೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಕೇಂದ್ರವು ಈ ಯೋಜನೆಗೆ ಮುಂದಾದರೆ ನಾವು ಏನು ಮಾಡುಬೇಕು? ನಮ್ಮ ಭವಿಷ್ಯವು ಅಪಾಯದಲ್ಲಿದೆ. ಆದ್ದರಿಂದ ನಮಗೆ ನ್ಯಾಯ ಸಿಗುವವರೆಗೆ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.
ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗೆ ಸೇರ್ಪಡೆಗೊಳ್ಳಲು ಪ್ಯಾನ್- ಇಂಡಿಯಾ ಅರ್ಹತೆ ಆಧಾರಿತ ನೇಮಕಾತಿ ಯೋಜನೆಯಾದ ಅಗ್ನಿಪಥ್ ಯೋಜನೆಯನ್ನು ಕೇಂದ್ರವು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ದೇಶದ ಕೆಲವು ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ.

ಗುರುವಾರ ಮತ್ತು ಶುಕ್ರವಾರ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಾದ್ಯಂತ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಗಳು ಹರಡಿದ್ದು, ರೈಲುಗಳಿಗೆ ಬೆಂಕಿ ಹಚ್ಚಲಾಯಿತು. ಸಾರ್ವಜನಿಕರು ಮತ್ತು ಪೊಲೀಸ್ ವಾಹನಗಳ ಮೇಲೆ ದಾಳಿ ಮಾಡಲಾಯಿತು. ಈ ವೇಳೆ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.
ಶುಕ್ರವಾರ ತೆಲಂಗಾಣದ ಸಿಕಂದರಾಬಾದ್ನಲ್ಲಿ ನಡೆದ ಪ್ರತಿಭಟನೆಯ ವೇಳೆ 24 ವರ್ಷದ ವ್ಯಕ್ತಿಯೊಬ್ಬರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಯೋಜನೆಯಡಿ ತರಬೇತಿ ಅವಧಿ ಸೇರಿದಂತೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ 'ಅಗ್ನಿವೀರ್' ಆಗಿ ಸೇವೆ ಸಲ್ಲಿಸಲು ಯುವಕರಿಗೆ ಅವಕಾಶವನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.












Click it and Unblock the Notifications