ಕೇರಳದ ವಯನಾಡ್ನಿಂದ ರಾಹುಲ್ ಗಾಂಧಿ ಸ್ಪರ್ಧೆ?
ತಿರುವನಂತಪುರಂ, ಮಾರ್ಚ್ 23: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದಕ್ಷಿಣ ಭಾರತದಿಂದಲೇ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಅವರು ಕೇರಳದ ವಯನಾಡ್ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಈ ಕ್ಷೇತ್ರದಿಂದ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ. ಸಿದ್ದಿಕಿ ಅವರ ಹೆಸರನ್ನು ಪ್ರಕಟಿಸಲಾಗಿತ್ತು. ಈಗ ಸಿದ್ದಿಕಿ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ರಾಹುಲ್ ಗಾಂಧಿಗಾಗಿ ತಮ್ಮ ಸ್ಪರ್ಧೆಯನ್ನು ತ್ಯಾಗ ಮಾಡಲು ಮುಂದಾಗಿದ್ದಾರೆ.
ರಾಹುಲ್ ಗಾಂಧಿ ಅವರು ಎಡಕಲ್ಲು ಗುಡ್ಡ ಖ್ಯಾತಿಯ ವಯನಾಡ್ನಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೇರಳ ಕಾಂಗ್ರೆಸ್ ಮುಖ್ಯಸ್ಥ ಮುಲ್ಲಪಳ್ಳಿ ರಾಮಚಂದ್ರನ್ ಶನಿವಾರ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿಯನ್ನು ತಮ್ಮ ಸ್ಪರ್ಧೆಯ ಕ್ಷೇತ್ರವನ್ನಾಗಿಸಿಕೊಂಡಿದ್ದರು. ಈ ಬಾರಿ ಅವರು ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಲಿದ್ದಾರೆ ಎಂದು ಹೇಳಲಾಗಿದೆ.
ರಾಹುಲ್ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧಿಸಬೇಕು ಎಂದು ರಾಜ್ಯದ ನಾಯಕರು ತೀವ್ರ ಒತ್ತಡ ಹೇರಿದ್ದರು. ತಮಿಳುನಾಡಿನಿಂದಲೂ ಅವರಿಗೆ ಆಹ್ವಾನ ನೀಡಲಾಗಿತ್ತು. ಬೆಂಗಳೂರು ಸೆಂಟ್ರಲ್, ಬೀದರ್ ಮತ್ತು ಮೈಸೂರು ಕ್ಷೇತ್ರಗಳಲ್ಲಿ ಒಂದನ್ನು ಅವರು ಆಯ್ದುಕೊಳ್ಳಬಹುದು ಎಂದು ನಿರೀಕ್ಷೆಯಿತ್ತು. ತಮಿಳುನಾಡಿನ ಶಿವಗಂಗಾ ಕ್ಷೇತ್ರದ ಹೆಸರೂ ಚಾಲ್ತಿಯಲ್ಲಿತ್ತು.
2014ರ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ವಾರಣಾಸಿ ಮತ್ತು ಬರೋಡಾ ಕ್ಷೇತ್ರಗಳಿಂದ ಸ್ಪರ್ಧಿಸಿದಾಗ, ರಾಹುಲ್ ಗಾಂಧಿ ಅವರೇ ಟೀಕಿಸಿದ್ದರು ಮತ್ತು ಒಂದು ಕ್ಷೇತ್ರದಿಂದ ಗೆಲ್ಲುವ ವಿಶ್ವಾಸವಿಲ್ಲವೆ ಎಂದು ವ್ಯಂಗ್ಯವಾಡಿದ್ದರು. ಇದೀಗ, ರಾಹುಲ್ ಅವರೇ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸುದ್ದಿಯ ಬಗ್ಗೆ ಏನು ಹೇಳುತ್ತಾರೆ?
ಅಂದ ಹಾಗೆ, ಉತ್ತರ ಪ್ರದೇಶದ ಅಮೇಥಿಯಿಂದ ಬಿಜೆಪಿಯ ಗಟ್ಟಿಗಿತ್ತಿ ಸ್ಮೃತಿ ಇರಾನಿ ಅವರ ವಿರುದ್ಧ ಮತ್ತೆ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ, ಈಬಾರಿ ಗೆಲುವು ಅಷ್ಟು ಸುಲಭವಾಗಿ ಸಿಗಲಾರದು ಅಥವಾ ಗೆಲವೇ ಸಿಗಲಾರದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಎರಡನೇ ಕ್ಷೇತ್ರ ಆಯ್ದುಕೊಳ್ಳುತ್ತಿದ್ದಾರಾ ರಾಹುಲ್?












Click it and Unblock the Notifications