ಭಾರೀ ಮಳೆಯಿಂದ ಕೇರಳದಲ್ಲಿ ಅನಾಹುತ; ಸತ್ತವರ ಸಂಖ್ಯೆ 68ಕ್ಕೆ ಏರಿಕೆ
ತಿರುವನಂತಪುರ, ಆಗಸ್ಟ್ 11: ಕೇರಳ ಪ್ರವಾಹಕ್ಕೆ ಸಾವಿನ ಸಂಖ್ಯೆ ಭಾನುವಾರ 68ಕ್ಕೆ ಏರಿದೆ. ಮಲಪ್ಪುರಂನ ಕವಲಪರ ಪ್ರದೇಶದಲ್ಲಿ ಸೇನೆ ನಿಯೋಜನೆ ಮಾಡಿದ್ದರೂ ಭಾರೀ ಪ್ರಮಾಣದ ಭೂ ಕುಸಿತಕ್ಕೆ ಶುಕ್ರವಾರ ಹತ್ತಾರು ಮಂದಿ ಸಿಲುಕಿಕೊಂಡಿದ್ದಾರೆ. ಮಳೆಯ ಪ್ರಮಾಣ ಕಡಿಮೆ ಆಗಿದ್ದರೂ ವಯನಾಡ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ.
ಕಳೆದ ವಾರ ಕೇರಳ ರಾಜ್ಯದಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಸತತ ಎರಡನೇ ವರ್ಷವೂ ಪ್ರವಾಹ ಪರಿಸ್ಥಿತಿ ತಲೆದೋರಿದೆ. 2.25 ಲಕ್ಷಕ್ಕೂ ಹೆಚ್ಚು ಮಂದಿ 1550 ನಿರಾಶ್ರಿತರ ಶಿಬಿರಗಳಲ್ಲಿ ಇದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ಪ್ರಾಕೃತಿಕ ವಿಕೋಪ ಸಂಭವಿಸಿರುವ ಇಂಥ ಹೊತ್ತಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು, ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ವಯನಾಡಿನ ಬಾನಸುರಸಾಗರ ಅಣೆಕಟ್ಟೆಯಿಂದ ಶನಿವಾರ ಮಧ್ಯಾಹ್ನದಿಂದ ಗೇಟ್ ಗಳನ್ನು ತೆರೆದು ನೀರು ಬಿಡಲಾಗುತ್ತಿದೆ. ಇನ್ನು ಭಾನುವಾರ ಸಂಜೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಕ್ಷೇತ್ರ ವಯನಾಡಿಗೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ.

ಭೂ ಸೇನೆ, ವಾಯು ಸೇನೆ ಹಾಗೂ ಎನ್ ಡಿಆರ್ ಎಫ್ ತಂಡಗಳಿಂದ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇನ್ನು ಕರ್ನಾಟಕದಲ್ಲೂ ಮಳೆಯ ಅನಾಹುತಕ್ಕೆ ಈ ತನಕ 31 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇದು ಸೋಮವಾರ ಬೆಳಗ್ಗೆ ತನಕ ಮುಂದುವರಿಯಲಿದೆ.

ಸಕಲೇಶಪುರ ಹಾಗು ಸುಬ್ರಹ್ಮಣ್ಯ ಮಧ್ಯೆ ರೈಲು ಸಂಚಾರವು ಭೂ ಕುಸಿತದ ಪರಿಣಾಮವಾಗಿ ಸಮಸ್ಯೆಗೆ ಈಡಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲು ಎಲ್ಲ ಸಿದ್ಧತೆ ಆಗಿದೆ. ಶನಿವಾರದಂದು ಭೂ ಸೇನೆ, ಭಾರತೀಯ ನೌಕಾ ಸೇನೆ ಹಾಗೂ ಎನ್ ಡಿ ಆರ್ ಎಫ್ ತಂಡದಿಂದ ಬೆಳಗಾವಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.












Click it and Unblock the Notifications