ಪತ್ನಿಯೊಂದಿಗೆ ವಿಶ್ವಪರ್ಯಟನೆಯಿಂದ ಖ್ಯಾತಿಯಾದ ಕೇರಳದ ಚಾಯ್ವಾಲಾ ನಿಧನ
ಕೊಚ್ಚಿ, ನವೆಂಬರ್ 19: ಪತ್ನಿಯೊಂದಿಗೆ ವಿಶ್ವಪರ್ಯಟನೆಗೆ ಹೋಗುವ ಮೂಲಕ ಸುದ್ದಿಯಾದ ಕೇರಳದ ಚಾಯ್ವಾಲಾ ಇಂದು ನಿಧನರಾಗಿದ್ದಾರೆ. 71 ವರ್ಷ ಪ್ರಾಯದ ವಿಜಯನ್ ಶುಕ್ರವಾರ ಮುಂಜಾನೆ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ.
ವಿಜಯನ್ ಹಾಗೂ ಅವರ ಪತ್ನಿ ಮೋಹನ ಕೊಚ್ಚಿಯ ಗಾಂಧಿ ನಗರದಲ್ಲಿ ಶ್ರೀ ಬಾಲಜಿ ಕಾಫಿ ಶಾಪ್ ಅನ್ನು ನಡೆಸುತ್ತಿದ್ದರು. ಕಾಫಿ ಶಾಪ್ನಿಂದ ಬಂದ ಆದಾಯದಿಂದಲೇ ಪತ್ನಿಯೊಂದಿಗೆ 26 ದೇಶಗಳನ್ನು ಸುತ್ತಿ ಖ್ಯಾತಿಯನ್ನು 71 ವರ್ಷ ಪ್ರಾಯದ ವಿಜಯನ್ ಹೊಂದಿದ್ದಾರೆ. ವಿಜಯನ್ ತನ್ನ ಪತ್ನಿ ಮೋಹನ ಹಾಗೂ ಇಬ್ಬರು ಪುತ್ರಿಯರು, ಅಳಿಯಂದಿರನ್ನು ಅಗಲಿದ್ದಾರೆ.
ದಂಪತಿಗಳು 2007 ರಲ್ಲಿ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಅವರು ಮೊದಲು ಈಜಿಪ್ಟ್ಗೆ ಭೇಟಿ ನೀಡಿದ್ದಾರೆ. ಈ ದಂಪತಿಗಳು ಒಟ್ಟು 26 ದೇಶಗಳಿಗೆ ಭೇಟಿ ನೀಡಿದ್ದಾರೆ. 1988 ರಲ್ಲಿ ಈ ದಂಪತಿಯು ಹಿಮಾಲಯಕ್ಕೆ ಕೂಡಾ ಹೋಗಿದ್ದರು. ಈ ವರ್ಷದ ಅಕ್ಟೋಬರ್ನಲ್ಲಿ ಅವರು ಕೊನೆಯ ಬಾರಿಗೆ ರಷ್ಯಾಕ್ಕೆ ಭೇಟಿ ನೀಡಿದ್ದಾರೆ. ನಂತರ ಜಪಾನ್ಗೆ ಭೇಟಿ ನೀಡಬೇಕು ಎಂದು ಈ ದಂಪತಿಗಳು ನಿರ್ಧಾರ ಮಾಡಿದ್ದರು. ಆದರೆ ಈಗ ವಿಜಯನ್ ನಿಧನ ಹೊಂದಿದ್ದಾರೆ. ದಂಪತಿಗಳು ಮಾಸ್ಕೋ, ಸೇಂಟ್ ಪೀಟರ್ಸ್ಬರ್ಗ್, ರಷ್ಯಾದ ಸಂಸತ್ತು, ರೆಡ್ ಸ್ಕ್ವೇರ್ ಮತ್ತು ಕ್ರೆಮ್ಲಿಸ್ಗೆ ಭೇಟಿ ನೀಡಿದ್ದರು.

40 ವರ್ಷದಿಂದ ಸ್ಟಾಲ್ ನಡೆಸುತ್ತಿರುವ ವಿಜಯನ್
ವಿಜಯನ್ ಹಾಗೂ ಮೋಹನ ವಿವಾಹವಾಗಿ 46 ವರ್ಷಗಳು ಆಗಿದೆ. ತಾವು ವಿಶ್ವಪರ್ಯಟನೆ ಮಾಡಬೇಕು ಎಂದು ಈ ಹಿಂದೆಯೇ ಕನಸು ಕಂಡಿದ್ದ ಈ ದಂಪತಿಗಳು ಈ ಕನಸನ್ನು ನನಸು ಮಾಡಲು ಕಾಫಿ ಶಾಪ್ನಿಂದ ಬಂದ ಆದಾಯವನ್ನೇ ಬಳಸಿದ್ದಾರೆ. ಈ ದಂಪತಿಗಳು ಇಬ್ಬರೇ ತಮ್ಮ ಕಾಫಿ ಶಾಪ್ನಲ್ಲಿ ಎಲ್ಲಾ ಕೆಲಸವನ್ನು ಮಾಡುತ್ತಿದ್ದರು. ಈ ಶಾಪ್ನಲ್ಲಿ ಚಹಾ ಹಾಗೂ ತಿಂಡಿಯನ್ನು ಮಾರಾಟ ಮಾಡಲಾಗುತ್ತಿತ್ತು. ಐದು ರೂಪಾಯಿಗೆ ಚಹಾವನ್ನು ಮಾರಲಾಗುತ್ತಿತ್ತು. ಈ ಸ್ಟಾಲ್ ಅನ್ನು ವಿಜಯನ್ ಸುಮಾರು 40 ವರ್ಷದಿಂದ ನಡೆಸುತ್ತಿದ್ದಾರೆ.
ಈ ದಂಪತಿಗಳು ದಿನಕ್ಕೆ ಮುನ್ನೂರು ರೂಪಾಯಿಯನ್ನು ಉಳಿತಾಯ ಮಾಡಿಟ್ಟು ಅದರಲ್ಲಿಯೇ ತಮ್ಮ ವಿಶ್ವಪರ್ಯಟನೆ ಆರಂಭ ಮಾಡಿದ್ದಾರೆ. ಇನ್ನು ಕೆಲವು ಬಾರಿ ತಮ್ಮ ವಿಶ್ವಪರ್ಯಟನೆಗಾಗಿ ಈ ದಂಪತಿ ಸಾಲವನ್ನು ಕೂಡಾ ಮಾಡಿಕೊಂಡಿದ್ದಾರೆ. ತಮ್ಮ ಪ್ರವಾಸದಿಂದ ವಾಪಾಸ್ ಬಂದ ಬಳಿಕ ಸ್ಟಾಲ್ನಲ್ಲಿ ದುಡಿದು ಈ ಸಾಲವನ್ನು ತೀರಿಸಿಕೊಂಡಿದ್ದಾರೆ.
ಈ ದಂಪತಿ ಇಸ್ರೇಲ್, ಈಜಿಪ್ಟ್, ಬ್ರಿಟನ್, ಫ್ರಾನ್ಸ್, ಆಸ್ಟ್ರಿಯಾ, ಯುಎಇ, ಯುಎಸ್, ರಷ್ಯಾ ಸೇರಿದಂತೆ ಸುಮಾರು 26 ದೇಶಗಳಿಗೆ ಭೇಟಿ ನೀಡಿದ್ದಾರೆ. ಇನ್ನು ಈ ದಂಪತಿಯು 2019 ರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ಗೆ ಪ್ರವಾಸ ಹೋಗಿದ್ದು, ಇದಕ್ಕೆ ಮಹೇಂದ್ರ ಗ್ರೂಪ್ನ ಚೇರ್ಮೆನ್ ಆನಂದ್ ಮಹೇಂದ್ರ ಪ್ರಾಯೋಜಕತ್ವವನ್ನು ಮಾಡಿದ್ದಾರೆ.
ಸಂತಾಪ ವ್ಯಕ್ತಪಡಿಸಿದ ಕೇರಳ ಪ್ರವಾಸೋದ್ಯಮ ಸಚಿವಾಲಯ
ಕೇರಳ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ಅವರು ಕೊಚ್ಚಿಯ ಗಾಂಧಿ ನಗರದಲ್ಲಿ ಇರುವ ವಿಜಯನ್ರ ಶ್ರೀ ಬಾಲಜಿ ಕಾಫಿ ಶಾಪ್ಗೆ ಭೇಟಿ ನೀಡಿದ್ದರು. ಈ ದಂಪತಿಯು ರಷ್ಯಾಕ್ಕೆ ಭೇಟಿ ನೀಡಲು ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಈ ದಂಪತಿಯು ಸ್ಟಾಲ್ಗೆ ಭೇಟಿ ನೀಡಿದ್ದರು. ಇನ್ನು ವಿಜಯನ್ ನಿಧನಕ್ಕೆ ಕೇರಳ ಪ್ರವಾಸೋದ್ಯಮ ಸಚಿವಾಲಯ ಸಂತಾಪ ವ್ಯಕ್ತಪಡಿಸಿದೆ. "ಇಂದು ತನ್ನ ಅಂತಿಮ ಯಾತ್ರೆಯನ್ನು ಆರಂಭಿಸಿದ ನಿರ್ಭೀತ ಪ್ರಯಾಣಿಕ ಕೆ ಆರ್ ವಿಜಯನ್ (ಬಾಲಾಜಿ) ಅವರಿಗೆ ಕೇರಳ ಪ್ರವಾಸೋದ್ಯಮ ನಮನ ಸಲ್ಲಿಸುತ್ತದೆ. ಅವರ ಜೀವನದ ಹಲವು ಮೈಲಿಗಲ್ಲುಗಳು, ಅವರ ಧೈರ್ಯ ಎಂದಿಗೂ ನೆನಪಿನಲ್ಲಿ ಉಳಿಯುವಂತದ್ದು," ಎಂದು ಕೇರಳ ಪ್ರವಾಸೋದ್ಯಮ ಟ್ವೀಟ್ ಮಾಡಿದೆ.
ಇನ್ನು ವಿಜಯನ್ ತನ್ನ ವಿವಾಹಕ್ಕೂ ಮುನ್ನ ತನ್ನ ತಂದೆಯೊಂದಿಗೆ ಸಣ್ಣ ಪ್ರವಾಸವನ್ನು ಹೋಗುತ್ತಿದ್ದರು. ಮೊದಲು ದೇಶದ ಒಳಗೆಯೇ ಪ್ರವಾಸ ಹೋಗುತ್ತಿದ್ದ ವಿಜಯನ್ ಬಳಿಕ ವಿದೇಶಕ್ಕೂ ಪ್ರವಾಸ ಹೋಗಲು ಆರಂಭ ಮಾಡಿದರು. ಈ ಬಗ್ಗೆ ಮಾತನಾಡಿದ್ದ ವಿಜಯನ್, "ನನಗೆ ಪ್ರವಾಸ ಮಾಡುವುದು ಬಹಳ ಇಷ್ಟ. ನಾನು 12 ವರ್ಷದವನು ಆಗಿದ್ದಾಗ ನನ್ನ ತಂದೆ ನನ್ನನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ನಾನು ದೊಡ್ಡವನಾದ ಬಳಿಕ ನಾನು ಒಬ್ಬನೇ ಮುನ್ನಾರ್, ತೆಕ್ಕಾಡಿ ಹಾಗೂ ಕನ್ಯಾಕುಮಾರಿಗೆ ಪ್ರವಾಸ ಹೋಗಿದ್ದೇನೆ," ಎಂದು ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications