ರೈತರಿಗೆ ಹಾನಿಕಾರಕ: ವಿವಾದಿತ 3 ಕೃಷಿ ಕಾಯ್ದೆಗಳ ಬಗ್ಗೆ ವಿವರಣಾತ್ಮಕ ಪಾಠ
ತಿರುವನಂತಪುರಂ, ಫೆಬ್ರವರಿ.22: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಾಗಿ ನಿಲ್ಲಲಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಗಿ ಹೇಳಿದ್ದಾರೆ.
ಕೇರಳದ ತಮ್ಮ ಲೋಕಸಭಾ ಕ್ಷೇತ್ರ ವಯನಾಡುವಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, ಕೃಷಿ ಸಂಬಂಧಿತ ಕಾಯ್ದೆಗಳು ದೇಶದ ರೈತರ ಪಾಲಿಗೆ ಹಾನಿಕಾರಕವಾಗಲಿವೆ ಎಂದು ಕಿಡಿ ಕಾರಿದ್ದಾರೆ.
ಕೃಷಿ ಕಾಯ್ದೆ ಪ್ರತಿಭಟನೆ: 3 ತಿಂಗಳಲ್ಲಿಯೇ 248 ರೈತರ ಸಾವು
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ಒಂದೊಂದು ರೀತಿಯಲ್ಲಿ ರೈತರ ವಿನಾಶಕ್ಕೆ ಕಾರಣವಾಗಲಿವೆ ಎಂದು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ವಿವಾದಿತ ಕಾಯ್ದೆಗಳ ಬಗ್ಗೆ ರಾಹುಲ್ ಗಾಂಧಿ ನೀಡಿದ ವಿವರಣೆಯ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಮೊದಲ ಕೃಷಿ ಕಾಯ್ದೆ ಬಗ್ಗೆ ರಾಹುಲ್ ಗಾಂಧಿ ಮಾತು
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಮೊದಲ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ ಬಗ್ಗೆ ವಿರೋಧಿಸುವುದಕ್ಕೆ ರಾಹುಲ್ ಗಾಂಧಿ ಕಾರಣ ತಿಳಿಸಿದ್ದಾರೆ. ಮೊದಲ ಕಾಯ್ದೆಯು ದೇಶದ ಬೃಹತ್ ಉದ್ಯಮಿಗಳು ಮತ್ತು ಹೊರಗಿನ ಉದ್ಯಮಿಗಳು ನಮ್ಮ ರೈತರು ಬೆಳೆದ ಬೆಲೆಯನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ, ತಮಗೆ ಬೇಕಾದ ಬೆಲೆಗೆ ಖರೀದಿಸುವುದಕ್ಕೆ ಅವಕಾಶವನ್ನು ಒದಗಿಸಿಕೊಡುತ್ತದೆ. ಇದರಿಂದ ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮಾರುಕಟ್ಟೆ ಅಥವಾ ಮಂಡಿ ವ್ಯವಸ್ಥೆಯು ನಾಶವಾಗುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅಗತ್ಯ ವಸ್ತುಗಳಿಗೆ ಕೊರತೆ ಸೃಷ್ಟಿಸುವ 2ನೇ ಕೃಷಿ ಕಾಯ್ದೆ
ಕೇಂದ್ರ ಸರ್ಕಾರದ ಎರಡನೇ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯಿಂದ ನೇರವಾಗಿ ಅಗತ್ಯ ವಸ್ತುಗಳ ಅಭಾವ ಸೃಷ್ಟಿಯಾಗುತ್ತದೆ. ಏಕೆಂದರೆ ಬೃಹತ್ ಉದ್ಯಮಿಗಳು ರೈತರಿಂದ ಖರೀದಿಸಿದ ಸರಕುಗಳನ್ನು ತಮಗೆ ಬೇಕಾದಷ್ಚು ದಿನಗಳವರೆಗೂ ತಮಗೆ ಬೇಕಾದ ಕಡೆಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲದೇ ಸಂಗ್ರಹಿಸಿಡಬಹುದು. ಇದರಿಂದ ಅಗತ್ಯ ಸಮಯದಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಸಿಗದೇ ಹೋಗುವ ಅಪಾಯವು ಹೆಚ್ಚಾಗಿರುತ್ತದೆ. ಈ ಕಾಯ್ದೆಯಿಂದ ಮೊದಲಿದ್ದ ಅಗತ್ಯ ಸರಕುಗಳ ಸಂರಕ್ಷಣಾ ಕಾಯ್ದೆ ಮೇಲೆ ನೇರವಾದ ದಾಳಿ ನಡೆಸಿದಂತೆ ಆಗುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

"ದೇಶದ ರೈತರ ಸ್ವಾತಂತ್ರ್ಯಕ್ಕೆ 3ನೇ ಕಾಯ್ದೆಯಿಂದ ಧಕ್ಕೆ"
ಭಾರತದಲ್ಲಿ ರೈತರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವ ನಿಟ್ಟಿನಲ್ಲಿ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ರಚಿಸಲಾಗಿದೆಯೇ ಎಂಬ ಅನುಮಾನ ಹುಟ್ಟಿಕೊಳ್ಳುತ್ತದೆ. ಏಕೆಂದರೆ, ರೈತರು ತಾವು ಮಾರಾಟ ಮಾಡಿರುವ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲದಿದ್ದರೆ ಅದನ್ನು ಪ್ರಶ್ನೆ ಮಾಡುವಂತಿರುವುದಿಲ್ಲ. ನ್ಯಾಯಾಲಯದನ್ನು ಈ ಬಗ್ಗೆ ಪ್ರಶ್ನೆ ಮಾಡುವಂತೆಯೂ ಇರುವುದಿಲ್ಲ. ಇದರಿಂದ ರೈತರು ತಮ್ಮ ಹಕ್ಕನ್ನು ಕೂಡಾ ಕಳೆದುಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ರೈತ ಹೋರಾಟಕ್ಕೆ 90 ದಿನ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 90 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತರ ಹೋರಾಟಕ್ಕೆ ಬೆಂಬಲಿಸಿರುವ ಕಾಂಗ್ರೆಸ್, ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ರೈತರ ಪ್ರತಿಭಟನೆಗೆ ಕೈಜೋಡಿಸುವುದಾಗಿ ಹೇಳುತ್ತಿದೆ.












Click it and Unblock the Notifications