ಬಿಜೆಪಿ ಪರ "ಮೆಟ್ರೋ ಮ್ಯಾನ್" ಶ್ರೀಧರನ್ ಮೊದಲ ಮಾತು
ತಿರುವನಂತಪುರಂ, ಫೆಬ್ರವರಿ 20: ಶೀಘ್ರದಲ್ಲೇ ಬಿಜೆಪಿ ಸೇರಲಿರುವ "ಮೆಟ್ರೋ ಮ್ಯಾನ್" ಇ ಶ್ರೀಧರನ್, ಬಿಜೆಪಿ ಪರ ಹಲವು ಮಾತುಗಳನ್ನು ಆಡಿದ್ದಾರೆ. ಬಿಜೆಪಿಯ ಆಲೋಚನೆಗಳಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದಾರೆ.
ಈಚೆಗಷ್ಟೆ 88 ವರ್ಷದ ಶ್ರೀಧರನ್ ಬಿಜೆಪಿ ಅಧಿಕಾರಕ್ಕೆ ತರಲು ನೆರವಾಗುವ ಜತೆ ಪಕ್ಷ ಬಯಸಿದರೆ ಸಿಎಂ ಆಗಲು ಸಿದ್ಧ ಎಂದು ಹೇಳಿದ್ದರು. ಜೊತೆಗೆ ತಾವು ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಮೂಲ ಸೌಕರ್ಯಗಳ ಅಭಿವೃದ್ಧಿ ಕೆಲಸಗಳೆಡೆಗೆ ಗಮನ ನೀಡುವುದಾಗಿ ತಿಳಿಸಿದ್ದರು.
ಸಂದರ್ಶನವೊಂದರಲ್ಲಿ "ಲವ್ ಜಿಹಾದ್" ಕುರಿತು ಮಾತನಾಡಿರುವ ಅವರು, ನಾನು ಲವ್ ಜಿಹಾದ್ ವಿರೋಧಿಸುತ್ತೇನೆ. ಹಿಂದೂ ಯುವತಿಯರನ್ನು ಮದುವೆಯಾಗಿ ಅವರಿಗೆ ವಂಚನೆ ಮಾಡಿರುವ ಹಲವು ಉದಾಹರಣೆಯನ್ನು ಕೇರಳದಲ್ಲಿ ನೋಡಿದ್ದೇನೆ. ಮದುವೆ ನಂತರ ಅವರು ಕಷ್ಟಪಡುವುದನ್ನೂ ಕಂಡಿದ್ದೇನೆ. ಬರೀ ಹಿಂದೂ ಅಲ್ಲದೇ ಮುಸ್ಲಿಂ, ಕ್ರಿಶ್ಚಿಯನ್ ಹುಡುಗಿಯರನ್ನು ಕೂಡ ಮದುವೆ ವಿಷಯದಲ್ಲಿ ಮೋಸಗೊಳಿಸಲಾಗುತ್ತಿದೆ. ಇದನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.

ಗೋಮಾಂಸ ನಿಷೇಧ ಸಂಬಂಧ ಬಿಜೆಪಿ ಆಂದೋಲನದ ಕುರಿತು ಅಭಿಪ್ರಾಯ ಹಂಚಿಕೊಂಡ ಅವರು, "ನಾನು ಶುದ್ಧ ಸಸ್ಯಾಹಾರಿ. ಮೊಟ್ಟೆಯನ್ನು ಕೂಡ ತಿನ್ನುವುದಿಲ್ಲ. ಹೀಗಾಗಿ ಮಾಂಸ ತಿನ್ನುವವರೂ ನನಗೆ ಇಷ್ಟವಾಗುವುದಿಲ್ಲ" ಎಂದು ಹೇಳಿದ್ದಾರೆ.
ಕೇರಳದಲ್ಲಿ ಭಾನುವಾರ(ಫೆ.21)ದಂದು ನಡೆಯಲಿರುವ ವಿಜಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಶ್ರೀಧರನ್ ಅವರು ಅಧಿಕೃತವಾಗಿ ಕೇಸರಿ ಪಡೆಯನ್ನು ಫೆಬ್ರವರಿ 25ರಂದು ಸೇರಲಿದ್ದಾರೆ ಎನ್ನಲಾಗಿದೆ. ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವುದಾಗಿ ತಿಳಿದುಬಂದಿದೆ.












Click it and Unblock the Notifications