ಕೊಲ್ಲೂರಿಗೆ ಹೋಗಬೇಕಿದ್ದ ಪ್ರಯಾಣಿಕರನ್ನು ಗೋವಾಕ್ಕೆ ಕರೆದೊಯ್ದ ಚಾಲಕ
ನವದೆಹಲಿ, ಮೇ 18: ಬಸ್ವೊಂದು ಎಲ್ಲಿಗೋ ಹೊರಟ ಪ್ರಯಾಣಿಕರನ್ನು ಇನ್ನೆಲ್ಲಿಗೋ ಕರೆದುಕೊಂಡು ಹೋಗಿ ನಿಲ್ಲಿಸಿದ ಘಟನೆ ನಡೆದಿದೆ. ಚಾಲಕನ ಬೇಜವಾಬ್ದಾರಿತನದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕೊಲ್ಲೂರು ಶ್ರೀಮುಕಾಂಬಿಕೆಯ ದರ್ಶನಕ್ಕೆ ತೆರಳಿದ್ದ ಯಾತ್ರಾರ್ಥಿಗಳು ಗೋವಾಕ್ಕೆ ತಲುಪಿಸಲಾಗಿದೆ.
ಚಾಲಕನ ಅಜ್ಞಾನದಿಂದಾಗಿ ಕೇರಳದ ರಾಜಧಾನಿ ತಿರುವನಂತಪುರದಿಂದ ಕೊಲ್ಲೂರು ದೇವಸ್ಥಾನ ದರ್ಶನ ಪಡೆಯಬೇಕಿದ್ದ ಭಕ್ತರು ಗೋವಾ ಬೀಚ್ ದರ್ಶನ ಪಡೆದಿದ್ದಾರೆ. ಮೇ 15ರ ಸಂಜೆ ತಿರುವನಂತಪುರದಿಂದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಕೆ-ಸ್ಟಿಪ್ಟ್ ಬಸ್ ಕೊಲ್ಲೂರಿಗೆ ಹೊರಟಿತ್ತು. ಎರ್ನಾಕುಲಂವರೆಗೆ ಓರ್ವ ಚಾಲಕನಿದ್ದು ಅಲ್ಲಿಂದ ಇನ್ನೋರ್ವ ಚಾಲಕ ಬದಲಾಗಿದ್ದಾನೆ.
ಮಂಗಳೂರು ನಂತರ ಕುಂದಾಪುರದವರೆಗೆ ಬಸ್ ಸರಿಯಾಗಿ ಪ್ರಯಾಣಿಸಿದೆ. ಬಳಿಕ ಚಾಲಕ ಎಡವಟ್ಟು ಮಾಡಿದ್ದಾನೆ. ಕೊಲ್ಲೂರಿಗೆ ತೆರಳಲು ಬಲಕ್ಕೆ ತಿರುವು ಪಡೆದುಕೊಳ್ಳಬೇಕಿತ್ತು. ಆದರೆ ಚಾಲಕ ನೇರವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್ ಚಲಾಯಿಸಿದ್ದಾನೆ. ಬಳಿಕ ಚಾಲಕನಿಗೆ ರಸ್ತೆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ರಾತ್ರಿಯಿಡೀ ನಿದ್ದೆ ಮಾಡಿ ಬೆಳಗ್ಗೆ ಕಣ್ಣು ಬಿಟ್ಟಾಗ ತಾವಂದುಕೊಂಡಿದ್ದ ಸ್ಥಳದಲ್ಲಿರಲಿಲ್ಲ. ದೇವರ ದರ್ಶನ ಪಡೆಯಲು ಬಂದವರಿಗೆ ಚಾಲಕ ಗೋವಾ ಸಮುದ್ರದ ದರ್ಶನ ಮಾಡಿಸಿದ್ದ. ಅರೆನಗ್ನ ವಿದೇಶಿಯರು ಕಣ್ಣಿಗೆ ಬೀಳುತ್ತಿದ್ದಂತೆ ಗಾಬರಿಗೊಂಡ ಪ್ರಯಾಣಿಕರು ತಮ್ಮ ಸ್ಥಳದಿಂದ ಬಸ್ ಮುಂದೆ ಸಾಗಿದೆ ಎನ್ನುವ ಗೊಂದಲಕ್ಕೊಳಗಾಗಿದ್ದಾರೆ. ಅತ್ತಿತ್ತಾ ಕಣ್ಣಾಡಿಸಿದ್ದಾರೆ. ಚಾಲಕನನ್ನು ವಿಚಾರಿಸಿದ್ದಾರೆ.

ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದಂತೆ ಚಾಲಕ ತಬ್ಬಿಬ್ಬಾಗಿ ಗೂಗಲ್ ಮ್ಯಾಪ್ ದಾರಿ ತಪ್ಪಿಸಿದೆ ಎಂದು ಹೇಳಿದ್ದಾನೆ. ಸುಳ್ಳು ಹೇಳುವ ಮೂಲಕ ಎಸ್ಕೇಪ್ ಆಗಲು ನೋಡಿದ್ದಾನೆ. ಇದರಿಂದ ಕೋಪಗೊಂಡ ಪ್ರಯಾಣಿಕರು ಚಾಲಕನೊಂದಿಗೆ ವಾಗ್ವಾದ ನಡೆಸಿದರು. ಬಳಿಕ ಪ್ರಯಾಣಿಕರನ್ನು ಕೊಲ್ಲೂರಿಗೆ ಬಿಟ್ಟು ಕ್ಷಮೆ ಕೇಳಿ ಚಾಲಕ ಹೊರಟಿದ್ದಾನೆ. ಬೇರೆ ದಾರಿ ಇಲ್ಲದೇ ಪ್ರಯಾಣಿಕರು ಮನೆ ವಾಪಾಸ್ಸಾಗಿದ್ದಾರೆ.












Click it and Unblock the Notifications