ಸುಪ್ರೀಂ ತೀರ್ಪಿನ ನಂತರ ಮೊದಲ ಬಾರಿಗೆ ತೆರೆದ ಅಯ್ಯಪ್ಪ ದೇವಾಲಯ
Recommended Video

ತಿರುವನಂತಪುರಂ, ಅಕ್ಟೋಬರ್ 17: ಹಲವು ವಿವಾದದ ನಡುವೆ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಇಂದಿನಿಂದ ತೆರೆಯಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮೊದಲ ಬಾರಿಗೆ ದೇವಾಲಯವನ್ನು ತೆರೆಯಲಾಗುತ್ತಿದ್ದು, ದೇವಾಲಯದ ಆವರಣದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.
10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಸೆ.28 ರಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಆ ನಂತರ ಮೊದಲ ಬಾರಿಗೆ ದೇವಾಲಯ ತೆರೆಯಲಾಗಿರುವುದರಿಂದ ಕುತೂಹಲ ಹೆಚ್ಚಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕೇರಳ ಮತ್ತು ಭಾರತದ ಇತರ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೇರಳದಲ್ಲಿ ಶಿವಸೇನೆ ಮತ್ತು ಅಯ್ಯಪ್ಪ ದೇವಾಲಯದ ಆಡಳಿತ ಮಂಡಳಿ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದಿದೆ.

ಕಾವೇರಿದ ಪ್ರತಿಭಟನೆ!
ಅಯ್ಯಪ್ಪ ದೇವಾಲಯಕ್ಕೆ ಬರುವ ಬಸ್ಸು, ವಾಹನಗಳನ್ನು ಪ್ರತಿಭಟನಕಾರರು ತಡೆದು ನಿಲ್ಲಿಸುತ್ತಿದ್ದು, ಅದರಲ್ಲಿ ಮಹಿಳೆಯರೇನಾದರೂ ಇದ್ದಾರೆಯೇ ಎಂದು ಪರೀಕ್ಶಶಿಸುತ್ತಿರುವುದು ಕಂಡುಬರುತ್ತಿದೆ. ಸುಪ್ರೀಂ ಕೋರ್ಟಿನ ತೀರ್ಪು ಏನೇ ಇದ್ದಿರಲಿ. ನಾವಂತೂ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸುತ್ತಿದ್ದಾರೆ.

ಖಡಕ್ ವಾರ್ನಿಂಗ್ ನೀಡಿದ ಮುಖ್ಯಮಂತ್ರಿ
ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿ, ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರಲು ತಾವು ಸಿದ್ಧ ಎಂದಿರುವ ವಿಜಯನ್, ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ಪರಿಶೀಲಿಸುವಂತೆ ಮನವಿ ಸಲ್ಲಿಸುವುದಿಲ್ಲ ಎಂದು ಈ ಮೊದಲೇ ಹೇಳಿದ್ದರು. ಅದನ್ನು ಪುನರುಚ್ಚರಿಸಿದ್ದಾರೆ.

ಪ್ರತಿಭಟಿಸುತ್ತಿರುವವರು ಯಾರು?
ಬಿಜೆಪಿ, ಶಿವಸೇನಾ, ಅಯ್ಯಪ್ಪ ದೇವಾಲಯದಾಡಳಿತ ಮಂಡಳಿ ಸೇರಿದಂತೆ ಹಲವು ಸಂಘಟನೆಗಳು ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಿವೆ. ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಪಟ್ಟುಹಿಡಿದಿದ್ದಾರೆ. ಈ ಕುರಿತು ಈಗಾಗಲೇ ಅಯ್ಯಪ್ಪ ದೇವಾಲಯದ ಆಡಳಿತ ಮಂಡಳಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ.

ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಎಂಬ ವಾದ
10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಅವರು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪ್ರವೇಶಕ್ಕೆ ಧಕ್ಕೆಯಾಗುತ್ತದೆ ಎಂದು 800 ವರ್ಷಗಳಿಂದಲೂ ಈ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಸೆ.28 ರಂದು ಈ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತ್ತು.












Click it and Unblock the Notifications