ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ, ಯೋಧ ಹುತಾತ್ಮ
ಪಾಕಿಸ್ತಾನಿ ಸೇನಾ ಪಡೆಯಿಂದ ಗಡಿ ನಿಯಂತ್ರಣ ರೇಖೆಯ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗುರುವಾರ ಕದನ ವಿರಾಮ ಉಲ್ಲಂಘನೆಯಾಗಿದ್ದು, ಭಾರತೀಯ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಇಪ್ಪತ್ನಾಲ್ಕು ವರ್ಷದ ಯಶ್ ಪಾಲ್ ಸಾವನ್ನಪ್ಪಿದವರು. ಅವರು ಜಮ್ಮು-ಕಾಶ್ಮೀರದ ಉಧಂಪುರ್ ನವರು.
ಮುಂಚೂಣಿ ಪ್ರದೇಶಗಳಲ್ಲಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ, ಭಾರೀ ಶೆಲ್ಲಿಂಗ್ ನಡೆಸುತ್ತಿದೆ. ಜತೆಗೆ ಗಡಿ ನಿಯಂತ್ರಣ ರೇಖೆಯ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಮಾರ್ಟರ್ ಬಾಂಬ್ ಅನ್ನು ಕೂಡ ಬಳಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜನವರಿಯಿಂದ ಈ ತನಕ ನೂರಾ ಹತ್ತು ಸಲ ಪಾಕಿಸ್ತಾನವು ಕದನ ವಿರಾಮ ಉಲ್ಲಂಘನೆ ಮಾಡಿದೆ.
ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಗ್ರೆನೇಡ್ ದಾಳಿ: ಓರ್ವ ಯೋಧ ಹುತಾತ್ಮ
ಗಡಿ ನಿಯಂತ್ರಣ ರೇಖೆ ಬಳಿಯ ಅಖ್ನೂರ್ ಮತ್ತು ಸುಂದರ್ ಬನಿ ವಲಯಗಳಲ್ಲಿ ಶೆಲ್ಲಿಂಗ್ ಜತೆ ಮಾರ್ಟರ್ ಬಾಂಬ್ಸ್ ಬಳಸುತ್ತಿದೆ. ಮತ್ತು ಸಣ್ಣ ಗಾತ್ರದ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ಮಾಡುತ್ತಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ. ಪಾಕಿಸ್ತಾನಿ ಸೇನೆ ರಜೌರಿ ಜಿಲ್ಲೆಯಲ್ಲಿ ಸೋಮವಾರ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿ ವೇಳೆ ಒಬ್ಬ ಸೈನಿಕ ಹುತಾತ್ಮರಾಗಿದ್ದರು. ಇತರ ನಾಲ್ವರಿಗೆ ಗಾಯಗಳಾಗಿದ್ದವು.
ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತೀಯ ವಾಯು ಸೇನೆಯು ಬಾಲಕೋಟ್ ನ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆ ನೆಲೆ ಮೇಲೆ ದಾಳಿ ನಡೆಸಿತ್ತು. ಆ ನಂತರ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿ ಆಗಿದೆ. ಕಳೆದ ವರ್ಷ ಅತಿ ಹೆಚ್ಚು ಬಾರಿ ಪಾಕಿಸ್ತಾನಿ ಸೇನೆ ಕದನ ವಿರಾಮ ಉಲ್ಲಂಘಿಸಿದೆ. ಹದಿನೈದು ವರ್ಷಗಳಲ್ಲೇ ಅತಿ ಹೆಚ್ಚು ಅಂದರೆ 2,936 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.