India Rain Alert: ಜುಲೈ 15ರವರೆಗೆ ಈ ಭಾಗಗಳಲ್ಲಿ ಬಿರುಗಾಳಿ ಮಳೆ, ದಕ್ಷಿಣದಲ್ಲಿ ಮುಂಗಾರು ದುರ್ಬಲ!
ನವದೆಹಲಿ: ಮುಂಗಾರು ಮಳೆ ದೇಶದ ಅರ್ಧ ಭಾಗದಲ್ಲಿ ಹೆಚ್ಚು ಸಕ್ರಿಯವಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಇಡೀ ದೇಶವನ್ನು ಮುಂಗಾರು ವ್ಯಾಪಿಸಲಿದ್ದು, ದೇಶದ ವಾಯುವ್ಯ, ಮಧ್ಯ, ಪಶ್ಚಿಮ ಹಾಗೂ ಉತ್ತರ ಭಾಗದ ರಾಜ್ಯಗಳಲ್ಲಿ ಭಾರೀ ವರ್ಷಧಾರೆ ಸುರಿಯುತ್ತಿದೆ. ಜುಲೈ 15ರವರೆಗೆ ವಿವಿಧ ಭಾಗಗಳಲ್ಲಿ ಈ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಜುಲೈ 12ರವರೆಗೆ ಕಣಿವೆ ರಾಜ್ಯ ಜಮ್ಮು-ಕಾಶ್ಮೀರ-ಲಡಾಖ್, ಬಾಲ್ಟಿಸ್ತಾನ್-ಮುಜಾಫರ್ ಬಾದ್ನಲ್ಲಿ ವ್ಯಾಪಕ ಮಳೆಯಾಗಲಿದೆ. ದೆಹಲಿ, ಹರಿಯಾಣ ಮತ್ತು ಚಂಡೀಗಢ, ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ನಿರೀಕ್ಷೆ ಇದೆ. ಈ ಭಾಗಗಳ ಹಲವೆಡೆ ಮಳೆ ಅಬ್ಬರದಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬಿತ್ತನೆ ಮಾಡಿದ್ದ ರೈತರಲ್ಲಿ ಮಂದಹಾಸ ಮೂಡಿಸಿದೆ. ವಿವಿಧ ರಾಜ್ಯಗಳ ಹಲವೆಡೆ ಮಳೆಗೆ ಪ್ರವಾಹ ಸ್ಥಿತಿ ಉಂಟಾಗಿದೆ.

ಇಂದು ಜುಲೈ 9 ಮತ್ತು 10ರಂದು ರಾಜಸ್ಥಾನ, ಮಧ್ಯಪ್ರದೇಶ, ವಿದರ್ಭ, ಜಾರ್ಖಂಡ್, ಅಂಡಮಾನ್ ನಿಕೋಬಾರ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಅನೇಕ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ. ಇಲ್ಲಿ ಬಿರುಗಾಳಿಯು ಗಂಟೆಗೆ 40-60ಕಿಲೋ ಮೀಟರ್ ವೇಗದಲ್ಲಿ ಬೀಸಲಿದೆ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ 15ರವರೆಗೆ ಜೋರು ಮಳೆ
ಕಳೆದೊಂದು ವಾರದಿಂದ ಮಬ್ಬು ಕವಿದ ವಾತಾವರಣ ನಿರ್ಮಾಣವಾಗಿದ್ದ ಗಂಗಾನದಿ ಸುತ್ತಮುತ್ತ, ಪಶ್ಚಿಮ ಬಂಗಾಳದ ಹಲವು ಪ್ರದೇಶಗಳು, ಸಿಕ್ಕಿಂ, ಅಸ್ಸಾಂ, ಬಿಹಾರ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಮಣಿಪುರ, ಮಿಜೋರಾಂಗಳಲ್ಲಿ ಜುಲೈ 10ರಿಂದ 15ರವರೆಗೆ ಸತತ ಮಳೆ ಸುರಿಯಲಿದೆ. ಕೆಲವೆಡೆ ಹಗುರದಿಂದ ಸಾಧರಣ ಮಳೆ ಆದರೆ, ಇನ್ನೂ ಕೆಲವೆಡೆ ಜೋರು ಮಳೆಗೆ ನಿವಾಸಿಗಳು ಸಾಕ್ಷಿಯಾಗಲಿದ್ದಾರೆ
ಜುಲೈ 13ರಂದು ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯದಲ್ಲಿ ಮುಂಗಾರು ಮಳೆ ಮತ್ತಷ್ಟು ತೀವ್ರಗೊಳ್ಳಲಿದೆ. ಭಾರೀಯಿಂದ ಅತೀ ಭಾರೀ ಮಳೆ ಸಂಭವವಿದೆ. ನದಿಗಳು, ಜಲಾಶಗಳಲ್ಲಿ ನೀರಿನ ಪ್ರಮಾಣ ಏರಿಕೆ ಆಗುತ್ತಿದ್ದು, ಕೆಲವೆಡೆ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಇನ್ನೂ ದಹೆಲಿ, ಮಹಾರಾಷ್ಟ್ರದ ಮುಂಬೈ, ಪಾಟ್ನಾ ಇನ್ನಿತರ ಮಹಾನಗರಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ.
ದಕ್ಷಿಣ ಭಾರತದಲ್ಲಿ ಮಳೆ ದುರ್ಬಲ
ಕಳೆದ ಎರಡು ವಾರಗಳಿಂದ ಕರ್ನಾಟಕ ಕರಾವಳಿ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಉತ್ತಮ ಮಳೆ ಆಗತ್ತಿತ್ತು. ಜುಲೈ 9ರವರೆಗೆ ಕರ್ನಾಟಕದಲ್ಲಿ ಅಬ್ಬರಿಸಿದ್ದ ಮುಂಗಾರು ದುರ್ಬಲಗೊಂಡಿದೆ. ಮತ್ತೆ ಬಿಸಿಲಿನ ವಾತಾವರಣ ನಿರ್ಮಾಣವಾಗುವ ಆತಂಕ ಎದುರಾಗಿದೆ. ಆರಂಭದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಚುರುಕಾಗಿದ್ದ ಮುಂಗಾರು ಇದೀಗ ಉತ್ತರ, ಈಶಾನ್ಯ ರಾಜ್ಯಗಳಲ್ಲಿ ಬಲವಾಗಿ ಸುರಿಯುತ್ತಿದೆ. ಇನ್ನೂ ಕೆಲವು ದಿನ ದಕ್ಷಿಣದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಆಗಲಿದ್ದು, ಮತ್ತೆ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.













Click it and Unblock the Notifications