ಮಹಾರಾಷ್ಟ್ರ ಭಾರೀ ಪ್ರವಾಹ: ನದಿಯಲ್ಲಿ ಕೊಚ್ಚಿ ಹೋದ 3,000 ಗ್ಯಾಸ್ ಸಿಲಿಂಡರ್ಗಳು, ಪ್ರಾಣವನ್ನೂ ಲೆಕ್ಕಿಸದೆ ಹೆಕ್ಕುತ್ತಿರುವ ಜನ
ಮಹಾರಾಷ್ಟ್ರದಲ್ಲಿ ಅತೀಯಾದ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನದಿ, ಹಳ್ಳಗಳು ತುಂಬಿ ಹರಿಯುತ್ತಿದ್ದು, ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಇದರ ನಡುವೆ ಪ್ರವಾಹದ ಭೀಕರತೆಯನ್ನು ಎತ್ತಿ ತೋರಿಸುವಂತಹ ಘಟನೆಯೊಂದು ರಾಯಗಡ ಜಿಲ್ಲೆಯಲ್ಲಿ ನಡೆದಿದೆ.
ಪ್ರವಾಹದ ರಭಸಕ್ಕೆ ನೀರಿನಲ್ಲಿ ಹೆಚ್ಚುಕಮ್ಮಿ 3,000 ಎಲ್ಪಿಜಿ ಸಿಲಿಂಡರ್ಗಳು ಹೊಳೆಯಲ್ಲಿ ಕೊಚ್ಚಿ ಹೋಗಿದೆ. ಇದನ್ನು ನೋಡಿದ ಸ್ಥಳೀಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ ನದಿಯಲ್ಲಿ ತೇಲಿಕೊಂಡು ಹೋಗುತ್ತಿರುವ ಸಿಲಿಂಡರ್ಗಳನ್ನು ಹಿಡಿಯಲು ಹರಸಾಹಸ ಪಡುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಾತಳಗಂಗಾ ನದಿಯಲ್ಲಿ ಕೊಚ್ಚಿಕೊಂಡು ಹೋದ ಸಿಲಿಂಡರ್
ರಾಯಗಡನ ಪನ್ವೇಲ್ ತಾಲೂಕಿನ ಚವಾನೆ ಹತ್ತಿರವಿದ್ದ ಹೆಚ್ಚುವರಿ ಎಂಐಡಿಸಿಯ ಪಾತಳಗಂಗಾದಲ್ಲಿರುವ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಹೆಚ್ಪಿಸಿಎಲ್) ಬಾಟ್ಲಿಂಗ್ ಘಟಕಕ್ಕೆ ಮಳೆ ನೀರು ನುಗ್ಗಿದೆ. ನೀರಿನ ರಭಸಕ್ಕೆ ಸಿಕ್ಕಿ ಹೆಚ್ಪಿಸಿಎಲ್ ಘಟಕದ ಆವರಣದಲ್ಲಿದ್ದ ಸುಮಾರು 3,000 ಗ್ಯಾಸ್ ಸಿಲಿಂಡರ್ಗಳು ಪಾತಳಗಂಗಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದೆ.
ಇದರಲ್ಲಿ ಹೆಚ್ಚಿನವು ಗ್ಯಾಸ್ ತುಂಬಿರುವ ಸಿಲಿಂಡರ್ಗಳಾಗಿದ್ದರೆ, ಇನ್ನು ಕೆಲವು ಖಾಲಿ ಸಿಲಿಂಡರ್ ಕೂಡ ಇದ್ದವು. ಇನ್ನೂ ಈ ವೈರಲ್ ಆಗಿರುವ ವಿಡಿಯೋವನ್ನು ನೋಡಿದರೆ ಮೈದುಂಬಿ ಹರಿಯುತ್ತಿರುವ ಪಾತಳಾಗಂಗೆ ನದಿಯಂತು ಸಿಲಿಂಡರ್ಗಳ ಕೆಂಪು ಬಣ್ಣದಿಂದಾಗಿ ಸ್ವಲ್ಪ ಭಯಾನಕವಾಗಿ ಕಾಣಿಸುತ್ತಿದೆ.
ಜೀವವನ್ನೂ ಲೆಕ್ಕಿಸದೆ ಸಿಲಿಂಡರ್ ಹೆಕ್ಕುತ್ತಿರುವ ಜನ
ಮತ್ತೊಂದು ಕಡೆ, ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಸಿಲಿಂಡರ್ಗಳನ್ನು ನೋಡಿದ ಊರ ಗ್ರಾಮಸ್ಥರು ನಮ್ಮ ಪಾಣವನ್ನು ಲೆಕ್ಕಿಸದೆ ಸಿಲಿಂಡರ್ ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ನದಿಯಲ್ಲಿ ಈಚಿಕೊಂಡು, ಗ್ಯಾಸ್ ಸಿಲಿಂಡರ್ಗಳಿಗೆ ಹಗ್ಗ ಕಟ್ಟಿ ಏಳೆದು ದಡಕ್ಕೆ ತರುತ್ತಿದ್ದಾರೆ. ಇಂತಹ ದುಸ್ಸಾಹಸಕ್ಕೆ ಕೈಹಾಕಿದ ವಿಡಿಯೋವನ್ನಾ ನೋಡಿ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಪ್ರೀಯಾಗಿ ಏನಾದರೂ ಸಿಗುತ್ತದೆ ಎಂದು ಪ್ರಾಣವನ್ನೇ ಪಣಕ್ಕಿಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ತಮ್ಮ ಆತಂಕ ಹೊರ ಹಾಕಿದ್ದಾರೆ.
ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ
ಈ ಘಟನೆಯ ಗಂಭೀರತೆಯನ್ನ ಮನಗಂಡ ರಾಯಗಡದ ಜಿಲ್ಲಾಡಳಿತವು ತಕ್ಷಣ ಎಚ್ಚೆತ್ತುಕೊಂಡು, ತುರ್ತು ಕ್ರಮ ಕೈಗೊಂಡಿದೆ. ಅಲ್ಲದೇ ಜಿಲ್ಲಾಧಿಕಾರಿ ಕಿಶನ್ ಜವಳೆ ಅವರು ಸಾರ್ವಜನಿಕರು ಮತ್ತು ಊರ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದು, ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಅಥವಾ ತೇಲಿಕೊಂಡು ದಡಕ್ಕೆ ಬಂದಿರುವ ಯಾವುದೇ ಸಿಲಿಂಡರ್ ಬಳಿ ಹೋಗಬಾರದೆಂದು ತಿಳಿಸಿದ್ದಾರೆ.
"ಯಾರಾದರೂ ಈ ಸಿಲಿಂಡರ್ಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದರೆ ಅಥವಾ ಬಳಸಲು ಶುರು ಮಾಡಿದರೆ ಸ್ಫೋಟಗೊಂಡು ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಸಿಲಿಂಡರ್ ಸಿಕ್ಕವರು ತಕ್ಷಣವೇ ಸಮೀಪದ ಎಚ್ಪಿಸಿಎಲ್ ಡೀಲರ್, ಖಾಲಾಪುರ ಅಥವಾ ಪೆನ್ ತಹಶೀಲ್ದಾರ್ ಕಚೇರಿ ಇಲ್ಲವೇ ಉಪವಿಭಾಗಾಧಿಕಾರಿ ಕಚೇರಿಗೆ ಹಿಂತಿರುಗಿಸಬೇಕು" ಎಂದು ಜಿಲ್ಲಾ ಮಾಹಿತಿ ಕಚೇರಿಯ ಅಧಿಕೃತ 'ಎಕ್ಸ್' ಖಾತೆಯಲ್ಲಿ ಮನವಿ ಮಾಡಿದೆ.
Heavy rainfall in Maharashtra's Raigad flooded an LPG bottling plant, causing nearly 3,000 gas cylinders to be swept away into the Patalganga River pic.twitter.com/L9DHPDxsg3
— Dr. SP (@sphavisha) July 9, 2026
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ
ಈ ದೃಶ್ಯ ಸಾಮಾಜಿಕ ಜಾಲತಾಣಲದಲ್ಲಿ ಭಾರೀ ವೈರಲ್ ಆಗಿದ್ದು ಹೆಚ್ಪಿಸಿಎಲ್ ಘಟಕದ ಸುರಕ್ಷತೆ ಕೊರತೆಯ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. "ಅಷ್ಟು ದೊಡ್ಡ ಬಾಟ್ಲಿಂಗ್ ಘಟಕಕ್ಕೆ ಇಷ್ಟು ಸುಲಭವಾಗಿ ಪ್ರವಾಹದ ನೀರು ನುಗ್ಗಲು ಹೇಗೆ ಸಾಧ್ಯ? ಪ್ರವಾಹಕ್ಕೂ ಮೊದಲು ಇಲಾಖೆ ಯಾಕೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಿಲ್ಲ ಎಂದು ನೆಟ್ಟಿಗರು ಬ್ಯಾಟಿಂಗ್ ಬೀಸುತ್ತಿದ್ದಾರೆ.
ಮತ್ತೊಬ್ಬ ಬಳಕೆದಾರರು ಈ ಘಟನೆಯನ್ನ 'ಪುಷ್ಪ' ಸಿನಿಮಾದ ಮರ ಸಾಗಣೆಯ ದೃಶ್ಯಕ್ಕೆ ಹೋಲಿಸಿದ್ದಾರೆ.
ಒಟ್ಟಾರೆಯಾಗಿ, ಪ್ರಕೃತಿ ವಿಕೋಪದ ಜೊತೆಗೆ ವ್ಯವಸ್ಥೆಯ ನಿರ್ಲಕ್ಷ್ಯವೂ ಸೇರಿದರೆ ಎಂತಹ ಅಪಾಯ ಎದುರಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.












Click it and Unblock the Notifications