ಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಯ್ತು ಸಾವಿನ ಸಂಖ್ಯೆ
ಶ್ರೀನಗರ, ನವೆಂಬರ್ 05: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಶುರುವಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ, ನಾಗರಿಕರ ಹತ್ಯೆ ಹೆಚ್ಚಾಗಿದೆ ಎನ್ನುವ ಮಾತು ಮತ್ತೊಮ್ಮೆ ಕೇಳಿಬಂದಿದೆ.
ಅಕ್ಟೋಬರ್ ತಿಂಗಳಲ್ಲಿ 12 ಭದ್ರತಾ ಸಿಬ್ಬಂದಿಗಳು, 20 ಉಗ್ರರು ಹಾಗೂ 12 ನಾಗರಿಕರು ಹತ್ಯೆಗೀಡಾಗಿದ್ದಾರೆ. ಸೆಪ್ಟೆಂಬರ್ ನಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು 8 ಮಂದಿ ಉಗ್ರರು, ಓರ್ವ ನಾಗರಿಕ ಜೀವ ಕಳೆದುಕೊಂಡಿದ್ದಾರೆ.
ಆಗಸ್ಟ್ ಮಧ್ಯದಲ್ಲಿ ಅಫ್ಘಾನಿಸ್ತಾನ ತಾಲೀಬಾನ್ ವಶವಾಗಿತ್ತು. ಅಂಕಿ-ಅಂಶಗಳ ಪ್ರಕಾರ ಆ.15 ರಿಂದ ಅಕ್ಟೋಬರ್ ಮಾಸಾಂತ್ಯದ ವರೆಗೂ ಜಮ್ಮು-ಕಾಶ್ಮೀರದಲ್ಲಿ 16 ಭದ್ರತಾ ಸಿಬ್ಬಂದಿಗಳು, 15 ಪ್ರಜೆಗಳು ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಇದೇ ಅವಧಿಯಲ್ಲಿ 39 ಉಗ್ರರನ್ನೂ, ಉಗ್ರ ಸಂಘಟನೆಗಳ ಕಮಾಂಡರ್ ಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.
"ಆ.15 ರಿಂದ ಆ.31 ರ ಅವಧಿಯಲ್ಲಿ ಓರ್ವ ಭದ್ರತಾ ಸಿಬ್ಬಂದಿ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರೆ, 11 ಉಗ್ರರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು. ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು" ಎಂಬುದನ್ನು ಅಂಕಿ-ಅಂಶಗಳು ಬಹಿರಂಗಪಡಿಸುತ್ತಿದೆ.
ಆ.14 ರಂದು ತಾಲೀಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು. ಇದು ಉಗ್ರರಿಗೆ ಉತ್ತೇಜನ ನೀಡುವ ಬೆಳವಣಿಗೆಯಾಗಿ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಹೆಚ್ಚಾಗಲಿವೆ ಎಂಬ ಎಚ್ಚರಿಕೆಯನ್ನು ಭದ್ರತಾ ತಜ್ಞರು ನೀಡಿದ್ದರು. ಕಳೆದ 2 ತಿಂಗಳ ಅಂಕಿ-ಅಂಶಗಳ ಪ್ರಕಾರ ಭದ್ರತಾ ಪಡೆಗಳು, ನಾಗರಿಕರ ಜೀವ ಹಾನಿ ಹೆಚ್ಚಾಗಿದ್ದರೆ, ಉಗ್ರರ ಸಾವುಗಳ ಸಂಖ್ಯೆ ಕಡಿಮೆಯಾಗಿದೆ.
ಜುಲೈನಿಂದ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಅಫ್ಘಾನಿಸ್ತಾನದ ಗಡಿಯ ಬುಡಕಟ್ಟು ಪ್ರದೇಶಗಳಿಂದ ಸುಮಾರು 50 ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದಾರೆ ಮತ್ತು ಸಕ್ರಿಯರಾಗಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿದಾಗ ಬಿಗಿಯಾದ ಕ್ರಮಗಳಿಂದಾಗಿ ಭಯೋತ್ಪಾದಕರ ಸಂಖ್ಯೆ ಕ್ಷೀಣಿಸಿತ್ತು.
ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸುತ್ತಿದ್ದಂತೆ ಭಯೋತ್ಪಾದಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದರಂತೆ ದೇಶದಲ್ಲಿ ಭಯೋತ್ಪಾದಕರ ದಾಳಿ ನಡೆಯುವ ಶಂಕೆಯನ್ನು ಕೂಡಾ ತಜ್ಞರು ವ್ಯಕ್ತಪಡಿಸಿದ್ದಾರೆ.
ಭಾರತದ ಮೇಲೆ ದಾಳಿ ನಡೆಸಲು ಜೈಶ್ ಉಗ್ರರ ಸಂಚು: ವರದಿ
2019ರಲ್ಲಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಭಯೋತ್ಪಾಕರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಾಕಿಸ್ತಾನದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಗುಂಪುಗಳ ಭಯೋತ್ಪಾದಕರು ಜಮ್ಮು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂದು ಯೂರೋಪಿಯನ್ ಯೂನಿಯನ್ ಟುಡೇ ಸಂಸ್ಥೆಯು ನಿಕ್ಕಿ ಏಷ್ಯಾದ ವರದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ನೆರೆಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಹೊಸ ಸರಕಾರ ರಚನೆಯಾದ ಬೆನ್ನಲ್ಲೇ, ಆ ನೆಲದಿಂದ ಭಾರತ ಮತ್ತು ರಷ್ಯಾಕ್ಕೂ ಭಯೋತ್ಪಾದನೆಯ ಅಪಾಯ ಹರಡುವ ಆತಂಕ ಇದೆ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ನಿಕೋಲೆ ಕುದಶೇವ್ ಆತಂಕ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದ ತಾಲಿಬಾನಿಗಳು ತಮ್ಮ ಪ್ರಾಬಲ್ಯ ಸಾಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗಲೇ ಪಾಕ್ ಪೋಷಿತ ಉಗ್ರ ಸಂಘಟನೆಗಳಾದ ಲಷ್ಕರೆ ತೊಯ್ಬಾ, ಜೈಷ್ ಮೊಹಮ್ಮದ್, ಅಲ್-ಬದ್ರ್ ಮುಖಂಡರು ಜಮ್ಮು-ಕಾಶ್ಮೀರಕ್ಕೆ ತಮ್ಮ ಉಗ್ರರನ್ನು ನುಸುಳಿಸುವಲ್ಲಿ ನಿರತರಾಗಿದ್ದರು. ಇದರ ಫಲವಾಗಿ ಸದ್ಯ ಕಾಶ್ಮೀರ ಕಣಿವೆಯಲ್ಲಿ 200 ಪಾಕ್ ಉಗ್ರರು ಸಕ್ರಿಯವಾಗಿದ್ದಾರೆ.
ಐಎಸ್ಐ ಸೂಚನೆಯಂತೆ ಶೀಘ್ರವೇ ಅವರು ದೇಶದಲ್ಲಿ ದಾಳಿ ನಡೆಸಲಿದ್ದಾರೆ ಎಂದು ಗುಪ್ತಚರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸುಮಾರು ಇಪ್ಪತ್ತು ವರುಷಗಳ ಬಳಿಕ ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಪಡೆದ ಬೆನ್ನಲ್ಲೇ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದ್ದು ಈಗ ಅಫ್ಘಾನಿಸ್ತಾನವನ್ನೇ ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ತಾಲಿಬಾನ್ ಕಾಬೂಲ್ಗೆ ದಾಳಿ ಮಾಡುತ್ತಿದ್ದಂತೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದಾರೆ.