ನೀನು ಕನ್ನಡದವನಾ, ನಿನ್ನೂರು ಯಾವ್ದು, ನಿಂಗ್ಯಾಕೋ ಇದೆಲ್ಲ: ಪ್ರಕಾಶ್ ರಾಜ್ ವಿರುದ್ಧ ರೊಚ್ಚಿಗೆದ್ದ ಖ್ಯಾತ ನಟ
ಕನ್ನಡಿಗ, ಬಹುಭಾಷಾ ನಟ ಪ್ರಕಾಶ್ ರಾಜ್ ಹಾಗೂ ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಡುವಿನ ರಾಜಕೀಯ ಜಟಾಪಟಿ ಈಗ ಟಾಲಿವುಡ್ನಲ್ಲಿ ಭಾರಿ ಬಿರುಗಾಳಿ ಸೃಷ್ಟಿಸಿದೆ. ತೆಲಂಗಾಣ ರಾಜಕಾರಣಕ್ಕೆ ಪವನ್ ಕಲ್ಯಾಣ್ ಎಂಟ್ರಿ ಕೊಡುವ ವಿಚಾರವಾಗಿ ಪ್ರಕಾಶ್ ರಾಜ್ ಆಡಿದ್ದ ವ್ಯಂಗ್ಯದ ಮಾತುಗಳಿಗೆ, ಈಗ ಪವನ್ ಕಲ್ಯಾಣ್ ಅವರ ಪರಮಾಪ್ತ ಹಾಗೂ ಖ್ಯಾತ ನಟ, ನಿರ್ಮಾಪಕ ಬಂಡ್ಲ ಗಣೇಶ್ (Bandla Ganesh) ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ. ಪ್ರಕಾಶ್ ರಾಜ್ ಅವರ ಹಿನ್ನೆಲೆಯನ್ನೇ ಪ್ರಶ್ನಿಸಿ ಬಂಡ್ಲ ಗಣೇಶ್ ಮಾಡಿರುವ ಟ್ವೀಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿನ್ನೂರು ಯಾವುದು? ನೀನು ಕನ್ನಡದವನಾ? ಎಂದಿದ್ದಾರೆ ಗಣೇಶ್.
ವಿವಾದದ ಅಸಲಿ ಹಿನ್ನೆಲೆ ಏನು?
ಇತ್ತೀಚೆಗೆ ತೆಲಂಗಾಣದಲ್ಲಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ಸಿಗದಿದ್ದಾಗ, ನಟ ಹಾಗೂ ಆಂಧ್ರದ ಡೆಪ್ಯುಟಿ ಸಿಎಂ ಪವನ್ ಕಲ್ಯಾಣ್ "ತೆಲಂಗಾಣ ಯಾರ ಅಪ್ಪನ ಜಾಗೀರೂ ಅಲ್ಲ" ಎಂದು ಆಕ್ರೋಶ ಹೊರಹಾಕಿದ್ದರು. ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಆದರೆ, ಇದೇ ವಿಷಯವನ್ನು ಇಟ್ಟುಕೊಂಡು ನಟ ಪ್ರಕಾಶ್ ರಾಜ್ ಅವರು ಪವನ್ ಕಲ್ಯಾಣ್ ಕಾಲೆಳೆದಿದ್ದರು.

ಪ್ರಕಾಶ್ ರಾಜ್ ಅವರು ಪವನ್ ಕಲ್ಯಾಣ್ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ತಮ್ಮ ಎಕ್ಸ್ ಖಾತೆಯಲ್ಲಿ, "ನೀವು ಬರ್ತೀನಿ ಅಂದರೆ ನಾವೇನು ಬೇಡ ಅಂತೀವಾ? ಖಂಡಿತಾ ಬನ್ನಿ ಸರ್... ಆದರೆ ಬರೋದಕ್ಕಿಂತ ಮುಂಚೆ ಒಂದು ವಿಷಯ ಸ್ಪಷ್ಟಪಡಿಸಿ. ನೀವು ನಿಮ್ಮ ಸ್ವಂತ ಬಲದ ಮೇಲೆ ಬರ್ತಿದ್ದೀರಾ? ಮೈತ್ರಿ ಮಾಡಿಕೊಂಡು ಬರ್ತಿದ್ದೀರಾ? ಅಥವಾ ಒಂಟಿಯಾಗಿ (ಸೋಲೋ) ಬರ್ತಿದ್ದೀರಾ? ಬರೋದಕ್ಕಿಂತ ಮುಂಚೆ ಅದನ್ನೊಂದು ಸ್ವಲ್ಪ ನಮಗೆ ತಿಳಿಸಿ" ಎಂದು ಬರೆದು ಕೊನೆಯಲ್ಲಿ #justasking (ಕೇವಲ ಕೇಳ್ತಿದ್ದೀನಿ ಅಷ್ಟೇ) ಎಂಬ ಹ್ಯಾಶ್ಟ್ಯಾಗ್ ಬಳಸಿದ್ದರು. ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಟಿಡಿಪಿ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದನ್ನು ಚುಚ್ಚುವ ಸಲುವಾಗಿ ಪ್ರಕಾಶ್ ರಾಜ್ ಈ ರೀತಿ ಪೋಸ್ಟ್ ಮಾಡಿದ್ದರು ಎಂದು ಚರ್ಚೆಯಾಗುತ್ತಿದೆ.
నీకెందుకురా ప్రతి దాంట్లో వేలుపెట్టడం? అసలు నువ్వెవడివి? తమిళోడివా, తెలుగోడివా, కన్నడోడివా? నీ ఊరు ఏది, నీ కథ ఏంటి? ప్రతి ఊర్లో, ప్రతి ఇష్యూలో దూరి జడ్జిమెంట్లు ఇవ్వడానికి నువ్వేమైనా కలెక్టర్వా లేక దేశ ప్రధాని వా? ఎక్కడ చూసినా నువ్వే, ఏ విషయం వచ్చినా నువ్వే. నీ బతుక్కి పని… https://t.co/ELkBZtEUh8
— BANDLA GANESH. (@ganeshbandla) June 4, 2026
ನಿನ್ನ ಅಡ್ರೆಸ್ ತಿಳ್ಕೋ ಎಂದ ಬಂಡ್ಲ ಗಣೇಶ್
ಪವನ್ ಕಲ್ಯಾಣ್ ಎಂದರೆ ಸಾಕು ಪ್ರಾಣ ಬಿಡುವ ನಿರ್ಮಾಪಕ ಬಂಡ್ಲ ಗಣೇಶ್, ಪ್ರಕಾಶ್ ರಾಜ್ ಅವರ ಈ ಟ್ವೀಟ್ ನೋಡಿ ರೊಚ್ಚಿಗೆದ್ದಿದ್ದಾರೆ. ಪ್ರಕಾಶ್ ರಾಜ್ ಅವರ ಅಸ್ತಿತ್ವ ಮತ್ತು ಗುರುತನ್ನೇ ಪ್ರಶ್ನಿಸಿ ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ. "ನಿನಗೇಕೆ ಪ್ರತಿ ವಿಷಯದಲ್ಲೂ ಮೂಗು ತೂರಿಸುವ ಬುದ್ಧಿ? ಅಸಲಿಗೆ ನೀನ್ಯಾರು? ತಮಿಳಿಗನಾ, ತೆಲುಗಿನವನಾ ಅಥವಾ ಕನ್ನಡಿಗನಾ? ನಿನ್ನ ಊರು ಯಾವುದು, ನಿನ್ನ ಕಥೆ ಏನು? ಪ್ರತಿಯೊಂದು ಊರಿನ ವಿಚಾರದಲ್ಲೂ ನುಗ್ಗಿ ಜಡ್ಜ್ಮೆಂಟ್ ಕೊಡಲು ನೀನೇನು ಜಿಲ್ಲಾ ಕಲೆಕ್ಟರಾ ಅಥವಾ ದೇಶದ ಪ್ರಧಾನಮಂತ್ರಿಯಾ? ಎಲ್ಲಿ ನೋಡಿದರೂ ನೀನೇ ಇರುತ್ತೀಯಾ. ನಿನ್ನ ಬದುಕಿನಲ್ಲಿ ಬೇರೆ ಕೆಲಸವಿಲ್ಲದಿದ್ದರೆ ಅದನ್ನು ನೋಡು, ಎಲ್ಲರ ವಿಷಯದಲ್ಲೂ ದೂರಿ ಹೀರೋ ತರ ಫೀಲ್ ಆಗಬೇಡ. ಮೊದಲು ನಿನ್ನ ಅಡ್ರೆಸ್ ಏನೆಂದು ನೀನು ತಿಳಿದುಕೊ, ಆಮೇಲೆ ಜಗತ್ತನ್ನು ಬದಲಾಯಿಸುವ ಪ್ರಯತ್ನ ಮಾಡು!" ಎಂದು ಬಂಡ್ಲ ಗಣೇಶ್ ತಮ್ಮ ಪೋಸ್ಟ್ನಲ್ಲಿ ತಿರುಗೇಟು ನೀಡಿದ್ದಾರೆ.
ಮೂಲತಃ ಕರ್ನಾಟಕದವರಾದ ಪ್ರಕಾಶ್ ರಾಜ್ ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ 2017ರಲ್ಲಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಗುರುತಿನ ಬಗ್ಗೆ ಮಾತನಾಡಿದ್ದ ಪ್ರಕಾಶ್ ರಾಜ್, "ನಾನು ತಮಿಳಿಗನಲ್ಲ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ನಾನು ನಿಮ್ಮೊಂದಿಗೇ ಬದುಕಿದ್ದೇನೆ, ನಿಮ್ಮಲ್ಲಿ ಒಬ್ಬನಾಗಿದ್ದೇನೆ. ಎಲ್ಲರಿಗಿಂತಲೂ ನಾನೂ ಸಮಾನ ತಮಿಳಿಗ" ಎಂದು ಹೇಳಿಕೆ ನೀಡಿದ್ದರು. ಸದ್ಯ ಬಂಡ್ಲ ಗಣೇಶ್ ಅವರ ಈ ಕೌಂಟರ್ ಟ್ವೀಟ್ಗೆ ಪವನ್ ಕಲ್ಯಾಣ್ ಆಗಲಿ ಅಥವಾ ಪ್ರಕಾಶ್ ರಾಜ್ ಆಗಲಿ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಟಾಲಿವುಡ್ ಅಂಗಳದಲ್ಲಿ ಮಾತ್ರ ಈ ಇಬ್ಬರ ವಾಕ್ಸಮರ ತಾರಕಕ್ಕೇರಿದೆ.













Click it and Unblock the Notifications