ನಾನು ಕೋಳಿ ಸಾಯಿಸೋಲ್ಲ, ಸಾಯಿಸದ ಕೋಳಿಯೇ ಕೊಡಿ ಅಂತೇನೆ, ಮೀನಿನ ಜೊತೆ ಮಾತನಾಡೋ ರಕ್ಷಿತಾ ಸ್ಟೈಲಿಗೆ ಭಾಗ್ಯಲಕ್ಷ್ಮಿ ಸುಷ್ಮಾ ಶಾಕ್
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ಬಾಸ್ ಕನ್ನಡ ಸೀಸನ್ 12'ರಲ್ಲಿ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದ ಯೂಟ್ಯೂಬ್ ಸ್ಟಾರ್ ರಕ್ಷಿತಾ ಶೆಟ್ಟಿ ಈಗ ಮತ್ತೊಂದು ಹೊಸ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ತಮ್ಮದೇ ಆದ ವಿಶಿಷ್ಟ ಶೈಲಿಯ ಹಾಗೂ ಕರಾವಳಿ ಸೊಗಡಿನ ಭಾಷೆಯ ಮೂಲಕ ಬಿಗ್ಬಾಸ್ ಮನೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ರಕ್ಷಿತಾ, ಇದೀಗ ಕಲರ್ಸ್ ಕನ್ನಡ ವಾಹಿನಿಯ ಬಹುನಿರೀಕ್ಷಿತ 'ಕ್ವಾಟ್ಲೆ ಕಿಚನ್' ಅಡುಗೆ ರಿಯಾಲಿಟಿ ಶೋಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಗ್ರ್ಯಾಂಡ್ ಲಾಂಚ್ ಪ್ರೋಮೋ ಈಗ ಬಿಡುಗಡೆಯಾಗಿದ್ದು, ಅದರಲ್ಲಿ ರಕ್ಷಿತಾ ಶೆಟ್ಟಿ ನಡೆದುಕೊಂಡ ರೀತಿಗೆ ನಿರೂಪಕಿ ಸುಷ್ಮಾ ರಾವ್ ಹಾಗೂ ಜಡ್ಜ್ ಮೇಘನಾ ರಾಜ್ ಸೇರಿದಂತೆ ಅಲ್ಲಿದ್ದವರೆಲ್ಲರೂ ಒಂದು ಕ್ಷಣ ದಂಗಾಗಿದ್ದಾರೆ.
ಸತ್ತ ಮೀನಿನ ಜೊತೆ ರಕ್ಷಿತಾ ಸಂಭಾಷಣೆ
ಮೂಲತಃ ಯೂಟ್ಯೂಬ್ನಲ್ಲಿ ತಮ್ಮ ವಿಭಿನ್ನ ಅಡುಗೆ ವಿಡಿಯೋಗಳ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿ 'ಯುಟ್ಯೂಬ್ ಸ್ಟಾರ್' ಎನಿಸಿಕೊಂಡಿದ್ದ ರಕ್ಷಿತಾ ಶೆಟ್ಟಿ ಅವರಿಗೆ ಅಡುಗೆ ಮಾಡುವುದು ಹೊಸದೇನಲ್ಲ. ಆದರೆ 'ಕ್ವಾಟ್ಲೆ ಕಿಚನ್' ವೇದಿಕೆಯ ಮೇಲೆ ಅವರು ಮಾಡಿದ ಒಂದು ಕೆಲಸ ಇಡೀ ಸೆಟ್ಗೆ ನಗು ಉಕ್ಕಿಸುವಂತೆ ಮಾಡಿದೆ. ಅಡುಗೆಗಾಗಿ ತಂದಿಟ್ಟಿದ್ದ ಸತ್ತ ಮೀನನ್ನು ಕೈಯಲ್ಲಿ ಹಿಡಿದುಕೊಂಡ ರಕ್ಷಿತಾ, ಅದರ ಮುಖದ ಮುಂದೆ ಕೈ ಸನ್ನೆ ಮಾಡುತ್ತಾ "ಮಾತಾಡು ಮಾತಾಡು" ಎಂದು ಸತ್ತ ಮೀನಿನ ಜೊತೆಯೇ ಮಾತನಾಡಲು ಶುರು ಮಾಡಿದ್ದಾರೆ. ಬಿಗ್ಬಾಸ್ ಮನೆಯಲ್ಲೂ ತಮ್ಮ ವಿಚಿತ್ರ ಹಾಗೂ ಮುಗ್ಧ ವರ್ತನೆಯಿಂದಲೇ ಗುರುತಿಸಿಕೊಂಡಿದ್ದ ರಕ್ಷಿತಾ ಅವರ ಈ 'ಮೀನಿನ ಸಂಭಾಷಣೆ'ಯನ್ನು ನೋಡಿ ವೇದಿಕೆಯಲ್ಲಿದ್ದವರು ಶಾಕ್ ಆಗಿದ್ದಾರೆ.

ಸುಷ್ಮಾ ಕಾಲೆಳೆದಾಗ ರಕ್ಷಿತಾ ಕೊಟ್ಟ ಕೌಂಟರ್
ರಕ್ಷಿತಾ ಅವರ ಈ ಕ್ವಾಟ್ಲೆ ಕೆಲಸವನ್ನು ನೋಡಿದ ತಕ್ಷಣವೇ ಕಾರ್ಯಕ್ರಮದ ನಿರೂಪಕಿ, 'ಭಾಗ್ಯಲಕ್ಷ್ಮಿ' ಧಾರಾವಾಹಿ ಖ್ಯಾತಿಯ ಸುಷ್ಮಾ ರಾವ್ ಅವರು ರಕ್ಷಿತಾ ಅವರ ಕಾಲೆಳೆಯಲು ಮುಂದಾಗಿದ್ದಾರೆ. "ಅಲ್ಲಮ್ಮಾ, ಮೀನನ್ನು ನೀನೇ ಸಾಯಿಸಿ, ಈಗ ಅದನ್ನೇ ಹಿಡಿದುಕೊಂಡು ಮಾತಾಡು ಮಾತಾಡು ಅಂತೀಯಲ್ಲ" ಎಂದು ರಕ್ಷಿತಾ ಕಾಲೆಳೆದಿದ್ದಾರೆ. ಇದಕ್ಕೆ ರಕ್ಷಿತಾ ಶೆಟ್ಟಿ ತಮ್ಮದೇ ಸ್ಟೈಲಿನಲ್ಲಿ ಬಿಡುಗಡೆ ಮಾಡಿದ ಕೌಂಟರ್ ಉತ್ತರ ಮಾತ್ರ ಅದ್ಭುತವಾಗಿತ್ತು.
"ನಾನು ಕೋಳಿಯನ್ನಾಗಲಿ, ಮೀನನ್ನಾಗಲಿ ನಾನು ಸಾಯಿಸಲ್ಲ... ಅಂಗಡಿಗೆ ಹೋಗಿ ನನಗೆ ಸಾಯಿಸದ ಕೋಳಿಯೇ ಕೊಡಿ ಅಂತ ಕೇಳ್ತೀನಿ (ಅಂದರೆ ಈಗಾಗಲೇ ಕಟ್ ಮಾಡಿರುವ ಕೋಳಿ)" ಎಂದು ಅತ್ಯಂತ ಗಂಭೀರವಾಗಿ ಉತ್ತರ ಕೊಟ್ಟಿದ್ದಾರೆ. ರಕ್ಷಿತಾ ಅವರ ಈ ವಿಚಿತ್ರ ಹಾಗೂ ತರ್ಕವಿಲ್ಲದ ಲಾಜಿಕ್ ಉತ್ತರವನ್ನು ಕೇಳಿದ ತಕ್ಷಣ ಕಾರ್ಯಕ್ರಮದ ತೀರ್ಪುಗಾರರ ಸೀಟಿನಲ್ಲಿದ್ದ ಖ್ಯಾತ ನಟಿ ಮೇಘನಾ ರಾಜ್ ಅವರು ಒಂದು ಕ್ಷಣ ತಲೆ ಮೇಲೆ ಕೈ ಹೊತ್ತು ದಂಗಾಗಿ ಕುಳಿತುಕೊಂಡಿದ್ದಾರೆ. ಇಡೀ ಸೆಟ್ ನಗುವಿನ ಕಡಲಲ್ಲಿ ತೇಲುವಂತಾಗಿದೆ. ಬಿಗ್ಬಾಸ್ ಮುಗಿದ ತಕ್ಷಣವೇ ರಕ್ಷಿತಾ ಶೆಟ್ಟಿ ಅವರ ಈ ಹೊಸ ಇನ್ನಿಂಗ್ಸ್ ಮತ್ತು ಅವರ ಎಂದಿನಂತೆ ಮಾತುಗಳು 'ಕ್ವಾಟ್ಲೆ ಕಿಚನ್' ಕಾರ್ಯಕ್ರಮದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದ್ದ ಕರಾವಳಿ ಹುಡುಗಿ ಈಗ ಟಿವಿ ಅಡುಗೆ ಶೋನಲ್ಲಿ ಯಾವ ರೀತಿಯ ಧಮಾಕಾ ಮಾಡಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕ್ವಾಟ್ಲೆ ಕಿಚನ್ ಯಶಸ್ವಿಯಾದ ಬೆನ್ನಲ್ಲೇ ಇದೀಗ ಹೊಸ ಸೀಸನ್ ಕೂಡ ಶುರುವಾಗುತ್ತಿರುವುದು ಕಿರುತೆರೆ ಪ್ರೇಕ್ಷಕರಿಗೆ ಹಬ್ಬವೇ ಸರಿ.












Click it and Unblock the Notifications