ಶ್ರೀನಗರ: 'ರಿಪಬ್ಲಿಕ್ ಟಿವಿ' ಅರ್ನಬ್ ಗೋಸ್ವಾಮಿಗೆ ಜಾಮೀನು ರಹಿತ ವಾರೆಂಟ್
ಶ್ರೀನಗರ, ಫೆಬ್ರವರಿ 26: "ರಿಪಬ್ಲಿಕ್ ಟಿವಿ" ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಇತರ ರಿಪಬ್ಲಿಕ್ ಟಿವಿಯ ಮೂವರು ಸಿಬ್ಬಂದಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿ ಶ್ರೀನಗರದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 23ರಂದು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಖುದ್ದು ಹಾಜರುಪಡಿಸುವಂತೆ ಸಂಬಂಧಿತ ಎಸ್ಎಸ್ಪಿಗೆ ನ್ಯಾಯಾಲಯವು ನಿರ್ದೇಶಿಸಿದೆ.
ರಿಪಬ್ಲಿಕ್ ಟಿ.ವಿ. ಪ್ರಸಾರ ಮಾಡಿದ ಸುದ್ದಿ ವಿರುದ್ಧ ಪಿಡಿಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ನಯೀಮ್ ಅಖ್ತರ್ ಅವರು ದೂರು ಸಲ್ಲಿಸಿದ್ದರು. ಆರೋಪಿಯ ವಿಚಾರಣೆ ನಡೆಸಿ, ಶಿಕ್ಷೆ ನೀಡಬೇಕು ಎಂದು ಕೋರಿದ್ದರು.
ಅರ್ನಬ್ ಗೋಸ್ವಾಮಿ, ಆದಿತ್ಯರಾಜ್ ಕೌಲ್, ಝೀನತ್ ಝೆಶಾನ್ ಫಝಿಲ್, ಸಕ್ಲಾ ಭಟ್ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಿಜೆಎಂ ನ್ಯಾಯಾಲಯ ಡಿಸೆಂಬರ್ 27ರಂದು ರಿಪಬ್ಲಿಕ್ ನ್ಯೂಸ್ ಚಾನೆಲ್ನ ಆಡಳಿತ ನಿರ್ದೇಶಕರಿಗೆ ಸೂಚಿಸಿತ್ತು. ಆದರೆ, ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.

ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರರು ಅತ್ಮಾಹುತಿ ಬಾಂಬ್ ದಾಳಿ ನಡೆಸಿ 44 ಸಿಆರ್ ಪಿಎಫ್ ಯೋಧರ ಹುತಾತ್ಮರಾಗಲು ಕಾರಣರಾಗಿದ್ದರು. ಇದಾದ ಬಳಿಕ ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು ನನ್ನ ಕಕ್ಷಿದಾರರು ಕೋರ್ಟಿಗೆ ಖುದ್ದು ಹಾಜರಾಗಲು ಸಾಧ್ಯವಿಲ್ಲ ಎಂದು ರಿಪಬ್ಲಿಕ್ ಟಿವಿ ಪರ ವಕೀಲರು ವಿನಾಯತಿ ಕೋರಿದ್ದರು.
ಆದರೆ, ಕಣಿವೆ ರಾಜ್ಯದಲ್ಲಿನ ದೈನಂದಿನ ಆಗು ಹೋಗುಗಳ ಬಗ್ಗೆ ವರದಿ ಮಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ ನ್ಯಾಯಾಧೀಶರು, ಖುದ್ದು ಹಾಜರಾಗುವಂತೆ ಸೂಚಿಸಿದರು. ಆದರೆ, ವೈಯಕ್ತಿಕ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರ್ಯ ಹರಣ ಎಂದಿರುವ ರಿಪಬ್ಲಿಕ್ ಟಿವಿ ಪರ ವಕೀಲರು, ಜಯಲಲಿತಾ ಸರ್ಕಾರ ಇದ್ದ ಕಾಲದಲ್ಲಿ 2002 ರಿಂದ 2006ರ ಅವಧಿಯಲ್ಲಿ ಮಾಧ್ಯಮಗಳ ವಿರುದ್ಧ 120 ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದನ್ನು ಉಲ್ಲೇಖಿಸಿದ್ದಾರೆ.












Click it and Unblock the Notifications