ಆಪರೇಷನ್ ಕಾಶ್ಮೀರ: ಹೊಸ ಸಾಹಸಕ್ಕೆ ಅಣಿಯಾದ್ರಾ ಪ್ರಧಾನಿ ಮೋದಿ?
ಶ್ರೀನಗರ, ಆಗಸ್ಟ್ 5: ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸದೊಂದು ಪ್ರಯೋಗಕ್ಕೆ ಕೇಂದ್ರ ಸರ್ಕಾರ ಕೈಹಾಕುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಕಾಶ್ಮೀರಿ ನಾಯಕರ ಟ್ವೀಟ್ಗಳು ಹಾಗೂ ಸ್ಥಳೀಯ ಸರ್ಕಾರದ ಕ್ರಮಗಳು ಇದಕ್ಕೆ ಮುನ್ಸೂಚನೆ ನೀಡುತ್ತಿವೆ. ಇಂದಿನಿಂದ ಕಾಶ್ಮೀರಿ ಕಣಿವೆಯಲ್ಲಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಅನಿರ್ಧಿಷ್ಠಾವಧಿಗೆ ರಜೆ ಘೋಷಿಸಲಾಗಿದೆ.
ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಇಂಟರ್ನೆಟ್ ಸೇವೆಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಯಾವುದೇ ಗಲಾಟೆಗಳು ಆಗಬಾರದು ಎಂಬ ಕಾರಣಕ್ಕೆ ಕಾಶ್ಮೀರಾದ್ಯಂತ ಸೆಕ್ಷನ್ 144 ಹೇರಲಾಗಿದೆ.

ಏತನ್ಮಧ್ಯೆ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸೇರಿ ಕಾಶ್ಮೀರಿ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗುತ್ತಿದೆ ಎಂದು ಅವರೇ ಟ್ವೀಟ್ ಮಾಡಿಕೊಂಡಿದ್ದಾರೆ.
ಇವೆಲ್ಲಾ ಬೆಳವಣಿಗೆಗಳು ಕಾಶ್ಮೀರದಲ್ಲಿನ ಹೊಸ ನಡೆಗೆ ಆರಂಭಿಕ ಹಂತಗಳು ಎನ್ನಲಾಗುತ್ತಿದೆ. ಒಂದೇ ವಾರದಲ್ಲಿ 38 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದ ಬೆನ್ನಲ್ಲೇ ಈ ಎಲ್ಲಾ ಕ್ರಮಗಳು ಜರುಗುತ್ತಿವೆ.
ಕಾಶ್ಮೀರ ಸಮಸ್ಯೆಗೆ ಪರಿಹಾರ ಆರಂಭ ಎಂದ ಅನುಪಮ್ ಖೇರ್: ಕಣಿವೆ ರಾಜ್ಯದಲ್ಲಿ ಇವೆಲ್ಲಾ ದಿಢೀರ್ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್ ಕತೂಹಲಕಾರಿ ಟ್ವೀಟ್ ಮಾಡಿದ್ದಾರೆ.
''ಕಾಶ್ಮೀರ್ ಸೊಲ್ಯೂಷನ್ ಹ್ಯಾಸ್ ಬಿಗನ್''(ಕಾಶ್ಮೀರ ಸಮಸ್ಯೆಗೆ ಪರಿಹಾ ಸೂತ್ರ ಶುರು) ಎಂದು ಖೇರ್ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಬಗ್ಗೆ ಸಾಕಷ್ಟು ವಿಸ್ತೃತ ಮಾಹಿತಿ ನೀಡಲಿದ್ದರೂ ಆಡಳಿತಾರೂಢ ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿರುವ ಖೇರ್ ಮಾಡಿರುವ ಈ ಟ್ವೀಟ್ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.
ಖುದ್ದು ಕಾಶ್ಮೀರಿ ಪಂಡಿತರಾಗಿರುವ ಅನುಪಮ್ ಖೇರ್ ಆಗಿರುವ ಪತ್ನಿ ಬಿಜೆಪಿ ಸಂಸದೆ ಕೂಡ ಆಗಿದ್ದಾರೆ.ಹೀಗಾಗಿ ಯಾವುದೇ ಸೂಕ್ತ ಮಾಹಿತಿ ಇಲ್ಲದೆ ಅವರು ಈ ರೀತಿಯ ಟ್ವೀಟ್ ಮಾಡಿರಲಿಕ್ಕಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಇಂದು ಕೇಂದ್ರ ಸಚಿವ ಸಂಪುಟ ಸಭೆ:ಸಾಮಾನ್ಯವಾಗಿ ಬುಧವಾರ ಅಥವಾ ಗುರುವಾರ ನಡೆಯಬೇಕಿದ್ದ, ಕೇಂದ್ರ ಸಚಿವ ಸಂಪುಟ ಸಭೆ ಇಂದು ಸಂಸತ್ ಭವನದಲ್ಲಿ ನಡೆಯುತ್ತಿದೆ.ಕಾಶ್ಮೀರ ವಿಚಾರದ ಬಗ್ಗೆ ಈ ಸಭೆಯಲ್ಲಿ ಏನಾದರೂ ತೀರ್ಮಾನ ಮಾಡಬಹುದೇನೋ ಎಂಬ ಸಂದೇಹಗಳು ವ್ಯಕ್ತವಾಗುತ್ತಿದೆ.
ಇದಕ್ಕೆ ಪೂರಕವಾಗಿಯೇ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗೃಹ ಕಾರ್ಯದರ್ಶಿ ಹಾಗೂ ಭದ್ರತಾ ಸಲಹೆಗಾರರೊಂದಿಗೆ ತುರ್ತು ಸಭೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಕಾಶ್ಮೀರ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆ ಇದೆ.












Click it and Unblock the Notifications