ರಾಷ್ಟ್ರೀಯ ಭದ್ರತೆಗೆ ಅಪಾಯ: ಮೆಹಬೂಬಾ ಮುಫ್ತಿಗೆ ಪಾಸ್ಪೋರ್ಟ್ ನಿರಾಕರಣೆ
ಶ್ರೀನಗರ, ಮಾರ್ಚ್ 29: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಸಂದರ್ಭದಿಂದ ಒಂದು ವರ್ಷಕ್ಕೂ ಹೆಚ್ಚು ಸಮಯ ಬಂಧನಕ್ಕೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಪಾಸ್ಪೋರ್ಟ್ ನೀಡಲು ಸರ್ಕಾರ ನಿರಾಕರಿಸಿದೆ. ಮುಫ್ತಿ ಅವರು ಪ್ರಸ್ತುತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಪರಾಧ ತನಿಖಾ ಇಲಾಖೆಯ ವರದಿಯನ್ನು ಉಲ್ಲೇಖಿಸಿರುವ ಪಾಸ್ಪೋರ್ಟ್ ಕಚೇರಿ, ತಮಗೆ ಪಾಸ್ಪೋರ್ಟ್ ನೀಡಲು ನಿರಾಕರಿಸಿದೆ ಎಂದು ಮುಫ್ತಿ ಟ್ವಿಟ್ಟರ್ನಲ್ಲಿ ಆರೋಪಿಸಿದ್ದಾರೆ.
'ನನ್ನ ಪಾಸ್ಪೋರ್ಟ್ ಭಾರತದ ಭದ್ರತೆಗೆ ಅಪಾಯಕಾರಿ ಎಂಬ ಸಿಐಡಿ ವರದಿಯ ಆಧಾರದಲ್ಲಿ ಪಾಸ್ಪೋರ್ಟ್ ಕಚೇರಿಯು ನನಗೆ ಅದನ್ನು ನೀಡಲು ನಿರಾಕರಿಸಿದೆ. 2019ರ ಆಗಸ್ಟ್ನಿಂದ ಕಾಶ್ಮೀರದಲ್ಲಿ ಸಾಧಿಸಿರುವ ಸಹಜತೆಯ ಮಟ್ಟ ಇದು. ಮಾಜಿ ಮುಖ್ಯಮಂತ್ರಿಯೊಬ್ಬರು ಪಾಸ್ಪೋರ್ಟ್ ಹೊಂದುವುದು ಬೃಹತ್ ದೇಶದ ಸಾರ್ವಭೌಮತೆಗೆ ಬೆದರಿಕೆಯಾಗಲಿದೆ' ಎಂದು ಮುಫ್ತಿ ಹೇಳಿದ್ದಾರೆ.

ತಮ್ಮ ಟ್ವೀಟ್ನಲ್ಲಿ ಅವರು ಪಾಸ್ಪೋರ್ಟ್ ಸೇವಾ ಕೇಂದ್ರದಿಂದ ಬಂದ ಪತ್ರವನ್ನು ಅಡಕ ಮಾಡಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ಮುಫ್ತಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಕಚೇರಿ, ಪೊಲೀಸ್ ಪರಿಶೀಲನೆಗೆ ಅದನ್ನು ಕಳುಹಿಸಲಾಗಿದ್ದು, ಆದರೆ ವರದಿಯಲ್ಲಿ ಋಣಾತ್ಮಕ ಅಭಿಪ್ರಾಯ ಸ್ವೀಕೃತವಾಗಿದೆ ಎಂದು ತಿಳಿಸಿದೆ.
ಮುಫ್ತಿ ಅವರ ಹಿಂದಿನ ಪಾಸ್ಪೋರ್ಟ್ ಅವಧಿ ಕಳೆದ ಮೇ 31ರಂದು ಮುಕ್ತಾಯವಾಗಿದ್ದರಿಂದ ಅವರು ಡಿಸೆಂಬರ್ ತಿಂಗಳಲ್ಲಿ ಹೊಸ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮುಫ್ತಿ ವಿರುದ್ಧ ಸಿಐಡಿಯಲ್ಲಿ ಪ್ರತಿಕೂಲ ವರದಿ ದಾಖಲಾಗಿದೆ ಎಂದು ಅಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ಇದರ ವಿರುದ್ಧ ಮುಫ್ತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
2019ರ ಆಗಸ್ಟ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸುವ ಮುನ್ನ ಮುಫ್ತಿ ಹಾಗೂ ನೂರಾರು ಮಂದಿಯನ್ನು ಬಂಧನದಲ್ಲಿ ಇರಿಸಲಾಗಿತ್ತು. ಕಳೆದ ವರ್ಷದ ಅಕ್ಟೋಬರ್ನಲ್ಲಿ ಮುಫ್ತಿ ಅವರನ್ನು ಬಿಡುಗಡೆ ಮಾಡಲಾಗಿತ್ತು.












Click it and Unblock the Notifications