ಭಾರತ-ಪಾಕಿಸ್ತಾನ ಮಾತುಕತೆ ಆರಂಭಿಸಲಿ: ಮೆಹಬೂಬ ಮುಫ್ತಿ
ಶ್ರೀನಗರ, ನವೆಂಬರ್ 14: ಭಾರತ ಮತ್ತು ಪಾಕಿಸ್ತಾನಗಳು ತಮ್ಮ ರಾಜಕೀಯ ತಿಕ್ಕಾಟಗಳನ್ನು ಮೀರಿ ಬೆಳೆಯಬೇಕು ಮತ್ತು ಮಾತುಕತೆಗಳನ್ನು ಪ್ರಾರಂಭಿಸಬೇಕು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿಕ ಎರಡೂ ಕಡೆಗಳಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚುತ್ತಿರುವುದು ತೀವ್ರ ನೋವನ್ನುಂಟು ಮಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನವು ಶುಕ್ರವಾರ ದಾಳಿ ನಡೆಸಿದ ಬಳಿಕ ಎಲ್ಒಸಿಯಲ್ಲಿ ಉಭಯ ದೇಶಗಳು ನಡೆಸಿದ ತೀವ್ರ ಕಾದಾಟದಿಂದ ಎರಡೂ ಕಡೆಯ ಸೈನಿಕರು ಮತ್ತು ನಾಗರಿಕರು ಬಲಿಯಾದ ಹಿನ್ನೆಲೆಯಲ್ಲಿ ಮುಫ್ತಿ ಈ ಹೇಳಿಕೆ ನೀಡಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಪರಸ್ಪರ ಒಪ್ಪಿಕೊಂಡು ಜಾರಿಗೊಳಿಸಿದ್ದ ಕದನ ವಿರಾಮದ ಮರುಸ್ಥಾಪನೆಯು ಉಭಯ ದೇಶಗಳು ಮಾತುಕತೆಯನ್ನು ಪುನರ್ ಆರಂಭಿಸಲು ಸೂಕ್ತವಾದ ತಳಹದಿಯಾಗಲಿದೆ ಎಂದು ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.
'ಎಲ್ಒಸಿಯಲ್ಲಿ ಎರಡೂ ಕಡೆಗಳಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚುತ್ತಿರುವುದು ನೋವನ್ನುಂಟುಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನಗಳ ನಾಯಕತ್ವವು ತಮ್ಮ ರಾಜಕೀಯ ಕಲಹಗಳನ್ನು ಮೀರಿ ಬೆಳೆದರೆ ಮತ್ತು ಮಾತುಕತೆಯನ್ನು ಪ್ರಾರಂಭಿಸಿದರೆ ಮಾತ್ರವೇ ಇದನ್ನು ತಡಗಟ್ಟಬಹುದು. ವಾಜಪೇಯಿ ಮತ್ತು ಮುಷರಫ್ ಅವರು ಪರಸ್ಪರ ಒಪ್ಪಿಕೊಂಡು ಅನುಷ್ಠಾನಕ್ಕೆ ತಂದ ಕದನ ವಿರಾಮವು ಆರಂಭಕ್ಕೆ ಉತ್ತಮ ಸಂಗತಿಯಾಗಲಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.












Click it and Unblock the Notifications