ಜಮ್ಮು-ಕಾಶ್ಮೀರಕ್ಕೆ ಶೀಘ್ರ ಅಮಿತ್ ಶಾ ಭೇಟಿ, ಹೆಚ್ಚಿದ ಬಿಗಿ ಭದ್ರತೆ
ಶ್ರೀನಗರ, ಅಕ್ಟೋಬರ್ 21: ಕಳೆದ ಕೆಲವು ವಾರಗಳಿಂದ ಉಗ್ರರ ಉಪಟಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶೀಘ್ರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
ಈಗಾಗಲೇ ಶ್ರೀನಗರದ ಹಲವು ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಶ್ರೀನಗರದಲ್ಲಿ ಸಂಚರಿಸುವ ವಾಹನಗಳು ಮತ್ತು ವಾಹನ ಸವಾರರ ಗುರುತಿನ ಚೀಟಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಇತ್ತೀಚೆಗೆ ಭಯೋತ್ಪಾದಕರ ದಾಳಿಯಲ್ಲಿ ಸ್ಥಳೀಯರಲ್ಲದ ನಾಲ್ಕು ಮಂದಿ ಸೇರಿದಂತೆ 9 ನಾಗರಿಕರು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದು, ಈ ವಿಚಾರವಾಗಿ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ.

ಶ್ರೀನಗರಕ್ಕೆ ಅಮಿತ್ ಶಾ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶ್ರೀನಗರಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಅಕ್ಟೋಬರ್ 23-24 ರಂದು ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.
ಉಗ್ರರು ದಾಳಿ ನಡೆಸಿ, ನಾಗರಿಕರನ್ನು ಕೊಲ್ಲುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮಾಹಿತಿ ನೀಡಿದೆ. ಇದರ ಜೊತೆಗೆ ಬಂಧಿತರಲ್ಲಿ ನಾಲ್ಕು ಮಂದಿ ವಿವಿಧ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.
ಶ್ರೀನಗರ, ಪುಲ್ವಾಮಾ, ಕುಲ್ಗಾಂ ಮತ್ತು ಬಾರಾಮುಲ್ಲ ಸೇರಿದಂತೆ ಸುಮಾರು 11 ಸ್ಥಳಗಳಲ್ಲಿ ಎನ್ಐಎ ಬುಧವಾರ ದಾಳಿ ನಡೆಸಿದೆ. ಈ ವೇಳೆ ಕುಲ್ಗಾಂನ ಸುಹೇಲ್ ಅಹ್ಮದ್ ಥೋಕರ್, ಹಜ್ರತ್ಬಾಲ್ನ ಕಮ್ರಾನ್ ಅಶ್ರಫ್ ರೇಶಿ, ಶ್ರೀನಗರದ ರಯಿದ್ ಬಶೀರ್ ಮತ್ತು ಶ್ರೀನಗರದ ಹನನ್ ಗುಲ್ಜಾರ್ ದಾರ್ ಅವರನ್ನು ಬಂಧಿಸಲಾಗಿದೆ ಎಂದು ಎನ್ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಬುಧವಾರ ಬಂಧಿತರಾಗಿರುವ ನಾಲ್ಕೂ ಮಂದಿ ಭಯೋತ್ಪಾದನಾ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಯೋತ್ಪಾದನಾ ಗುಂಪುಗಳಿಗೆ ಸಾಮಗ್ರಿಗಳು ಮತ್ತಿತರ ನೆರವನ್ನು ಇವರು ನೀಡುತ್ತಿದ್ದರು. ಇವರ ಜೊತೆಗೆ ಇದರ ಜೊತೆಗೆ ಕೆಲವೊಂದು ಶಸ್ತ್ರಗಳನ್ನು, ಜಿಹಾದಿ ಡಾಕ್ಯುಮೆಂಟ್ಗಳು ಹಾಗೂ ಪೋಸ್ಟರ್ಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಂದು ಎನ್ಐಎ ಹೇಳಿದೆ.
ಅಕ್ಟೋಬರ್ 10ರಂದು ಜಮ್ಮು ಕಾಶ್ಮೀರದಲ್ಲಿ ನಾಗರಿಕ ಹತ್ಯೆಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನು ಎನ್ಐಎ ದಾಖಲಿಸಿಕೊಂಡಿದೆ. ಈ ಪ್ರಕರಣದಲ್ಲಿ ಈವರೆಗೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭದ್ರತಾ ಪಡೆಗಳು ಮತ್ತು ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೋಯ್ಬಾದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಲಷ್ಕರ್-ಎ-ತೋಯ್ಬಾದ ಕಮಾಂಡರ್ ಗುಲ್ಜಾರ್ ಅಹ್ಮದ್ ರೇಶಿ ಕೂಡಾ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ನಿಖರ ಮಾಹಿತಿ ಆಧರಿಸಿ ಆಶ್ಮುಜಿ ಮತ್ತು ದೇವ್ಸರ್ ಮಾರ್ಗದಲ್ಲಿ ಸಂಜೆ 7.40ಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.
ಮೊದಲಿಗೆ ಶರಣಾಗಲು ಭಯೋತ್ಪಾದಕರಿಗೆ ಮನವಿ ಮಾಡಲಾಯಿತು. ಆದರೂ ಅವರು ಗುಂಡಿನ ದಾಳಿ ನಡೆಸಿದಾಗ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ಉಗ್ರರನ್ನು ಗುಂಡಿಕ್ಕಿ ಕೊಂದಿವೆ.
ಪ್ರಕರಣದ ನಂತರ ಎಕೆ 47 ಸೇರಿದಂತೆ ಹಲವು ಶಸ್ತ್ರಗಳನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. ಗುಲ್ಜಾರ್ ಅಹ್ಮದ್ ರೇಶಿ ಜೊತೆಗೆ ಇಮ್ರಾನ್ ದಾರ್ ಎಂಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಈ ಇಬ್ಬರೂ ಭಯೋತ್ಪಾದಕರು ಜಮ್ಮು ಕಾಶ್ಮೀರದಲ್ಲಿದ್ದ ಬಿಹಾರ ಮೂಲದ ಇಬ್ಬರನ್ನು ಕೊಂದಿದ್ದರು. ಅಕ್ಟೋಬರ್ 17ರಂದು ಈ ಘಟನೆ ನಡೆದಿತ್ತು.
2020ರ ಜುಲೈನಿಂದ ಈತ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ. ಪುಲ್ವಾಮಾದ ಲಿಟ್ಟರ್ನಲ್ಲಿ ಒಬ್ಬ ಬಡ ಕಾರ್ಮಿಕನ ಹತ್ಯೆಯಲ್ಲೂ ಭಾಗಿಯಾಗಿದ್ದ. ಕಳೆದ 2 ವಾರಗಳಲ್ಲಿ 15 ಭಯೋತ್ಪಾದಕರ ಹತ್ಯೆ ಮಾಡಲಾಗಿದೆ.












Click it and Unblock the Notifications