111 ಹುದ್ದೆಯ ಸೇನಾ ನೇಮಕಾತಿಗೆ ಕನಿಷ್ಠ 2500 ಕಾಶ್ಮೀರಿ ಯುವಕರು ಭಾಗಿ
ಶ್ರೀನಗರ್, ಫೆಬ್ರವರಿ 19: ಉಗ್ರರ ದಾಳಿಯಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಅರ್ ಪಿಎಫ್ ಸಿಬ್ಬಂದಿ ನಲವತ್ತು ಮಂದಿ ಹುತಾತ್ಮರಾಗಿ ಒಂದು ವಾರ ಕೂಡ ಕಳೆದಿಲ್ಲ. ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ 111 ಹುದ್ದೆಗಳ ತುಂಬಲು ಭಾರತೀಯ ಸೇನಾ ನೇಮಕಾತಿ ನಡೆದಿದ್ದು, ಕನಿಷ್ಠ 2500 ಯುವಕರು ಪಾಲ್ಗೊಂಡಿದ್ದರು.
ಜಮ್ಮು-ಕಾಶ್ಮೀರದಲ್ಲಿ ಸೇನೆ ನೇಮಕಾತಿಗೆ ಸಾವಿರಾರು ಮಂದಿ ಪಾಲ್ಗೊಳ್ಳುವುದು ಹೊಸತಲ್ಲ. ಏಕೆಂದರೆ ಇಲ್ಲಿ ನಿರುದ್ಯೋಗ ಸಮಸ್ಯೆ ಇದೆ. 111 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಜೀವನಕ್ಕೆ ದುಡಿಮೆಯ ಜತೆಗೆ ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ಕೂಡ ದೊರೆತಂತಾಗುತ್ತದೆ ಎಂದು ಭಾರತೀಯ ಸೇನೆಯ ಅಧಿಕಾರಿ ತಿಳಿಸಿದ್ದಾರೆ.
ಸೇನೆಗೆ ಸೇರುವುದರಿಂದ ನಮ್ಮ ದೇಶಕ್ಕೆ ಸೇವೆ ಸಲ್ಲಿಸಬಹುದು. ಜತೆಗೆ ನಮ್ಮ ಕುಟುಂಬದ ಪಾಲನೆಯೂ ಸಲೀಸಾಗುತ್ತದೆ. ಈ ರಾಜ್ಯದಲ್ಲಿ ನಮಗೆ ಉದ್ಯೋಗಾವಕಾಶಗಳೇ ಕಡಿಮೆ ಎಂದು ನೇಮಕಾತಿಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಯೊಬ್ಬನು ಹೇಳಿಕೊಂಡಿದ್ದಾನೆ. ಶ್ರೀನಗರ್ ನಿಂದ ಎಪ್ಪತ್ತೈದು ಕಿಲೋಮೀಟರ್ ದೂರಕ್ಕೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ಇದೆ.

ಮತ್ತೊಬ್ಬ ಅಭ್ಯರ್ಥಿ ಮಾತನಾಡಿ, ನಾವು ಕಾಶ್ಮೀರ ಬಿಟ್ಟ ಆಚೆ ಹೋಗಲು ಸಾಧ್ಯವಿಲ್ಲ. ಇದು ನಮಗೆ ಅದ್ಭುತ ಅವಕಾಶ. ಇನ್ನೂ ಹೆಚ್ಚು ಹುದ್ದೆಗಳನ್ನು ನಮಗೆ ನೀಡಲಿ ಎಂದು ಬಯಸುತ್ತೇವೆ. ಕಾಶ್ಮೀರಿ ಅಧಿಕಾರಿಗಳನ್ನೇ ನೇಮಿಸಿದರೆ, ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಳೀಯರ ಜತೆಗೆ ಮಾತನಾಡಬಲ್ಲರು ಹಾಗೂ ಸದ್ಯದ ಬಿಕ್ಕಟ್ಟು ಚೆನ್ನಾಗಿ ನಿರ್ವಹಿಸಬಲ್ಲರು ಎಂದಿದ್ದಾನೆ.
ಮೂರು ವರ್ಷಗಳ ಹಿಂದೆ ಜಮ್ಮು-ಕಾಶ್ಮೀರದಲ್ಲಿನ ನಿರುದ್ಯೋಗದ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿತ್ತು. ಅದಕ್ಕೆ ಕಾರಣ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಗೊತ್ತಾಗಿದ್ದು ಏನೆಂದರೆ, ಆಡಳಿತದಿಂದ ಸರಿಯಾದ ಬೆಂಬಲ ಇಲ್ಲ. ಜತೆಗೆ ಪಾರದರ್ಶಕತೆ ಕೊರತೆ ಇದೆ ಎಂಬ ಸಂಗತಿ.
ಇವುಗಳ ಜತೆಗೆ ವ್ಯಾಪಾರ ನೋಂದಣಿ ಕಠಿಣ ಪ್ರಕ್ರಿಯೆಗಳು, ಅಧಿಕ ವೆಚ್ಚ ಹಾಗೂ ವ್ಯಾಪಾರ ಆರಂಭಿಸಲು ನೆರವಿನ ಕೊರತೆ ಮತ್ತು ಏಕ ಗವಾಕ್ಷಿ ಅನುಮತಿ ಅವಕಾಶ ಇಲ್ಲದಿರುವುದೇ ಕಾರಣ ಎನ್ನಲಾಗಿದೆ.












Click it and Unblock the Notifications