ಸಾರ್ವಕಾಲಿಕ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅನಿಲ್ ಕುಂಬ್ಳೆ, ಕೆಎಲ್ ರಾಹುಲ್: ಕನ್ನಡಿಗರ ಹೃದಯ ಗೆದ್ದ ವಿರಾಟ್ ಕೊಹ್ಲಿ
IPL RCB Virat Kohli: ಐಪಿಎಲ್ 2026ರ ಕಹಳೆ ಮೊಳಗಿದ್ದು, ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಡಲಿವೆ. ಇದಕ್ಕೂ ಮುನ್ನ ಆರ್ಸಿಬಿ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ತಮ್ಮ 18 ವರ್ಷಗಳ ಸುದೀರ್ಘ ಐಪಿಎಲ್ ಪ್ರಯಾಣದ ನೆನಪುಗಳನ್ನು ಮೆಲುಕು ಹಾಕುತ್ತಾ, ಸಾರ್ವಕಾಲಿಕ ಅತ್ಯುತ್ತಮ ಆಟಗಾರರ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಇದರಲ್ಲಿ ಇಬ್ಬರು ಕನ್ನಡಿಗರ ಹೆಸರು ಇರುವುದು ವಿಶೇಷವಾಗಿದೆ.
ವಿರಾಟ್ ಕೊಹ್ಲಿ ಅವರು ತಮ್ಮ ನೆಚ್ಚಿನ ಆಟಗಾರರನ್ನು ಒಳಗೊಂಡ ಆರ್ಸಿಬಿಯ ಸಾರ್ವಕಾಲಿಕ ಅತ್ಯುತ್ತಮ ಆಟಗಾರರ ಇಲೆವೆನ್ ಅನ್ನು ಹೆಸರಿಸಿದ್ದಾರೆ. ಇದರಲ್ಲಿ ಕನ್ನಡಿಗ ಕೆಎಲ್ ರಾಹುಲ್ ಹಾಗೂ ದಿಗ್ಗಜ ಅನಿಲ್ ಕುಂಬ್ಳೆ ಅವರ ಹೆಸರು ಇರುವುದು ವಿಶೇವಾಗಿದೆ.

ಕೊಹ್ಲಿ ಹೆಸರಿಸಿದ ಬ್ಯಾಟಿಂಗ್ ವಿಭಾಗ
ಆರಂಭಿಕರಾಗಿ ವಿರಾಟ್ ಕೊಹ್ಲಿ ಸ್ವತಃ ತಾವೇ ಕಣಕ್ಕಿಳಿಯಲಿದ್ದು, ಅವರಿಗೆ ಸಾಥ್ ನೀಡಲು ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್, ನಾಲ್ಕನೇ ಸ್ಥಾನದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್, 5ನೇ ಸ್ಥಾನದಲ್ಲಿ ಪ್ರಸ್ತುತ ಆರ್ಸಿಬಿ ನಾಯಕ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಿದ್ದಾರೆ.
ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಅನುಭವಿ ದಿನೇಶ್ ಕಾರ್ತಿಕ್ ಅವರಿಗೆ ವಹಿಸಲಿದ್ದಾರೆ.
ಕೊಹ್ಲಿ ಹೆಸರಿಸಿದ ಬೌಲಿಂಗ್ ವಿಭಾಗ
ವೇಗದ ಬೌಲಿಂಗ್ಗಾಗಿ ಡೇಲ್ ಸ್ಟೈನ್, ಮಿಚೆಲ್ ಸ್ಟಾರ್ಕ್ ಮತ್ತು ಹರ್ಷಲ್ ಪಟೇಲ್ ಅವರಿಗೆ ಅವಕಾಶ ನೀಡಲಾಗಿದ್ದು, ಸ್ಪಿನ್ ವಿಭಾಗದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ಹಾಗೂ ಯುಜ್ವೇಂದ್ರ ಚಹಲ್ ಅವರು ಸ್ಥಾನ ಪಡೆದಿದ್ದಾರೆ. ಈ ಇಲೆವೆನ್ನ ವಿಶೇಷತೆ ಅಂದರೆ, ತಂಡದ ನಾಯಕತ್ವವನ್ನು ರಜತ್ ಪಾಟಿದಾರ್ಗೆ ನೀಡಿರುವುದು. ಆರ್ಸಿಬಿಗೆ ಮೊದಲ ಬಾರಿ ಐಪಿಎಲ್ ಟ್ರೋಫಿ ಗೆದ್ದು ಕೊಟ್ಟ ನಾಯಕನಿಗೆ ಕೊಹ್ಲಿ ಈ ಮೂಲಕ ಗೌರವ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ಕೊಹ್ಲಿ ಆಯ್ಕೆ ಮಾಡಿರುವ ಈ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿರುವುದು ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
ಕೊಹ್ಲಿ ಹೆಸರಿಸಿದ ಸಾರ್ವಕಾಲಿಕ ಆರ್ಸಿಬಿ ಪ್ರೇಯಿಂಗ್ 11: ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಕೆಎಲ್ ರಾಹುಲ್, ರಜತ್ ಪಾಟಿದಾರ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಅನಿಲ್ ಕುಂಬ್ಳೆ, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೈನ್, ಯುಜ್ವೇಂದ್ರ ಚಹಲ್.
ಆರ್ಸಿಬಿ-ಕೊಹ್ಲಿ ನಡುವಿನ ನಂಟು
ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಸಂಬಂಧ ಕೇವಲ ಆಟಗಾರ ಮತ್ತು ತಂಡದ ಒಪ್ಪಂದವಲ್ಲ. ಇದು 18 ವರ್ಷಗಳ ಸುದೀರ್ಘ ನಂಬಿಕೆ, ಭಾವನೆ ಮತ್ತು ಬಾಂಧವ್ಯದ ಕಥೆ. ಐಪಿಎಲ್ನ ಆರಂಭದಿಂದಲೂ ಒಂದೇ ಫ್ರಾಂಚೈಸಿಗಾಗಿ ಆಡಿದ ಅಪರೂಪದ ಆಟಗಾರ ಎಂಬ ಹೆಗ್ಗಳಿಕೆ ಅವರದ್ದು. ಎಷ್ಟೋ ಸೋಲುಗಳು, ನಿರಾಸೆಗಳು ಮತ್ತು ಟೀಕೆಗಳು ಎದುರಾದಾಗಲೂ, ಕೊಹ್ಲಿ ತಂಡವನ್ನು ತೊರೆಯುವ ಆಲೋಚನೆಯನ್ನು ಎಂದಿಗೂ ಮಾಡಲಿಲ್ಲ.
ಎಷ್ಟೋ ಬಾರಿ ಹೇಳಿದ "ನನ್ನ ಹೃದಯ ಮತ್ತು ಆತ್ಮ ಬೆಂಗಳೂರಿನಲ್ಲಿದೆ" ಎಂಬ ಅವರ ಮಾತುಗಳು ಈ ತಂಡದ ಮೇಲಿರುವ ಅವರ ಅಪಾರ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ. ಹಣ ಅಥವಾ ಟ್ರೋಫಿಗಳಿಗಿಂತ ಹೆಚ್ಚಾಗಿ, ಅಭಿಮಾನಿಗಳ ಪ್ರೀತಿ ಮತ್ತು ತಂಡದೊಂದಿಗಿನ ಒಡನಾಟವೇ ಅವರಿಗೆ ಮುಖ್ಯವಾಗಿತ್ತು. ಹಲವು ವರ್ಷಗಳ ಕನಸಿನ ನಂತರ, 2025ರಲ್ಲಿ ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಾಗ, ಕಣ್ಣೀರು ಹಾಕಿದ ಕೊಹ್ಲಿ ಅವರು, "ನನ್ನ ಯೌವನ, ನನ್ನ ಶ್ರಮ ಎಲ್ಲವನ್ನೂ ಈ ತಂಡಕ್ಕೆ ಧಾರೆ ಎರೆದಿದ್ದೇನೆ," ಎಂದು ಭಾವುಕರಾಗಿ ನುಡಿದಿದ್ದರು. ಕೊಹ್ಲಿಯ ಈ ಅಚಲ ನಿಷ್ಠೆಯು ಇಂದಿನ ಕ್ರೀಡಾ ಜಗತ್ತಿನಲ್ಲಿ ಅಪರೂಪದ ಉದಾಹರಣೆಯಾಗಿದೆ. ಆರ್ಸಿಬಿ ಮತ್ತು ಕೊಹ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಅಂತಲೇ ಹೇಳಬಹುದು.












Click it and Unblock the Notifications