RCB ಕಪ್ ಗೆಲ್ಲದೇ ಇರಲು ವಿರಾಟ್ ಕೊಹ್ಲಿಯೇ ಕಾರಣ: ಅಂಬಟಿ ರಾಯುಡು ಹೀಗೆ ಹೇಳಿದ್ದು ಏಕೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 17ನೇ ಆವೃತ್ತಿಯನ್ನು ಆಡುತ್ತಿದೆ. ಆದರೆ ಇದುವರೆಗೂ ಒಂದೇ ಒಂದು ಬಾರಿ ಟ್ರೋಫಿಯನ್ನು ಎತ್ತಿಲ್ಲ. 16 ಆವೃತ್ತಿಗಳಲ್ಲಿ ಕಂಡಂತೆಯೇ ಈ ಬಾರಿಯೂ ಆರ್ಸಿಬಿ ಪ್ರದರ್ಶನ ನೀಡುತ್ತಿದೆ. ಇದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ ಎಲ್ಲ ತಂಡಗಳು ಹೆಚ್ಚಾಗಿ ತವರಿನಲ್ಲಿ ಪಂದ್ಯಗಳನ್ನು ಗೆಲ್ಲುತ್ತಿದ್ದರೆ ಆರ್ಸಿಬಿ ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಕಂಡಿದೆ. ಈ ಮೂಲಕ ಬೆಂಗಳೂರು ತಂಡ ತನ್ನ ಮುಂದಿನ ಹಾದಿಯನ್ನು ಜಟಿಲಮಾಡಿಕೊಳ್ಳುತ್ತಿದೆ. ಕಪ್ ಗೆಲುವಿನ ಆಸೆಯನ್ನು ಹೊತ್ತಿರುವ ಅಭಿಮಾನಿಗಳಿಗೆ ಟೂರ್ನಿಯ ಆರಂಭದಲ್ಲಿ ನಿರಾಸೆ ಎದುರಾಗಿದೆ.

ಕಪ್ ಗೆಲ್ಲುವ ನಿಟ್ಟಿನಲ್ಲಿ ಆರ್ಸಿಬಿ ಹೆಸರು ಹಾಗೂ ಜೆರ್ಸಿಯ ಬಣ್ಣವನ್ನು ಬದಲಿ ಮಾಡಿತು. ಆದರೆ, ಇದರಿಂದ ಆಟಗಾರರ ಆಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಫ್ರಾಂಚೈಸಿಗೆ ಈಗ ಅರಿವಾದಂತೆ ಕಾಣುತ್ತಿದೆ.
ತವರಿನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಸೋಲಿಗೆ ಶರಣಾಗಿದೆ. ಲಖ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ 28 ರನ್ಗಳ ಸೋಲು ಕಂಡಿದೆ. ಈ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟರ್ಗಳು ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ದಾರೆ. ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ಮಾತನಾಡಿರುವ ಅಂಬಟಿ ರಾಯುಡು ಆರ್ಸಿಬಿ ಎಡವುತ್ತಿರುವುದು ಎಲ್ಲಿ ಎಂಬ ಬಗ್ಗೆ ಗಮನ ಹರಿಸಿದ್ದಾರೆ.

ರಾಯುಡು ಹೇಳಿದ್ದೇನು?
ವಿರಾಟ್ ಕೊಹ್ಲಿ ಅವರು ಆರ್ಸಿಬಿ ತಂಡವನ್ನು ಬಹುದಿನಗಳ ಕಾಲ ಮುನ್ನಡೆಸಿದ್ದಾರೆ. ತಮ್ಮ ಕಲಾತ್ಮಕ ಬ್ಯಾಟಿಂಗ್ನಿಂದ ಬೆಂಗಳೂರು ತಂಡಕ್ಕೆ ವಿರಾಟ್ ಆಧಾರವಾಗಿದ್ದಾರೆ. ಆದರೆ ವಿರಾಟ್ ಆಯ್ಕೆಯ ವಿಷಯದಲ್ಲಿ ಬೆಂಗಳೂರು ತಂಡಕ್ಕೆ ನೆರವಾಗುತ್ತಿಲ್ಲ. ಯಾರನ್ನು ಖರೀದಿಸಬೇಕು, ಯಾರನ್ನು ಕೈ ಬಿಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿದಂತೆ ಕಾಣುತ್ತಿಲ್ಲ. ಈ ಸಮಸ್ಯೆ ತಂಡದಲ್ಲಿ ಬಹು ವರ್ಷದಿಂದ ಕಾಣುತ್ತಲೇ ಇದೆ. ಬಹು ವರ್ಷಗಳಿಂದ ಆರ್ಸಿಬಿ ಮಧ್ಯಮ ಕ್ರಮಾಂಕ ದುರ್ಬಲವೇ ಆಗಿದೆ. ಈ ವರ್ಷವೂ ಇದೇ ಮುಂದುವರೆದಿದೆ ಎಂದು ಅಂಬಟಿ ಅಭಿಪ್ರಾಯ ಪಟ್ಟಿದ್ದಾರೆ.
ವಿರಾಟ್ ವಿರುದ್ಧ ರಾಯುಡು ಕಿಡಿ
ಆರ್ಸಿಬಿ ತಂಡದ ನಾಯಕರಾಗಿ ಚೇಸಿಂಗ್ ಸ್ಟಾರ್ ಹಲವು ವರ್ಷಗಳ ಕಾಲ ಕಾಣಿಸಿಕೊಂಡಿದ್ದರು. ಇವರ ಮಾತು ಆಟಗಾರರ ಆಯ್ಕೆಯಲ್ಲಿ ಮಹತ್ವದಾಗಿರುತ್ತದೆ. ಆರ್ಸಿಬಿ ತಾವೇ ಬೆಳೆಸಿದ ಆಟಗಾರರನ್ನು ಉಳಿಸಿ ಪೋಷಿಸುವಲ್ಲಿ ವಿಫಲವಾಗಿದೆ. ವಿರಾಟ್ ಆಟಗಾರರ ಬೆಂಬಲಕ್ಕೆ ನಿಲ್ಲುವಲ್ಲಿ ಎಡವಿದ್ದಾರೆ ಎಂದು ಎಂದು ಅಂಬಟಿ ರಾಯುಡು ತಿಳಿಸಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖ್ನೋ ಸೂಪರ್ ಜೈಂಟ್ಸ್ ತಂಡ ಆರ್ಸಿಬಿ ಬೌಲರ್ಗಳನ್ನು ಕಟ್ಟಿ ಹಾಕಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್ಸಿಬಿ ತಂಡದ ಖ್ಯಾತ ನಾಮ ಬ್ಯಾಟರ್ಗಳು ನಿರಾಸೆಯ ದೋಣಿಯಲ್ಲಿ ಪ್ರಯಣ ಬೆಳೆಸಿದ್ದಾರೆ. ಲಖ್ನೋ ವಿರುದ್ಧದ ಪಂದ್ಯದಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ದೇಶೀಯ ಆಟಗಾರ ಮಹಿಪಾಲ್ ಲೊಮ್ರೊರ್ ಹಾಗೂ ರಜತ್ ಪಟಿದಾರ್ ಎದ್ದು ಕಾಣುತ್ತಾರೆ. ಉಳಿದಂತೆ ಎಲ್ಲ ಆಟಗಾರರು ರನ್ ಬರವನ್ನು ಅನುಭವಿಸಿದರು.












Click it and Unblock the Notifications