ಆಡದಿದ್ದರೂ ಕೈಬಿಡದ ಆರ್ಸಿಬಿ, ಬೆನ್ನೆಲುಬಾಗಿ ನಿಂತ ಬುಮ್ರಾ; ನೋವಿನ ಸಂಗತಿ ಬಿಚ್ಚಿಟ್ಟ ಕನ್ನಡತಿ ಶ್ರೇಯಾಂಕಾ ಪಾಟೀಲ್
Shreyanka Patil: ಭಾರತೀಯ ಮಹಿಳಾ ಕ್ರಿಕೆಟ್ ತಾರೆ, ಆರ್ಸಿಬಿಯ 'ಟಗರು ಪುಟ್ಟಿ' ಶ್ರೇಯಾಂಕ ಪಾಟೀಲ್ ಅವರು ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಹಂತಗಳು ಹಾಗೂ ಕಮ್ಬ್ಯಾಕ್ ಮಾಡಿರುವ ಕುರಿತು ಇಂಡಿಯಾ ಟುಡೇ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
2024ರಲ್ಲಿ ಶ್ರೇಯಾಂಕ ಪಾಟೀಲ್ ಸತತವಾಗಿ ಗಾಯಗಳಿಗೆ ಒಳಗಾಗಿದ್ದರು. ಇದರಿಂದ ಅವರು ಸುಮಾರು 16 ತಿಂಗಳುಗಳ ಕಾಲ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿಯಬೇಕಾಯಿತು. ಈ ಸಮಯದಲ್ಲಿ ಅವರು 2025ರ ಡಬ್ಲ್ಯೂಪಿಎಲ್ ಮತ್ತು ಏಕದಿನ ವಿಶ್ವಕಪ್ ಅನ್ನು ಮಿಸ್ ಮಾಡಿಕೊಂಡಿದ್ದರು.

ಶ್ರೇಯಾಂಕಾ ಪಾಟೀಲ್ ಹೇಳಿದ್ದೇನು?
"ಆ ಒಂದು ವರ್ಷದ ಅವಧಿಯಲ್ಲಿ ನಾನು ತುಂಬಾ ಕಲಿತಿದ್ದೇನೆ. ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ನಾನು ಕುಗ್ಗಿದ್ದೆ. 'ನಾನು ಮತ್ತೆ ಆಡಲು ಸಾಧ್ಯವೇ?' ಎಂಬ ಅನುಮಾನಗಳು ಕಾಡುತ್ತಿದ್ದವು," ಎಂದು ಶ್ರೇಯಾಂಕ ಹೇಳಿದ್ದಾರೆ. ಇನ್ನೂ ಗಾಯದಿಂದ ಚೇತರಿಸಿಕೊಳ್ಳಲು ಅವರು ಧ್ಯಾನ ಮತ್ತು ದೃಶ್ಯೀಕರಣ ವಿಧಾನಗಳನ್ನು ಬಳಸಿಕೊಂಡರು. ಈ ಪ್ರಕ್ರಿಯೆಯು ಅವರನ್ನು ಮಾನಸಿಕವಾಗಿ ಸದೃಢಗೊಳಿಸಿತು.
ಶ್ರೇಯಾಂಕಾಗೆ ಧೈರ್ಯ ತುಂಬಿದ ಬುಮ್ರಾ
ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಅವರು ನನಗೆ ಧೈರ್ಯ ತುಂಬಿದ್ದರು ಎಂದು ಶ್ರೇಯಾಂಕ ಪಾಟೀಲ್ ಹೇಳಿಕೊಂಡಿದ್ದಾರೆ. "ಪ್ರತಿಯೊಬ್ಬ ಆಟಗಾರನೂ ಇಂತಹ ಹಂತವನ್ನು ಎದುರಿಸಲೇಬೇಕು, ಅದನ್ನು ಎದುರಿಸಿ ಮುಂದೆ ಸಾಗು" ಎಂಬ ಬುಮ್ರಾ ಅವರ ಮಾತು ತಮಗೆ ನೆರವಾಯಿತು ಎಂದು ಅವರು ಸ್ಮರಿಸಿದ್ದಾರೆ. ಹಾಗೆಯೇ ಕೋಚ್ ಅರ್ಜುನ್ ದೇವ್ ಕೂಡ ಬೆನ್ನೆಲುಬಾಗಿ ನಿಂತಿದ್ದರು ಅಂತಲೂ ತಿಳಿಸಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದ ಮೂಲಕ ಭಾರತ ತಂಡಕ್ಕೆ ಮರಳಿರುವ ಶ್ರೇಯಾಂಕ, ಮುಂಬರುವ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲಲು ನೆರವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನೂ ಐಪಿಎಲ್ನಲ್ಲಿ ಆಡದಿದ್ದರೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನನ್ನು ಉಳಿಸಿಕೊಂಡಿದ್ದು, ತಮಗೆ ಹೆಚ್ಚಿನ ಆತ್ಮವಿಶ್ವಾಸ ನೀಡಿತು ಎಂದು ಅವರು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಸಂದರ್ಶನವು ಒಬ್ಬ ಕ್ರೀಡಾಪಟು ಗಾಯ ಮತ್ತು ವೈಫಲ್ಯಗಳನ್ನು ಮೆಟ್ಟಿ ನಿಂತು ಹೇಗೆ ಮತ್ತೆ ಮೈದಾನಕ್ಕೆ ಮರಳಬಹುದು ಎಂಬುದಕ್ಕೆ ಸ್ಫೂರ್ತಿಯಂತಿದೆ.












Click it and Unblock the Notifications