ಖಂಡಿತ ಗೆಲ್ಲುವುದು ಭಾರತ: ವಿಶ್ವಕಪ್ ಫೈನಲ್ಗೆ ಮುನ್ನ ಡುಂಡಿರಾಜರ ವಿಶೇಷ ಕವಿತೆ
ಕನ್ನಡ ಸಾಹಿತ್ಯ ಲೋಕದಲ್ಲಿ ಹನಿಗವನಗಳ ರಾಜ, ಚುಟುಕು ಚಕ್ರವರ್ತಿ ಎಂದೇ ಜನಪ್ರಿಯರಾಗಿರುವ ಎಚ್.ಡುಂಡಿರಾಜ್ ಈಗ ವಿಶೇಷ ಕವಿತೆ ಮೂಲಕ ಭಾರತ ತಂಡಕ್ಕೆ ಶುಭ ಕೋರಿದ್ದಾರೆ. ನವೆಂಬರ್ 19ರಂದು ಭಾರತ ತಂಡ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಈ ಬಾರಿ ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಅಜೇಯವಾಗಿ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಇದುವರೆಗೆ ಆಡಿರುವ 10 ಪಂದ್ಯಗಳನ್ನು ಗೆದ್ದಿರುವ ಭಾರತಕ್ಕೆ ಪ್ರಶಸ್ತಿ ಎತ್ತಿ ಹಿಡಿಯಲು ಇನ್ನೊಂದು ಗೆಲುವು ಮಾತ್ರ ಬೇಕಾಗಿದೆ.

ಫೈನಲ್ ತಲುಪಿರುವ ಭಾರತ ತಂಡ ಫೈನಲ್ನಲ್ಲಿ ಗೆಲ್ಲಲಿ ಎಂದು ಕೋಟ್ಯಂತರ ಭಾರತೀಯರು ಹಾರೈಸುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ ಕೂಡ ಮಾಡುತ್ತಿದ್ದಾರೆ.
ಕನ್ನಡದ ಖ್ಯಾತ ಸಾಹಿತಿ ಡುಂಡಿರಾಜ್ ಕೂಡ ಭಾರತ ತಂಡಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ. ತಮ್ಮದೇ ಶೈಲಿಯ ಕವಿತೆ ಬರೆಯುವ ಮೂಲಕ ಭಾರತ ತಂಡದ ಬಲವನ್ನು ಬಣ್ಣಿಸಿರುವ ಅವರು, ಈ ಬಾರಿ ಭಾರತ ಕಪ್ ಗೆಲ್ಲಲಿ ಎಂದು ಹಾರೈಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಕವಿತೆಯನ್ನು ಹಂಚಿಕೊಂಡಿದ್ದಾರೆ.
ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯದ ಸಂದರ್ಭದಲ್ಲಿ ನಮ್ಮ ತಂಡಕ್ಕೆ ಸ್ಫೂರ್ತಿ ತುಂಬಲು , ಶುಭಕೋರಲು ರಚಿಸಿದ ಕವಿತೆ. ಓದಿ, ಹಂಚಿಕೊಳ್ಳಿ 🙏 pic.twitter.com/0D6uCdLXCk
— Dundiraj H (@dundiraj_h) November 17, 2023
ಡುಂಡಿರಾಜರ ಕವನ
"ಶುಭಾರಂಭಕ್ಕೆ ಶುಭಮನ್ ನಂಬಿಕೆಯ ಬ್ಯಾಟರು
ಯಾರಿಗಿದೆ ಕೊಹ್ಲಿಯನ್ನು ಕೆಣಕುವ ಮೀಟರು
ನಂತರ ಅಯ್ಯರ್, ರಾಹುಲ್ ಪಾಳಿ
ಎದುರಾಳಿಗಳ ಮೇಲೆ ಭರ್ಜರಿ ದಾಳಿ
ಸೂರ್ಯನಿಗೆ ಇನ್ನೂ ಸಿಕ್ಕಿಲ್ಲ ಅವಕಾಶ
ಸಿಕ್ಕರವ ಚೆಂಡಿಗೆ ತೋರಿಸುವ ಆಕಾಶ!
ಬೌಲಿಂಗಿನಲ್ಲಿ ಬಿಡಿ ಸಮನಾರು ನಮಗೆ?
ಬುಮ್ರಾ, ಸಿರಾಜ್, ಮಹಮ್ಮದ್ ಶಮಿಗೆ?
ಸವ್ಯಸಾಚಿ ಜಡೆಜ, ಕುಲದೀಪ ಯಾದವ
ಚೆಂಡೆಸೆವ ರೀತಿ ಊಹಿಸಲು ಸಾಧ್ಯವಾ?
ಚೆನ್ನಾಗಿದೆ ಕೀಪಿಂಗ್, ಫೀಲ್ಡಿಂಗ್ ಕೂಡಾ
ತಂಡದ ಬೆನ್ನೆಲುವು ರಾಹುಲ್ ದ್ರಾವಿಡ
ನಾಯಕನ ಆಟ ಆಡುವನು ರೋಹಿತ
ಈ ಬಾರಿ ಖಂಡಿತ ಗೆಲ್ಲುವುದು ಭಾರತ
ವಿಶ್ವಕಪ್ ಗೆಲ್ಲುವ ವಿಶ್ವಾಸ
ಭಾರತ ಆಸ್ಟ್ರೇಲಿಯಾ ಫೈನಲ್ನಲ್ಲಿ ಮುಖಾಮುಖಿಯಾಗಲಿದ್ದು, ಭಾರತ ಈ ಬಾರಿ ಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ. ಈ ಬಾರಿ ವಿಶ್ವಕಪ್ನಲ್ಲಿ ಅಜೇಯವಾಗಿ ಫೈನಲ್ಗೆ ಪ್ರವೇಶಿಸಿದ್ದು, 3ನೇ ಬಾರಿ ವಿಶ್ವಕಪ್ ಎತ್ತಿಹಿಡಿಯಲು ರೋಹಿತ್ ಶರ್ಮಾ ಪಡೆ ಕಾಯುತ್ತಿದೆ.
ಕೋಟ್ಯಂತರ ಅಭಿಮಾನಿಗಳ ಕನಸು ಈಡೇರುತ್ತಾ? ಭಾರತ ತಂಡದ ಒಂದು ದಶಕದ ಐಸಿಸಿ ಟ್ರೋಫಿ ಬರ ಕೊನೆಯಾಗುತ್ತಾ? ಅಹಮದಾಬಾದ್ನಲ್ಲಿ ವಿಶ್ವಕಪ್ ಎತ್ತಿಹಿಡಿಯುತ್ತಾ ಭಾರತ? ಎಲ್ಲಾ ಪ್ರಶ್ನೆಗಳಿಗೆ ನವೆಂಬರ್ 19ರಂದು ಭಾನುವಾರ ಉತ್ತರ ಸಿಗಲಿದೆ.












Click it and Unblock the Notifications