ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ನಿಂದ ಸ್ಟಾರ್ ಆಟಗಾರರು ಔಟ್; ಇಬ್ಬರು ಯುವ ಆಟಗಾರರಿಗೆ ಅವಕಾಶ
MI Vs GT IPL 2026: ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್ 20) ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಎಂಐ ಕ್ರಿಶ್ ಭಗತ್ ಮತ್ತು ದನೀಶ್ ಮಲೇರ್ ಇಬ್ಬರು ಯುವ ಆಟಗಾರರಿಗೆ ಅವಕಾಶ ನೀಡಿದೆ. ಹಾಗಾದ್ರೆ ಇವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಐಪಿಎಲ್ 2026ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಕ್ರಿಶ್ ಭಗತ್ ಮತ್ತು ದನೀಶ್ ಮಲೇರ್ ಇಬ್ಬರು ಯುವ ಆಟಗಾರರಿಗೆ ಅವಕಾಶ ನೀಡಿದೆ.

ಮುಂಬೈ ಇಂಡಿಯನ್ಸ್ನಲ್ಲಿ ಮಹತ್ವದ ಬದಲಾವಣೆ
ಐದು ಪಂದ್ಯಗಳಲ್ಲಿ ನಾಲ್ಕು ಸೋಲು ಅನುಭವಿಸಿ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್, ಸೋಮವಾರ ಅಹಮದಾಬಾದ್ನಲ್ಲಿ ನಡೆಯುತ್ತಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಶ್ ಭಗತ್ ಮತ್ತು ದನೀಶ್ ಮಲೇರ್ ಅವರಿಗೆ ಐಪಿಎಲ್ ಪದಾರ್ಪಣೆ ಮಾಡುವ ಅವಕಾಶ ನೀಡಿದೆ. ಇವರ ಬದಲಾವಣೆಯ ಭಾಗವಾಗಿ ರಿಯಾನ್ ರಿಕೆಲ್ಟನ್ ಮತ್ತು ದೀಪಕ್ ಚಹರ್ ಅವರನ್ನು ಕೈಬಿಡಲಾಗಿದೆ.
ಕ್ರಿಶ್ ಭಗತ್ ಯಾರು?
21 ವರ್ಷದ ಕ್ರಿಶ್ ಭಗತ್ ಪಂಜಾಬ್ ಮೂಲದ ಪ್ರತಿಭಾನ್ವಿತ ಆಲ್-ರೌಂಡರ್. ಬಲಗೈ ಬ್ಯಾಟರ್ ಆಗಿರುವ ಇವರು, ಬಲಗೈ ವೇಗದ ಬೌಲರ್ ಕೂಡ ಹೌದು. ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಇವರು, ವೇಗದ ಬೌಲಿಂಗ್ ಮೂಲಕ ಮುಂಬೈ ತಂಡದ ಬೌಲಿಂಗ್ ವಿಭಾಗಕ್ಕೆ ಆಸರೆಯಾಗಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಟ್ರಯಲ್ಸ್ನಲ್ಲಿ ಭಾಗವಹಿಸುತ್ತಿದ್ದ ಇಬರು, ಈ ವರ್ಷ ತಂಡದ ಭಾಗವಾಗಿದ್ದಾರೆ. ಕ್ರಿಶ್ ಭಗತ್ 2026ರ ಡಿವೈ ಪಾಟೀಲ್ ಟಿ20 ಕಪ್ನಲ್ಲಿ ರಿಲಯನ್ಸ್ ತಂಡದ ಪರವಾಗಿ ಆಡಿ ಗಮನ ಸೆಳೆದಿದ್ದರು. ಈ ಸೀಸನ್ನ ಆರಂಭದಿಂದಲೂ ತಂಡದೊಂದಿಗೆ ಸಪೋರ್ಟ್ ಬೌಲರ್ ಆಗಿ ಇವರು ಕಾರ್ಯನಿರ್ವಹಿಸುತ್ತಿದ್ದರು.
ದನೀಶ್ ಮಲೇವಾರ್ ಯಾರು?
ಮತ್ತೊಂದೆಡೆ, ನಾಗ್ಪುರ ಮೂಲದ ದನೀಶ್ ಮಲೇರ್ ಒಬ್ಬ ಪ್ರತಿಭಾವಂತ ಬಲಗೈ ಬ್ಯಾಟರ್. ವಿದರ್ಭ ಪರವಾಗಿ ಎಲ್ಲಾ ಮಾದರಿಯ ದೇಶೀಯ ಕ್ರಿಕೆಟ್ನಲ್ಲಿ ಅವರು ತೋರಿದ ಸ್ಥಿರ ಪ್ರದರ್ಶನದ ಫಲವಾಗಿ, ಅವರಿಗೆ ಚೊಚ್ಚಲ ಐಪಿಎಲ್ ಪಂದ್ಯ ಆಡುವ ಅವಕಾಶ ಸಿಕ್ಕಿದೆ. 2026ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇವರನ್ನು 30 ಲಕ್ಷ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಜಿಟಿ ನಾಯಕ ಶುಭ್ಮನ್ ಗಿಲ್ ಹೇಳಿದ್ದೇನು?
ಶುಭ್ಮನ್ ಗಿಲ್ ಮಾತನಾಡಿ, "ಕಳೆದ ಪಂದ್ಯದಲ್ಲಿ ಸ್ವಲ್ಪ ಇಬ್ಬನಿ ಇತ್ತು, ಒಂದು ವೇಳೆ ಇಂದೂ ಕೂಡ ಇಬ್ಬನಿ ಬಿದ್ದರೆ ಮೊದಲು ಬೌಲಿಂಗ್ ಮಾಡುವುದೇ ಹೆಚ್ಚು ಸೂಕ್ತ ಎಂದು ನನಗೆ ಅನಿಸಿತು. ಗುರಿಯನ್ನು ಬೆನ್ನಟ್ಟುವುದು ಯಾವಾಗಲೂ ಉತ್ತಮ ಆಯ್ಕೆ," ಎಂದು ಹೇಳಿದ್ದಾರೆ. ಅದರಂತೆಯೇ ಟಾಸ್ ಗೆದ್ದು ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
"ನಾವು ಆರಂಭಿಕ ಓವರ್ಗಳಲ್ಲಿ ಬೌಲಿಂಗ್ ಮಾಡುತ್ತಿರುವ ರೀತಿ ನಮಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಕಳೆದ ಎರಡು ಪಂದ್ಯಗಳಲ್ಲೂ ನಮ್ಮ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ನಮ್ಮ ಬೌಲಿಂಗ್ ಲಯವು ಇಂದೂ ಮುಂದುವರಿಯುತ್ತದೆ ಎಂಬ ಭರವಸೆ ಇದೆ. ಇನ್ನು ಮಧ್ಯದ ಓವರ್ಗಳಲ್ಲಿ ರಶೀದ್ ಖಾನ್ ನಮಗೆ ನಿಜಕ್ಕೂ ಅದ್ಭುತವಾಗಿ ಸಾಥ್ ನೀಡುತ್ತಿದ್ದಾರೆ," ಎಂದು ಹೇಳಿದ್ದಾರೆ.
"ಆದ್ದರಿಂದ ನಾವೆಲ್ಲರೂ ಇದೇ ಲಯದಲ್ಲಿ ಮುಂದುವರಿಯುತ್ತೇವೆ ಎಂಬ ಭರವಸೆ ಇದೆ. ಐಪಿಎಲ್ನಂತಹ ಸುದೀರ್ಘ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದರೆ, ಇಡೀ ಸೀಸನ್ ಅನ್ನು ಸ್ಮರಣೀಯವಾಗಿಸಿಕೊಳ್ಳಬಹುದು. ನಾನು ಕೂಡ ಅದನ್ನೇ ಪ್ರಯತ್ನಿಸುತ್ತೇನೆ. ಮುಂಬೈ ಇಂಡಿಯನ್ಸ್ ವಿರುದ್ಧ ಆಡುವುದು ಯಾವಾಗಲೂ ಒಂದು ಸವಾಲಿನ ಕೆಲಸ. ಎಂಐ ಅತ್ಯಂತ ಬಲಿಷ್ಠ ತಂಡವಾಗಿದ್ದು, ಇಂದು ಉತ್ತಮ ಪಂದ್ಯ ನಡೆಯಲಿದೆ ಎಂಬ ನಿರೀಕ್ಷೆಯಿದೆ," ಎಂದು ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಟಾಸ್ ಸೋತ ನಂತರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಈ ಸೀಸನ್ನಲ್ಲಿ ತಂಡದ ಪ್ರದರ್ಶನ ಮತ್ತು ಮಹತ್ವದ ಬದಲಾವಣೆಗಳ ಕುರಿತು ಮಾತನಾಡಿದರು. "ನಾವು ಕೂಡ ಮೊದಲು ಬೌಲಿಂಗ್ ಮಾಡಲು ಇಚ್ಛಿಸಿದ್ದೆವು. ಸಹಜವಾಗಿ, ಒಂದು ಗುಂಪಾಗಿ ನಮಗೆ ಇದು ಈ ಹಂತದ ಕೊನೆಯ ಪಂದ್ಯವಾಗಿದೆ. ನಾವು ಮತ್ತೆ ಒಂದಾಗಿ, ಮುಂಬೈ ಇಂಡಿಯನ್ಸ್ ಅಸ್ಮಿತೆ ಏನು ಮತ್ತು ನಾವು ಎಂತಹ ಆಟವನ್ನು ಆಡಲು ಬಯಸುತ್ತೇವೆ ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ತಂಡದ ಆಟಗಾರರೊಂದಿಗೆ ಸಾಕಷ್ಟು ಮಾತುಕತೆ ನಡೆಸಿದ್ದೇವೆ," ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, ಪ್ರತಿಯೊಂದು ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುವ ಗುರಿ ನಮ್ಮದು. ಮುಖ್ಯವಾಗಿ ನಾವು ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು, ಒಗ್ಗಟ್ಟಿನಿಂದ ಹೋರಾಡಲಿದ್ದೇವೆ," ಎಂದು ತಿಳಿಸಿದರು.












Click it and Unblock the Notifications