ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದ ಮುಂದಿನ ದೊಡ್ಡ ಸ್ಟಾರ್; ಶೂಟರ್ ಮನು ಭಾಕರ್ ಭವಿಷ್ಯ
Vaibhav Sooryavanshi: 15 ವರ್ಷದ ವೈಭವ್ ಸೂರ್ಯವಂಶಿ ಅವರು ಸದ್ಯ ಐಪಿಎಲ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್ಗಳಿಗೆ ಅಕ್ಷರಸಃ ನಡುಕ ಹುಟ್ಟಿಸುತ್ತಿದ್ದಾರೆ. ಚೆಂಡನ್ನ ಮೈದಾನದ ಮೂಲೆ ಮೂಲೆಗೆ ಅಟ್ಟುವ ಸಾಮರ್ಥ್ಯ ಹೊಂದಿರುವ ಈ ಉದಯೋನ್ಮುಖ ಪ್ರತಿಭೆ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. ಇದೀಗ ವೈಭ್ ಆಟದ ಬಗ್ಗೆ ಒಲಿಂಪಿಕ್ ಪದಕ ವಿಜೇತೆ ಭಾರತೀಯ ಶೂಟರ್ ಮನು ಭಾಕರ್ ಅವರಿಗೆ ಪ್ರಶ್ನೆ ಕೇಳಲಾಗಿದೆ. ಈ ವೇಳೆ ಅವರು ಕೊಟ್ಟ ಉತ್ತರ ಇದೀಗ ಸಖತ್ ಸದ್ದು ಮಾಡುತ್ತಿದೆ.
ದೆಹಲಿಯಲ್ಲಿ ನಡೆದ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾದ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸುದ್ದಿಗಾರರು ಮನು ಭಾಕರ್ ಅವರನ್ನು ಮಾತನಾಡಿಸುತ್ತಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಐಪಿಎಲ್ನಲ್ಲಿ ಸಖತ್ ಸದ್ದು ಮಾಡುತ್ತಿರುವ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಯವುದೇ ಹಿಂಜರಿಕೆಯಿಲ್ಲದೆ ಮನು ಭಾಕರ್ ಅವರು ತುಂಬಾ ಸಮಾಧಾನದಿಂದಲೇ ಉತ್ತರಿಸಿದರು.

ವೈಭವ್ ಸೂರ್ಯವಂಶಿ ಶ್ಲಾಘಿಸಿದ ಮನು ಭಾಕರ್
"ಒಳ್ಳೆಯ ಮಾರ್ಗದರ್ಶನ ಮತ್ತು ಸುತ್ತಮುತ್ತ ಉತ್ತಮ ಜನರಿದ್ದರೆ, ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ. ಪ್ರತಿಭೆಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸಾಧನೆಗಳು 6ನೇ ವಯಸ್ಸಿನಲ್ಲೂ ಆಗಬಹುದು ಅಥವಾ 60ರಲ್ಲೂ ಆಗಬಹುದು. ವೈಭವ್ ಸೂರ್ಯವಂಶಿ ಅವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಅವರು ಮುಂದಿನ ದಿನಗಳಲ್ಲಿ ದೊಡ್ಡ ತಾರೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ," ಎಂದು ಹೇಳಿದರು.
ಮನು ಭಾಕರ್ ನಡೆಗೆ ಮೆಚ್ಚುಗೆಗಳ ಸುರಿಮಳೆ
ಸಾಮಾಜಿಕ ಜಾಲತಾಣದಲ್ಲಿ ಮನು ಭಾಕರ್ ಅವರ ಈ ಉತ್ತರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಆದರೂ ನೆಟ್ಟಿಗರು ಮತ್ತು ಕ್ರೀಡಾ ಪ್ರೇಮಿಗಳು ಪತ್ರಕರ್ತರ ಪ್ರಶ್ನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. "ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಮನು ಭಾಕರ್ ಅವರಿಗೆ ಅವರ ಸಾಧನೆಯ ಬಗ್ಗೆ ಕೇಳುವ ಬದಲು ಕ್ರಿಕೆಟ್ ಆಟಗಾರನ ಬಗ್ಗೆ ಪ್ರಶ್ನೆ ಕೇಳಿದ್ದು ಎಷ್ಟರ ಮಟ್ಟಿಗೆ ಸರಿ ಮತ್ತು ನೀವು ಅವರಿಗೆ ಮಾಡಿದ ಅವಮಾನವಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಹೇಳೋದೇನು?
ಇನ್ನೂ ಕೆಲವರು "ಭಾರತದಲ್ಲಿ ಕೇವಲ ಕ್ರಿಕೆಟ್ಗೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇತರ ಕ್ರೀಡೆಗಳ ಸಾಧಕರನ್ನು ಭೇಟಿಯಾದಾಗಲೂ ಕ್ರಿಕೆಟ್ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ. ಯಾಕೆ ಇತರ ಕ್ರೀಡೆಯ ಬಗ್ಗೆ ಪ್ರಶ್ನೆ ಕೇಳುವುದಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೆಕೆಆರ್ ತಂಡದ ಮಾಜಿ ನಿರ್ದೇಶಕ ಜಾಯ್ ಭಟ್ಟಾಚಾರ್ಯ ಅವರು ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿ, "ಆಕೆ ಒಲಿಂಪಿಕ್ ಪದಕ ವಿಜೇತೆ. ಆಕೆಗೆ ವೈಭವ್ ಸೂರ್ಯವಂಶಿ ಬಗ್ಗೆ ಕೇಳುವುದು ಅವರ ಸಾಧನೆಗೆ ಮಾಡಿದ ಅನ್ಯಾಯ. ಮುಂದಿನ ಬಾರಿ ವೈಭವ್ ಅವರನ್ನು ಮನು ಭಾಕರ್ ಬಗ್ಗೆ ಕೇಳಿ ನೋಡಿ, ಆಗ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಗೊತ್ತಾಗುತ್ತದೆ," ಎಂದು ಖಾರವಾಗಿ ಬರೆದಿದ್ದಾರೆ.
ಮನು ಭಾಕರ್ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಮೊದಲ ಕಂಚಿನ ಪದಕವನ್ನು ಗೆದ್ದರು. ನಂತರ, 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಮತ್ತೊಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಈ ಸಾಧನೆಯ ಮೂಲಕ ಮನು ಭಾಕರ್ ಅವರು ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದೇ ಒಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಪದಕದ ಖಾತೆಯನ್ನು ತೆರೆದ ಮೊದಲ ಆಟಗಾರ್ತಿಯೂ ಇವರೇ ಆಗಿದ್ದಾರೆ.












Click it and Unblock the Notifications