ರಾಷ್ಟ್ರಮಟ್ಟದ ಖೋ ಖೋ ಆಟಗಾರ ನಿಧನ, ತೀರ್ಥಹಳ್ಳಿಯಲ್ಲಿ ಅಂತ್ಯಸಂಸ್ಕಾರ
ಶಿವಮೊಗ್ಗ, ಆಗಸ್ಟ್, 09: ಮೆದುಳು ಜ್ವರದಿಂದ ಬಳಲುತ್ತಿದ್ದ ರಾಷ್ಟ್ರಮಟ್ಟದ ಖೋ ಖೋ ಆಟಗಾರ ವಿನಯ್ ಸೀಬನಕೆರೆ ಮೃತಪಟ್ಟಿದ್ದು, ಅಂತ್ಯಸಂಸ್ಕಾರ ತೀರ್ಥಹಳ್ಳಿಯಲ್ಲಿ ನೆರವೇರಿತು.
ತೀರ್ಥಹಳ್ಳಿ ತಾಲೂಕಿನ ಸೀಬನಕೆರೆಯ ವಿನಯ್ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ನ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ.
ತೀರ್ಥಹಳ್ಳಿ; ಸ್ಮಶಾನಕ್ಕೆ ರಸ್ತೆ ಇಲ್ಲ, ಮಳೆಯಲ್ಲೇ ಶವದ ಸಂಸ್ಕಾರ
ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು: ವಿನಯ್ ಸೀಬನಕೆರೆ ಅವರು ತೀರ್ಥಹಳ್ಳಿಯ ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದರು. ಖೋ ಖೋ ಆಟದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ತುಂಬಾ ಹೆಸರು ಮಾಡಿದವರಾಗಿದ್ದರು. ಖೋ ಖೋ ಸ್ಫರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು. ಕರ್ನಾಟಕ ಸರ್ಕಾರ ವಿನಯ್ ಸೀಬನಕೆರೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು.
ತೀರ್ಥಹಳ್ಳಿಯಲ್ಲಿ ಅಂತ್ಯ ಸಂಸ್ಕಾರ: ವಿನಯ್ ಸೀಬನಕೆರೆ ಅವರ ಅಂತ್ಯಸಂಸ್ಕಾರ ಮಂಗಳವಾರ ತೀರ್ಥಹಳ್ಳಿಯಲ್ಲಿ ನೆರೆವೇರಿತು. ಇದಕ್ಕೂ ಮೊದಲು ತೀರ್ಥಹಳ್ಳಿ ಪಟ್ಟಣದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ವಿನಯ್ ಅವರ ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರು, ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ವಿನಯ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದ್ರನ ಮುಗಿಲು ಮುಟ್ಟಿತ್ತು.
ಖೋ ಖೋ ಆಟದಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಯುವ ಆಟಗಾರರಿಗೂ ಸ್ಫೂರ್ತಿ ಆಗಿದ್ದರು. ಭಾರತದ ಖೋ ಖೋ ತಂಡದ ಪ್ರಮುಖ ಆಟಗಾರ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ, ತೀರ್ಥಹಳ್ಳಿಯ ವಿನಯ್ ಅವರ ಅಕಾಲಿಕ ಸಾವು ತೀವ್ರ ದುಃಖ ತಂದಿದೆ. ಹುಮ್ಮನಸ್ಸಿನ ಆಟಗಾರರಾಗಿದ್ದ ಅವರು ತೀರ್ಥಹಳ್ಳಿ ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ.