Vijay Hazare Trophy: ಸತತ ನಾಲ್ಕನೇ ಪಂದ್ಯ ಗೆದ್ದ ಕರ್ನಾಟಕ: ಬಿಹಾರ ವಿರುದ್ಧ 7 ವಿಕೆಟ್ ಜಯ
ದೇಶೀಯ ಟೂರ್ನಿಯಲ್ಲಿ ಕರ್ನಾಟಕ ತಂಡದ ಅಮೋಘ ಪ್ರದರ್ಶನ ಮುಂದುವರೆದಿದೆ. ಕರ್ನಾಟಕ ಸತತ ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಬುಧವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಬಿಹಾರ ತಂಡದ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ದೇವದತ್ ಪಡಿಕ್ಕಲ್ ಅವರ ಅಜೇಯ 93 ರನ್ಗಳ ನೆರವಿನಿಂದ ಕರ್ನಾಟಕ 218 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದೆ.

ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ಕರ್ನಾಟಕ ಬೌಲಿಂಗ್ ದಾಳಿ ಎದುರು ರನ್ ಗಳಿಸಲು ಪರದಾಡಿತು. ಶಕೀಬುಲ್ ಗನಿ 100 ಎಸೆತಗಳಲ್ಲಿ 113 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ ಗಳು ಉತ್ತಮ ಮೊತ್ತ ಗಳಿಸಲು ವಿಫಲವಾದರು.
ಶರ್ಮನ್ ನಿಗ್ರೋದ್ 21 ರನ್, ನಾಯಕ ಅಶುತೋಶ್ ಅಮನ್ 33 ರನ್, ಬಬುಲ್ ಕುಮಾರ್ 17 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಒಂದಂಕಿ ಮೊತ್ತ ಗಳಿಸಿದರು. ಅಂತಿಮವಾಗಿ ಬಿಹಾರ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 217 ರನ್ ಕಲೆ ಹಾಕಿತು.
ಕರ್ನಾಟಕದ ಪರವಾಗಿ ಜಗದೀಶ್ ಸುಚಿತ್ 3 ವಿಕೆಟ್ ಪಡೆದರು. ವಿದ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಕ್ ಮತ್ತು ಸಮರ್ಥ್ ಆರ್ ತಲಾ ಒಂದು ವಿಕೆಟ್ ಪಡೆದರು.
ಪಡಿಕ್ಕಲ್ ಅಮೋಘ ಬ್ಯಾಟಿಂಗ್
ಸುಲಭ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಆರಂಭದಲ್ಲೇ ರವಿಕುಮಾರ್ ಸಮರ್ಥ್ ಅವರ ವಿಕೆಟ್ ಕಳೆದುಕೊಂಡಿತು. 4 ರನ್ ಗಳಿಸಿ ಸಮರ್ಥ್ ಔಟಾದರು. ನಾಯಕ ಮಯಾಂಕ್ ಅಗರ್ವಾಲ್ 28 ರನ್ ಗಳಿಸಿದರು.
ನಿಕಿನ್ ಜೋಸ್ ಮತ್ತು ದೇವದತ್ ಪಡಿಕ್ಕಲ್ ತಲಾ ಅರ್ಧಶತಕ ಗಳಿಸುವ ಮೂಲಕ ಕರ್ನಾಟಕದ ಗೆಲುವನ್ನು ಸುಲಭವಾಗಿಸಿದರು. ನಿಕಿನ್ ಜೋಸ್ 73 ಎಸೆತಗಳಲ್ಲಿ 7 ಬೌಂಡರಿ 2 ಸಿಕ್ಸರ್ ಸಹಿತ 69 ರನ್ ಗಳಿಸಿ ಮಿಂಚಿದರು.
ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ದೇವದತ್ ಪಡ್ಡಿಕ್ಕಲ್ ಇಂದಿನ ಪಂದ್ಯದಲ್ಲಿ ಕೂಡ ಅಬ್ಬರಿಸಿದರು. ಕೇವಲ 57 ಎಸೆತಗಳಲ್ಲಿ 9 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 93 ರನ್ ಗಳಿಸಿದರು. ಮನಿಶ್ ಪಾಂಡೆ ಅಜೇಯ 17 ರನ್ ಗಳಿಸಿದರು.
ಆಡಿರುವ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ 16 ಅಂಕಗಳೊಂದಿಗೆ ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ರನ್ ರೇಟ್ನಲ್ಲಿ ಉತ್ತಮವಾಗಿರುವ ಹರ್ಯಾಣ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಮುಂದಿನ ಪಂದ್ಯದಲ್ಲಿ ಚಂಡೀಗಢವನ್ನು ಎದುರಿಸಲಿದ್ದು, ಡಿಸೆಂಬರ್ 1ರಂದು ಪಂದ್ಯ ನಡೆಯಲಿದೆ.
ಉಭಯ ತಂಡಗಳ ಪ್ಲೇಯಿಂಗ್ 11
ಕರ್ನಾಟಕ : ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್(ನಾಯಕ), ದೇವದತ್ತ್ ಪಡಿಕ್ಕಲ್, ನಿಕಿನ್ ಜೋಸ್, ಮನೀಶ್ ಪಾಂಡೆ, ಶರತ್ ಬಿಆರ್(ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಜಗದೀಶ ಸುಚಿತ್, ವಿಜಯ್ಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ
ಬಿಹಾರ : ಅಲೋಕ್ ಕುಮಾರ್, ಶರ್ಮನ್ ನಿಗ್ರೋಧ್, ಸಚಿನ್ ಕುಮಾರ್, ಬಿಪಿನ್ ಸೌರಭ್(ವಿಕೆಟ್ ಕೀಪರ್), ರಘುವೇಂದ್ರ ಪ್ರತಾಪ್ ಸಿಂಗ್, ಬಾಬುಲ್ ಕುಮಾರ್, ವೀರ್ ಪ್ರತಾಪ್ ಸಿಂಗ್, ನವಾಜ್ ಖಾನ್, ಸಕಿಬುಲ್ ಗನಿ, ಅಶುತೋಷ್ ಅಮಾನ್(ನಾಯಕ), ಹಿಮಾಂಶು ಸಿಂಗ್.












Click it and Unblock the Notifications