IPL Trophy: ಸೂರ್ಯವಂಶಿಯಿಂದಲೇ ರಾಜಸ್ಥಾನ್ ರಾಯಲ್ಸ್ ಮತ್ತೆ ಐಪಿಎಲ್ ಟ್ರೋಫಿ ಗೆಲ್ಲುತ್ತೆ; ಹಿರಿಯ ಆಟಗಾರ ಭವಿಷ್ಯ
IPL Trophy: ಐಪಿಎಲ್ 2026ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಇನ್ನೂ ಈ ಸೋಲಿನೊಂದಿಗೆ ಈ ಬಾರಿಯ ಟೂರ್ನಿಯಿಂದ ಹೊರಬಿದ್ದ ಆರ್ಆರ್ ತಂಡದ ರಿಯಾನ್ ಪರಾಗ್ ಅವರು ವೈಭವ್ ಸೂರ್ಯವಂಶಿ ಆಟದ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಐಪಿಎಲ್ 2026ರ ಪಯಣವು ಕ್ವಾಲಿಫೈಯರ್ 2ರಲ್ಲಿ ಕೊನೆಗೊಂಡಿರಬಹುದು. ಆದರೆ ನಾಯಕ ರಿಯಾನ್ ಪರಾಗ್ ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನ ನಂತರವೂ ಧನಾತ್ಮಕ ಅಂಶಗಳತ್ತ ಗಮನ ಹರಿಸಲು ನಿರ್ಧರಿಸಿದ್ದಾರೆ. ಇದೇ ವೆಳೆ ಅವರು ಈ ಸೀಸನ್ನಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ ತಮ್ಮ ತಂಡ ಹಾಗೂ ವಿಶೇಷವಾಗಿ ಅದ್ಭುತ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಫೈನಲ್ನಲ್ಲಿ ಆರ್ಸಿಬಿ-ಜಿಟಿ ಮುಖಾಮುಖಿ
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಣಡವು ಮೊದಲು ಬ್ಯಾಟ್ ಬೀಸಿದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಪೇರಿಸಿತು. ಆದರೆ ಬಳಿಕ ಬ್ಯಾಟ್ ಬೀಸಿದ ಗುಜರಾತ್ ಟೈಟಾನ್ಸ್ ತಂಡವು ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 215 ರನ್ಗಳ ಬೃಹತ್ ರನ್ಗಳ ಗುರಿ ಭೇದಿಸುವಲ್ಲಿ ಯಶಸ್ವಿಯಾಗಿ ಫೈನಲ್ಗೆ ಲಗ್ಗೆ ಇಟ್ಟಿತು. ಈ ಮೂಲಕ ಜಿಟಿಯು ಮೇ 31ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ.
ಹೆಚ್ಚಿನ ರನ್ಗಳ ಅಗತ್ಯವಿತ್ತು ಎಂದ ಪರಾಗ್
ಪಂದ್ಯದ ನಂತರ ಮಾತನಾಡಿದ ಆರ್ಆರ್ ನಾಯಕ ರಿಯಾನ್ ಪರಾಗ್ ಅವರು, 'ಈ ಪಿಚ್ನಲ್ಲಿ ನಮ್ಮ ತಂಡ ಗಳಿಸಿದ ಮೊತ್ತ ಸ್ವಲ್ಪ ಕಡಿಮೆಯಾಯಿತು. ದ್ವಿತೀಯ ಇನ್ನಿಂಗ್ಸ್ನ ವೇಳೆ ಫ್ಲಡ್ಲೈಟ್ಗಳ ಬೆಳಕಿನಲ್ಲಿ ಬ್ಯಾಟಿಂಗ್ ಮಾಡುವುದು ಮತ್ತಷ್ಟು ಸುಲಭವಾಯಿತು. ನಾವು ಗಳಿಸಿದ ಮೊತ್ತ ಸಾಧಾರಣವಾಗಿದ್ದು, ಅದನ್ನು ಡಿಫೆಂಡ್ ಮಾಡಿಕೊಳ್ಳಬಹುದಾಗಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಪಿಚ್ ಬ್ಯಾಟಿಂಗ್ಗೆ ಮತ್ತಷ್ಟು ಉತ್ತಮವಾಯಿತು ಎಂದು ನನಗೆ ಅನ್ನಿಸಿತು,' ಎಂದು ಹೇಳಿದರು.
ಮೊದಲ ಇನ್ನಿಂಗ್ಸ್ನಲ್ಲಿ ಬೌಲರ್ಗಳಿಗೆ ಪಿಚ್ನಿಂದ ಸ್ವಲ್ಪ ಗ್ರಿಪ್ ಸಿಗುತ್ತಿತ್ತು ಮತ್ತು ಸ್ಲೋವರ್ ಎಸೆತಗಳು ಚೆನ್ನಾಗಿ ಕೆಲಸ ಮಾಡುತ್ತಿದ್ದವು. ನನ್ನ ಪ್ರಕಾರ 230 ರನ್ ಇಲ್ಲಿ ಸಾಧಾರಣ ಮೊತ್ತವಾಗುತ್ತಿತ್ತು. 240ರ ಆಸುಪಾಸಿನ ಮೊತ್ತವಾಗಿದ್ದರೆ ಎದುರಾಳಿಗಳಿಗೆ ನಿಜಕ್ಕೂ ಸವಾಲಾಗಿರುತ್ತಿತ್ತು ಎಂದು ರಿಯಾನ್ ಪರಾಗ್ ಹೇಳಿದರು.
ವೈಭವ್ ಸೂರ್ಯವಂಶಿ ಬಗ್ಗೆ ವಿಶೇಷ ಮೆಚ್ಚುಗೆ
ಈ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಿಕ್ಕ ಅತಿ ದೊಡ್ಡ ಧನಾತ್ಮಕ ಅಂಶವೆಂದರೆ ಅದು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅದ್ಭುತ ಆಟ. ಈ ಬಾಲಕ ಮತ್ತೊಮ್ಮೆ ದೊಡ್ಡ ಪಂದ್ಯದಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಿ 96 ರನ್ ಗಳಿಸುವ ಮೂಲಕ ರಾಜಸ್ಥಾನ್ ತಂಡಕ್ಕೆ ಆಸರೆಯಾದರು. ವೈಭವ್ ಅವರ ವಿಶೇಷತೆಯೆಂದರೆ ಅವರು ಕೇವಲ ಬಲಪ್ರಯೋಗ ಮಾಡಿ ಸಿಕ್ಸರ್-ಬೌಂಡರಿಗಳನ್ನು ಬಾರಿಸುವುದಿಲ್ಲ. ಬದಲಾಗಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್ ಬೀಸುತ್ತಾರೆ ಎಂದು ಪರಾಗ್ ಶ್ಲಾಘಿಸಿದರು.
'ವೈಭವ್ನನ್ನ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ'
'ವೈಭವ್ ಅವರ ಆಟವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಕೇವಲ ಬ್ಯಾಟ್ ಬೀಸಿ ರನ್ ಗಳಿಸುವುದು ಒಂದು ಆಟ. ಆದರೆ ವೈಭವ್ ಹಾಗೆ ಮಾಡುವುದಿಲ್ಲ. ಗುಜರಾತ್ ಟೈಟಾನ್ಸ್ ವಿರುದ್ಧ ಅವರು ಅದ್ಭುತ ಇನ್ನಿಂಗ್ಸ್ ಆಡಿದರು. ಅವರು ಪ್ರತಿಯೊಂದು ಎಸೆತಗಳನ್ನು ಸರಿಯಾಗಿ ಗಮನಿಸಿ ಬಿಗ್ ಶಾಟ್ ಹೊಡೆಯುತ್ತಾರೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಸಾಧನೆಗಳನ್ನು ಮಾಡಲಿದ್ದಾರೆ,' ಎಂದು ಪರಾಗ್ ವಿಶ್ವಾಸ ವ್ಯಕ್ತಪಡಿಸಿದರು.
'ಎರಡನೇ ಟ್ರೋಫಿ ಗೆದ್ದುಕೊಡಲಿದ್ದಾರೆ'
'ಮುಂದಿನ ಅವರ ವೃತ್ತಿಜೀವನದಲ್ಲಿ ಅವರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕಾಗಿ ಅದ್ಭುತವಾಗಿ ಆಡಿ ನಮಗೆ ಎರಡನೇ ಐಪಿಎಲ್ ಟ್ರೋಫಿ ಗೆದ್ದುಕೊಡಲಿದ್ದಾರೆ ಎಂಬ ಭರವಸೆ ನನಗಿದೆ,' ಎಂದು ನಾಯಕ ರಿಯಾನ್ ಪರಾಗ್ ಹೇಳುವ ಮೂಲಕ ಗಮನ ಸೆಳೆದರು.
ರಾಯಲ್ಸ್ ಈ ಸೀಸನ್ನಲ್ಲಿ ಅತ್ಯಂತ ಕಿರಿಯ ಆಟಗಾರರನ್ನೊಳಗೊಂಡ ತಂಡದೊಂದಿಗೆ ಕಣಕ್ಕಿಳಿದಿತ್ತು. ಆರಂಭದಲ್ಲಿ ಅವರು ಪ್ಲೇಆಫ್ ತಲುಪುವ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಇರಲಿಲ್ಲ. ಆದರೆ ಟೂರ್ನಿಯುದ್ದಕ್ಕೂ ಹಲವು ಯುವ ಆಟಗಾರರು ಜವಾಬ್ದಾರಿಯುತ ಆಟ ಆಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದು ಹೇಳಿದರು.
'ಇದನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಈ ಸೀಸನ್ನಲ್ಲಿ ನಮಗೆ ಸಾಕಷ್ಟು ಧನಾತ್ಮಕ ಅಂಶಗಳು ಸಿಕ್ಕಿವೆ. ಯುವ ಆಟಗಾರರನ್ನು ಇಟ್ಟುಕೊಂಡು ನಾವು ಪ್ಲೇಆಫ್ಗೆ ಅರ್ಹತೆ ಪಡೆಯುತ್ತೇವೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಈ ಮಟ್ಟದಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿರುವುದನ್ನು ನೋಡುವುದು ಸಂತೋಷದ ವಿಷಯ. ಇಲ್ಲಿಂದ ಮುಂದೆ ಅವರು ತಮ್ಮ ಆಟವನ್ನು ಇನ್ನೂ ಉತ್ತಮಪಡಿಸಿಕೊಳ್ಳಲಿದ್ದಾರೆ,' ಎಂದು ಹೇಳಿದರು. ಒಟ್ಟಿನಲ್ಲಿ ಹೇಳುವುದಾದರೆ ತಂಡದ ಶ್ರಮ ಹಾಗೂ ವೈಭವ್ ಸೂರ್ಯವಂಶಿ ಅವರ ಆಟದ ವೈಖರಿ ಬಗ್ಗೆ ನಾಯಕ ರಿಯಾನ್ ಪರಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications