ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳಿಗೆ ಆರ್ಸಿಬಿ-ಎಸ್ಆರ್ಎಚ್ ಆಟಗಾರರಿಂದ ವಿಶೇಷ ಗೌರವ
RCB Vs SRH: ಐಪಿಎಲ್ 2026ರ ಉದ್ಘಾಟನಾ ಪಂದ್ಯಕ್ಕೂ ಮುನ್ನ ಕಳೆದ ಬಾರಿ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಮೌನಾಚರಣೆ ಮಾಡಲಾಯಿತು. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ಎರಡೂ ತಂಡಗಳ ಆಟಗಾರರು, ಅಧಿಕಾರಿಗಳು ಮತ್ತು ಅಭಿಮಾನಿಗಳು ಒಂದು ನಿಮಿಷ ಮೌನಾಚರಣೆ ಮಾಡಿದರು.
ಕಳೆದ ವರ್ಷ ಆರ್ಸಿಬಿ ತಂಡವು ಚೊಚ್ಚಲ ಪ್ರಶಸ್ತಿ ಗೆದ್ದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥವಾಗಿ ಈ ವಿಶೇಷ ಗೌರವ ಸಲ್ಲಿಸಲಾಯಿತು. ಗೌರವದ ಸಂಕೇತವಾಗಿ ಎರಡೂ ತಂಡಗಳ ಆಟಗಾರರು ಕಪ್ಪು ಪಟ್ಟಿಯನ್ನು ಧರಿಸಿ ಮೈದಾನಕ್ಕಿಳಿದರು.

ಸ್ಮರಣ ಫಲಕ ಅನಾವರಣ
ಆರ್ಸಿಬಿ ಆಟಗಾರರು ಪಂದ್ಯದ ಆರಂಭಿಕ ಅಭ್ಯಾಸದ ವೇಳೆ 11ನೇ ಸಂಖ್ಯೆಯ ಜೆರ್ಸಿಯನ್ನು ಧರಿಸುವ ಮೂಲಕ ಮೃತಪಟ್ಟವರನ್ನು ನೆನಪಿಸಿಕೊಂಡರು. ಇದಲ್ಲದೆ, ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ 11 ಸೀಟುಗಳನ್ನು ಕಾಯಂ ಆಗಿ ಮೀಸಲಿಡಲಾಗಿದೆ. ಈ ಸೀಟುಗಳು ಮುಂದಿನ ಎಲ್ಲಾ ಪಂದ್ಯಗಳಲ್ಲೂ ಖಾಲಿ ಇರಲಿದ್ದು, ಆ 11 ಅಭಿಮಾನಿಗಳು ಯಾವಾಗಲೂ ತಂಡದ ಭಾಗವಾಗಿರುತ್ತಾರೆ ಎಂಬ ಸಂದೇಶವನ್ನು ಇದು ಸಾರುತ್ತದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್ಸಿಎ) ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಈ 11 ಅಭಿಮಾನಿಗಳ ನೆನಪಿಗಾಗಿ ಸ್ಮರಣ ಫಲಕವನ್ನೂ ಅನಾವರಣಗೊಳಿಸಿದೆ.
ಮೃತಪಟ್ಟವರಿಗೆ ಗೌರವ ಸಲ್ಲಿಸಿದ ಆಟಗಾರರು
ಕಳೆದ ವರ್ಷ ಜೂನ್ 4ರಂದು ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಅಭಿಮಾನಿಗಳ ಸ್ಮರಣಾರ್ಥವಾಗಿ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು. ಗೌರವದ ಸೂಚಕವಾಗಿ ಎರಡೂ ತಂಡಗಳ ಆಟಗಾರರು ಇಂದು ರಾತ್ರಿ ಕಪ್ಪು ಪಟ್ಟಿಯನ್ನು ಧರಿಸಿದ್ದಾರೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಯಾವಾಗಲೂ ಅವರ ಕುಟುಂಬ ಹಾಗೂ ಪ್ರೀತಿಪಾತ್ರರ ಜೊತೆಗಿರುತ್ತವೆ, ಎಂದು ಸೂಚಿಸಿದ್ದಾರೆ.
ಮೇ, 2025ರ ನಂತರ ಮೊದಲ ಬಾರಿಗೆ ಈ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆರಂಭವಾಗುತ್ತಿರುವ ಸಂಭ್ರಮದ ನಡುವೆಯೇ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆ 11 ಅಭಿಮಾನಿಗಳ ನೆನಪಿಗಾಗಿ ಸಿದ್ಧಪಡಿಸಲಾದ ಸ್ಮರಣ ಫಲಕವನ್ನು ಅನಾವರಣಗೊಳಿಸಿತು. ಈ ಸ್ಮರಣ ಫಲಕವನ್ನು ಕ್ರೀಡಾಂಗಣದ ಪ್ರವೇಶ ದ್ವಾರದಲ್ಲೇ ಅಳವಡಿಸಲಾಗಿದ್ದು, ಈ ಮೂಲಕ ಮೃತಪಟ್ಟ ಅಭಿಮಾನಿಗಳಿಗೆ ಗೌರವ ಸೂಚಿಸಲಾಗಿದೆ.
ಕಾಲ್ತುಳಿತ ದುರಂತದಲ್ಲಿ 11 ಜನ ಸಾವು
ಕಳೆದ ವರ್ಷ ಜೂನ್ 4ರಂದು ಈ ದುರಂತ ಸಂಭವಿಸಿತ್ತು. ಆರ್ಸಿಬಿ ತಂಡದ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲುವನ್ನು ಸಂಭ್ರಮಿಸಲು ಸಾವಿರಾರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಜಮಾಯಿಸಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡರು. ಈ ಘಟನೆಯಿಂದಾಗಿ ಅಧಿಕಾರಿಗಳು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಸ್ಥಗಿತಗೊಳಿಸಿ, ಸುರಕ್ಷತಾ ಕ್ರಮಗಳ ಬಗ್ಗೆ ಮರುಪರಿಶೀಲನೆ ನಡೆಸಲು ನಿರ್ಧರಿಸಿದ್ದರು.
ಕಾಲ್ತುಳಿತ ದುರಂತ ಹಿನ್ನೆಲೆ 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್, ರಾಜ್ಯದ ಪ್ರತಿಷ್ಠಿತ ಕೆಎಸ್ಸಿಎ ಮಹಾರಾಜ ಟ್ರೋಫಿ, ದೇಶೀಯ ಪಂದ್ಯಗಳು ಹಾಗೂ 2026ರ ಪುರುಷರ ಟಿ20 ವಿಶ್ವಕಪ್ ಪಂದ್ಯಗಳು ಇಲ್ಲಿ ನಡೆಯಲಿಲ್ಲ. ಆದರೆ, ಅಂದಿನಿಂದ ಈವರೆಗೆ ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್ಸಿಎ, ಜನಸಂದಣಿ ನಿರ್ವಹಣೆ ಮತ್ತು ಕ್ರೀಡಾಂಗಣದ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ಮಾಡಿದೆ.












Click it and Unblock the Notifications