IPL 2023: ಶಾರ್ದೂಲ್ ಠಾಕೂರ್ ಭಾರತದ ಆಂಡ್ರೆ ರಸೆಲ್ ಇದ್ದಂತೆ; ರಜತ್ ಭಾಟಿಯಾ
ಗುರುವಾರ, ಏಪ್ರಿಲ್ 6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ ಸದ್ಯ ಎಲ್ಲರ ಚರ್ಚೆಯ ವಿಷಯವಾಗಿದ್ದಾರೆ.
ಶಾರ್ದೂಲ್ ಠಾಕೂರ್ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಕೇವಲ 29 ಎಸೆತಗಳಲ್ಲಿ 68 ರನ್ ಬಾರಿಸಿದರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್ಗಳಲ್ಲಿ 204 ರನ್ ಗಳಿಸಲು ನೆರವಾದರು. ಹೀಗಾಗಿ ಆರ್ಸಿಬಿ ವಿರುದ್ಧ ಕೆಕೆಆರ್ 81 ರನ್ಗಳ ಬೃಹತ್ ಅಂತರದಿಂದ ಗೆಲ್ಲಲು ಸಾಧ್ಯವಾಯಿತು.

ಈ ಪಂದ್ಯದ ನಂತರ ಮಾತನಾಡಿದ ಮಾಜಿ ಐಪಿಎಲ್ ಟ್ರೋಫಿ ವಿಜೇತ ಆಟಗಾರ ರಜತ್ ಭಾಟಿಯಾ ಅವರು ಶಾರ್ದೂಲ್ ಠಾಕೂರ್ ಅವರನ್ನು ಆಂಡ್ರೆ ರಸೆಲ್ನ 'ಭಾರತೀಯ ಆವೃತ್ತಿ' ಎಂದು ಬಣ್ಣಿಸಿದರು. ಹಾರ್ದಿಕ್ ಪಾಂಡ್ಯ ಜೊತೆಗೆ ಭಾರತ ತಂಡದ ಆಯ್ಕೆಗಾರರು ಶಾರ್ದೂಲ್ ಅವರನ್ನು ಸರಿಯಾದ ವೇಗದ ಬೌಲಿಂಗ್ ಆಲ್ರೌಂಡರ್ ಎಂದು ಪರಿಗಣಿಸಬೇಕು ಎಂದು ಸಲಹೆ ನೀಡಿದರು.
"ಶಾರ್ದೂಲ್ ಠಾಕೂರ್ ಭಾರತದ ಆಂಡ್ರೆ ರಸೆಲ್ ಇದ್ದಂತೆ. ರಸ್ಸೆಲ್ ಅವರಿಂದ ಬ್ಯಾಟಿಂಗ್ ಶಕ್ತಿ ತೆಗೆದುಕೊಂಡಂತೆ ತೋರುತ್ತದೆ. ಶಾರ್ದೂಲ್ ಮುಂಬೈ ಪರ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಆದರೆ ಈಗ ಬ್ಯಾಟಿಂಗ್ ಮಾಡುತ್ತಿರುವ ರೀತಿ ನೋಡಿದರೆ, ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ನಂತರ ಮತ್ತೊಬ್ಬ ಆಲ್ರೌಂಡರ್ ಸಿಕ್ಕಿದ್ದಾನೆ ಎಂದು ಹೇಳಬಹುದು. ನಾನು ಆತನನ್ನು ಇದೇ ರೀತಿಯಲ್ಲಿ ನೋಡಲು ಭಯಸುತ್ತೇನೆ," ಎಂದು ಭಾಟಿಯಾ ಕ್ರಿಕ್ಬಜ್ಗೆ ತಿಳಿಸಿದರು.

ಕೆಕೆಆರ್ನಂತಹ ಮಾಜಿ ಚಾಂಪಿಯನ್ ತಂಡವನ್ನು ದುರ್ಬಲ ಎಂದುಕೊಳ್ಳಬೇಡು: ರಜತ್ ಭಾಟಿಯಾ
ಆರ್ಸಿಬಿ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 50 ರನ್ಗಳ ನಂತರ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆಗ ಆರನೇ ವಿಕೆಟ್ಗೆ ಜೊತೆಯಾದ ರಿಂಕು ಸಿಂಗ್ ಮತ್ತು ಶಾರ್ದೂಲ್ ಠಾಕೂರ್ ಅವರು ಪಂದ್ಯ ವಿಜೇತ ಪ್ರದರ್ಶನವನ್ನು ನೀಡಿದರು. ಇದೇ ವೇಳೆ ಮಾತನಾಡಿದ ಮಾಜಿ ಕ್ರಿಕೆಟಿಗ ರಜತ್ ಭಾಟಿಯಾ, ಕೋಲ್ಕತ್ತಾ ನೈಟ್ ರೈಡರ್ಸ್ನಂತಹ ತಂಡವನ್ನು ಎಂದಿಗೂ ದುರ್ಬಲವೆಂದು ಬಣ್ಣಿಸಬಾರದು ಎಂದು ಹೇಳಿದ್ದಾರೆ.
"ಕೆಕೆಆರ್ನಂತಹ ಮಾಜಿ ಚಾಂಪಿಯನ್ ತಂಡವನ್ನು ದುರ್ಬಲವೆಂದು ನಿರ್ಲಕ್ಷಿಸಬೇಡಿ. ಪಂಜಾಬ್ ವಿರುದ್ಧ ಸೋತ ನಂತರ ಕೆಕೆಆರ್ ತಂಡಕ್ಕೆ ಒಂದು ಪ್ರತಿಕ್ರಿಯೆಯ ಅಗತ್ಯವಿತ್ತು. ತವರಿನ ಪ್ರೇಕ್ಷಕರ ಮುಂದೆ ಮತ್ತು ತಂಡದ ಬಾಸ್ ಶಾರುಖ್ ಖಾನ್ ವೀಕ್ಷಿಸುತ್ತಿರುವಾಗ, ಆರ್ಸಿಬಿ ತಂಡದ ಮೇಲೆ ಎಲ್ಲ ರೀತಿಯಾಗಿ ಸವಾರಿ ಮಾಡಿದರು".
"ಎದುರಾಳಿ ಆರ್ಸಿಬಿ ಕಡೆಯಿಂದ ಯಾವುದೇ ಉತ್ತಮ ಜೊತೆಯಾಟ ಬರಲಿಲ್ಲ. ವಿರಾಟ್ ಕೊಹ್ಲಿ ವಿಕೆಟ್ ಬೀಳುತ್ತಿದ್ದಂತೆಯೇ ಬೃಹತ್ ರನ್ ಚೇಸಿಂಗ್ ಆಸೆ ಕ್ರಮೇಣ ಕೈಬಿಟ್ಟಿತು," ಎಂದು 43 ವರ್ಷದ ರಜತ್ ಭಾಟಿಯಾ ಅಭಿಪ್ರಾಯಪಟ್ಟರು.

ಕೆಕೆಆರ್ ತಂಡದ ಮಾಲೀಕ ಶಾರುಖ್ ಖಾನ್ ಅವರು ತಾವು ಆಡುತ್ತಿದ್ದ ದಿನಗಳಲ್ಲಿ ಎಲ್ಲಾ ಆಟಗಾರರ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು. ತಂಡದ ಮ್ಯಾನೇಜ್ಮೆಂಟ್ನಿಂದ ಯಾವುದೇ ಒತ್ತಡವಿಲ್ಲ ಎಂದು ಅವರು ನಂಬುವಂತೆ ಮಾಡಿದ್ದನ್ನು ರಜತ್ ಭಾಟಿಯಾ ನೆನಪಿಸಿಕೊಂಡರು. 2012ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟ್ರೋಫಿ ಗೆಲ್ಲಲು ಇದೂ ಒಂದು ಕಾರಣ ಎಂದು ರಜತ್ ಭಾಟಿಯಾ ತಿಳಿಸಿದರು.
"ನಾನು ಕೆಕೆಆರ್ ತಂಡದಲ್ಲಿ ಮೂರು ವರ್ಷಗಳ ಕಾಲ ಆಡಿದ್ದೇನೆ. ನಾವು ಪಂದ್ಯಾವಳಿಯಿಂದ ಹೊರಗುಳಿದಿದ್ದೇವೆ ಎಂದು ನಮಗೆ ಯಾವತ್ತೂ ಅನಿಸಲಿಲ್ಲ. 2011ರಲ್ಲಿ ಕ್ವಾಲಿಫೈಯರ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ಹೊರಬಿದ್ದಾಗಲೂ ಶಾರುಖ್ ಖಾನ್ ನಮ್ಮನ್ನು ತಮ್ಮ ಮನೆಗೆ ಕರೆದಿದ್ದರು".
"ಕೆಕೆಆರ್ ಮಾಲೀಕರಿಂದ ಯಾವುದೇ ಒತ್ತಡವಿಲ್ಲ ಎಂದು ನಾವು ಅರಿತುಕೊಂಡೆವು. ಅದು ನಂತರ ವರ್ಷದ ಐಪಿಎಲ್ನಲ್ಲಿ ಚಾಂಪಿಯನ್ ಆಗಲು ನಮಗೆ ಪ್ರೇರೇಪಿಸಿತು," ಎಂದು ರಜತ್ ಭಾಟಿಯಾ ಮನದಾಳ ಹಂಚಿಕೊಂಡರು.












Click it and Unblock the Notifications