IPL 2023: ಮುಂಬೈ ಇಂಡಿಯನ್ಸ್ ಪರ ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ ಮಾಡುತ್ತಾರಾ?; ರೋಹಿತ್ ಉತ್ತರವೇನು?
ಬಹುನಿರೀಕ್ಷಿತ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಋತುವಿಗೆ ಕ್ಷಣಗಣನೆ ಆರಂಭವಾಗಿದ್ದು, ನಿಗದಿಯಂತೆ ಇದೇ ಮಾರ್ಚ್ 31ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅದ್ಧೂರಿ ಚಾಲನೆ ಸಿಗಲಿದೆ.
16ನೇ ಋತುವಿನ ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಎಂಎಸ್ ಧೋನಿ ನಾಯತಕತ್ವದ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

ಇನ್ನು ಮುಂಬೈ ಇಂಡಿಯನ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.
ಇದೇ ವೇಳೆ ಐದು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಕಳೆದ ಎರಡು ವರ್ಷಗಳಿಂದ ಸ್ಥಾನ ಪಡೆದಿದ್ದರೂ, ಒಂದೇ ಒಂದು ಪಂದ್ಯದಲ್ಲಿ ಆಡಲು ಅವಕಾಶ ಪಡೆದಿಲ್ಲ.

ಅಷ್ಟೇ ಅಲ್ಲದೇ, ಅರ್ಜುನ್ ತೆಂಡೂಲ್ಕರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈವರೆಗೂ ಪದಾರ್ಪಣೆ ಮಾಡಿಲ್ಲ. 2021ರಲ್ಲಿ ಅರ್ಜುನ್ ಗಾಯದಿಂದ ಬಳಲುತ್ತಿದ್ದರೆ, 2022ರಲ್ಲಿ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಅವರಿಗೆ ಅವಕಾಶ ನೀಡಲಿಲ್ಲ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರನಾಗಿರುವ ಅರ್ಜುನ್, 2023ರ ಐಪಿಎಲ್ ಮುಂಚಿತವಾಗಿ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. ಇದೆ ವೇಳೆ ಅರ್ಜುನ್ ತೆಂಡೂಲ್ಕರ್ ಅವರ ಚೊಚ್ಚಲ ಪ್ರವೇಶದ ಬಗ್ಗೆ ಕೇಳಿದಾಗ, ನಾಯಕ ರೋಹಿತ್ ಶರ್ಮಾ ಒಂದೇ ಉತ್ತರದಲ್ಲಿ ಉತ್ತರಿಸಿದ್ದಾರೆ.
"ಒಳ್ಳೆಯ ಪ್ರಶ್ನೆ. ಆತನನ್ನು ಆಡಿದುವ ಬಗ್ಗೆ ಆಶಾದಾಯಕವಾಗಿದ್ದೇವೆ," ಎಂದು ನಾಯಕ ರೋಹಿತ್ ಶರ್ಮಾ ಐಪಿಎಲ್ ಪಂದ್ಯಾವಳಿಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಇದೇ ವೇಳೆ ಉಪಸ್ಥಿತರಿದ್ದರು ಮತ್ತು ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಕೌಶಲ್ಯವನ್ನು ಹಲವರು ಮೆಚ್ಚಿದ್ದಾರೆ. ಅರ್ಜುನ್ ಪಂದ್ಯಾವಳಿಗೆ ಸಿದ್ಧರಾಗಿದ್ದು, ಅವರನ್ನು ಆಯ್ಕೆಗೆ ಖಂಡಿತವಾಗಿ ಪರಿಗಣಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.
"ಅರ್ಜುನ್ ತೆಂಡೂಲ್ಕರ್ ಗಾಯದಿಂದ ಹೊರಬರುತ್ತಿದ್ದು, ಇಂದು ರಾತ್ರಿ ಅಭ್ಯಾಸ ನಡೆಸಲಿದ್ದಾರೆ. ಅವರು ಏನು ಮಾಡಬಹುದೆಂದು ನಾವು ಆಶಾದಾಯಕವಾಗಿ ನೋಡುತ್ತಿದ್ದೇವೆ. ಅರ್ಜುನ್ ಕಳೆದ 6 ತಿಂಗಳುಗಳಲ್ಲಿ ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ಅವರು ಆಯ್ಕೆಗೆ ಲಭ್ಯವಿದ್ದರೆ, ಅದು ನಮಗೆ ತುಂಬಾ ಒಳ್ಳೆಯದು," ಎಂದು ಕೋಚ್ ಮಾರ್ಕ್ ಬೌಚರ್ ಅಭಿಪ್ರಾಯಪಟ್ಟರು.
ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿಯೇ ನಡೆಯುವ 2023ರ ಏಕದಿನ ವಿಶ್ವಕಪ್ ಆಡಲಿರುವುದರಿಂದ ಐಪಿಎಲ್ ಪಂದ್ಯಾವಳಿಯ ಅವಧಿಯಲ್ಲಿ ರೋಹಿತ್ ಶರ್ಮಾಗೆ ಕೆಲವು ಪಂದ್ಯಗಳಿಗೆ ವಿಶ್ರಾಂತಿ ನೀಡುವ ಸಾಧ್ಯತೆಯ ಬಗ್ಗೆಯೂ ಮಾರ್ಕ್ ಬೌಚರ್ ಮಾತನಾಡಿದರು.
"ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡುವ ವಿಚಾರದಲ್ಲಿ ಅವರ ನಿರ್ಧಾರ ಅಂತಿಮ. ಆಶಾದಾಯಕವಾಗಿ ಅವರು ಕೆಲವು ರೀತಿಯ ಫಾರ್ಮ್ ಕಂಡುಕೊಳ್ಳಲಿದ್ದಾರೆ ಮತ್ತು ಆಶಾದಾಯಕವಾಗಿ ಅವರು ವಿಶ್ರಾಂತಿ ಪಡೆಯಲು ಬಯಸುವುದಿಲ್ಲ. ನಾವು ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಿದ್ಧರಿದ್ದೇವೆ," ಎಂದು ಮುಂಬೈ ಇಂಡಿಯನ್ಸ್ ಕೋಚ್ ಮಾರ್ಕ್ ಬೌಚರ್ ಮಾಧ್ಯಮಗಳಿಗೆ ತಿಳಿಸಿದರು.
ಮುಂಬೈ ಇಂಡಿಯನ್ಸ್ ತಂಡದ ಸಂಭಾವ್ಯ ಬಲಿಷ್ಠ ಆಡುವ 11ರ ಬಳಗ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್.












Click it and Unblock the Notifications