ನೀವು ಸುಸ್ತಾಗಿದ್ರಿ, ಫೈನಲ್ ಮುಂದೂಡಬಹುದಿತ್ತು ಎಂದ ಗವಾಸ್ಕರ್ಗೆ ತಿರುಗೇಟು ನೀಡಿ ಆರ್ಸಿಬಿ ಪರ ನಿಂತ ಜಿಟಿ ಟೀಮ್
Sunil Gavaskar: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರದ್ಧ ಗೆಲವು ಸಾಧಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಸಾಧಿಸಿತು. ಈ ರೋಚಕ ಪಂದ್ಯಕ್ಕೂ ಮುನ್ಮ ಭಾರತೀಯ ಕ್ರಿಕೆಟ್ ದಂತಕಥೆ ಸುನೀಲ್ ಗವಾಸ್ಕರ್ ಫೈನಲ್ ಮುಂದೂಡಬೇಕಿತ್ತು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಜಿಟಿ ಪ್ರತಿಕ್ರಿಯೆ ನೀಡಿ ಆರ್ಸಿಬಿಗೆ ಗೌರವ ಸೂಚಿಸಿ ಕ್ರೀಡಾ ಸ್ಪೂರ್ತಿ ಮೆರೆದಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 19ನೇ ಸೀಸನ್ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಸೋಲನ್ನು ಅನುಭವಿಸಿತು. ಶುಬ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು ಕೇವಲ 6 ದಿನಗಳಲ್ಲಿ ಎರಡು ನಾಕೌಟ್ ಸೇರಿದಂತೆ ಒಟ್ಟು ಮೂರು ಪಂದ್ಯಗಳನ್ನು ಆಡಬೇಕಾಗಿ ಬಂದಿತ್ತು. ಅಲ್ಲದೆ ಅವರ ಪ್ರಯಾಣಕ್ಕೆ ಅಡಚಣೆಯುಂಟಾಗಿ ಫೈನಲ್ ಪಂದ್ಯ ಆರಂಭವಾಗಲು ಕೇವಲ 24 ಗಂಟೆಗಳಿಗಿಂತಲೂ ಕಡಿಮೆ ಸಮಯ ಇರುವಾಗ ತಂಡವು ಅಹಮದಾಬಾದ್ ತಲುಪಿತ್ತು. ಆಟಗಾರರಿಗೆ ಸರಿಯಾದ ವಿಶ್ರಾಂತಿ ಸಿಗದ ಕಾರಣ ಫೈನಲ್ ಪಂದ್ಯವನ್ನು ಮುಂದೂಡಬೇಕಾಗಿತ್ತು ಎಂದು ಪಂದ್ಯದ ವೇಳೆ ಸುನಿಲ್ ಗವಾಸ್ಕರ್ ಹೇಳಿಕೆ ನೀಡಿದ್ದರು.

ಗುಜರಾತ್ ಟೈಟಾನ್ಸ್ ತಂಡದ ಸ್ಪಷ್ಟನೆ
ಪಂದ್ಯ ಮುಗಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸುನೀಲ್ ಗವಾಸ್ಕರ್ ಅವರ ಹೇಳಿಕೆ ಮತ್ತು ಆಟಗಾರರ ಆಯಾಸದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸೋಲಿಗೆ ಆಯಾಸ ಅಥವಾ ಪ್ರಯಾಣದ ವಿಳಂಬವನ್ನು ನೆಪವಾಗಿ ಬಳಸಲು ನಿರಾಕರಿಸಿದರು.
ವಿಕ್ರಮ್ ಸೋಲಂಕಿ ಹೇಳಿಕೆಯಲ್ಲೇನಿದೆ?
'ದುರದೃಷ್ಟವಶಾತ್ ಹವಾಮಾನವನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಿಲ್ಲ. ಹವಾಮಾನದ ಕಾರಣದಿಂದಾಗಿ ನಾವು ತಡವಾಗಿ ತಲುಪಬೇಕಾಗಿ ಬಂದರೆ, ಅದರಲ್ಲಿ ನಾವು ಏನೂ ಮಾಡಲು ಸಾಧ್ಯವಿಲ್ಲ. ಕೇವಲ 6 ದಿನಗಳಲ್ಲಿ ಮೂರು ಪಂದ್ಯಗಳನ್ನು ಆಡುವುದು ದೈಹಿಕವಾಗಿ ಸವಲಾಗಿದೆ. ಟೂರ್ನಿಯ ಕೊನೆಯ ಹಂತದಲ್ಲಿ ಇದು ಸಹಜ,' ಎಂದು ವಿಕ್ರಮ್ ಸೋಲಂಕಿ ಅವರು ಹೇಳಿದರು.
'ಆರ್ಸಿಬಿ ಗೆಲುವಿನ ಕ್ರೆಡಿಟ್ ಕಸಿದುಕೊಳ್ಳಲು ತಯಾರಿಲ್ಲ'
'ನಾವು ಆಯಾಸಗೊಂಡಿದ್ದೆವು ಎಂಬ ಕಾರಣ ನೀಡಿ ಆರ್ಸಿಬಿ ತಂಡದ ಗೆಲುವಿನ ಕ್ರೆಡಿಟ್ ಅನ್ನು ಕಸಿದುಕೊಳ್ಳಲು ನಾವು ಬಯಸುವುದಿಲ್ಲ. ಅಂದು ಆರ್ಸಿಬಿ ನಮ್ಮಗಿಂತ ಉತ್ತಮವಾಗಿ ಕ್ರಿಕೆಟ್ ಆಡಿತು ಮತ್ತು ಅವರು ಗೆಲುವಿಗೆ ಅರ್ಹರಾಗಿದ್ದರು,' ಎಂದು ಸೋಲಂಕಿ ಅವರು ಮುಕ್ತವಾಗಿ ಒಪ್ಪಿಕೊಂಡರು.
ಯಾವ ಲೆಂತ್ನಲ್ಲಿ ಬೌಲಿಂಗ್ ಮಾಡಲಾಯಿತು, ಟಾಪ್ ಆರ್ಡರ್ ಬ್ಯಾಟಿಂಗ್ ಹೇಗಿತ್ತು, ನಾವು ತಡವಾಗಿ ಪ್ರಯಾಣ ಬೆಳೆಸಿದೆವಾ ಎಂಬ ಅಂಕಿ-ಅಂಶಗಳ ಚರ್ಚೆ ಈಗ ಅಗತ್ಯವಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಮ್ಮನ್ನು ಸೋಲಿಸಿದೆ ಎಂಬುದು ಸತ್ಯ. ನಾವು ನಮ್ಮ ಇಡೀ ಟೂರ್ನಿಯ ಪ್ರದರ್ಶನದ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಆರ್ಸಿಬಿ ತಂಡಕ್ಕೆ ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸಬೇಕು,' ಎಂದು ಹೇಳುವ ಮೂಲಕ ಕ್ರೀಡಾ ಸ್ಪೂರ್ತಿ ಮೆರೆದರು.
ಚೇಸಿಂಗ್ ಕಿಂಗ್ ಎಂದು ಸಾಬೀತು ಮಾಡಿದ ಕೊಹ್ಲಿ
ರನ್ಮಿಷಿನ್ ವಿರಾಟ್ ಕೊಹ್ಲಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಅವರು ಮತ್ತೊಮ್ಮೆ ತಾವೂ ಚೇಸಿಂಗ್ ಮಾಡುವುದರಲ್ಲಿ ಕಿಂಗ್ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಮಿಂಚಿದ ವಿರಾಟ್ ಕೊಹ್ಲಿ
ಜಿಟಿ ನೀಡಿದ್ದ 156 ರನ್ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಆರಂಭದಿಂದ ಕೊನೆಯವರೆಗೂ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ಅಜೇಯ ಹೋರಾಟ ನಡೆಸಿದರು. ಪಂದ್ಯದ ಮಧ್ಯೆ ಗಾಯದ ಸಮಸ್ಯೆಗೆ ಒಳಗಾಗಿದ್ದರೂ ಬಗ್ಗದ ಕೊಹ್ಲಿ ಕೇವಲ 42 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದರು. ಈ ಇನಿಂಗ್ಸ್ ವೇಳೆ ಅವರು ತಮ್ಮ ಐಪಿಎಲ್ ವೃತ್ತಿಜೀವನದ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನೂ ಬರೆದರು. ಜೊತೆಗೆ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.












Click it and Unblock the Notifications