ಶಿವಮೊಗ್ಗ: ನರಸೀಪುರದ ನಾಟಿ ಔಷಧ ವಿತರಣೆಗೆ ಮತ್ತೆ ನಿರ್ಬಂಧ, ಹೊರಗಿನವರಿಗೆ ಪ್ರವೇಶವಿಲ್ಲ
ಶಿವಮೊಗ್ಗ, ಸೆಪ್ಟೆಂಬರ್ 7: ನಾಟಿವೈದ್ಯ ಖ್ಯಾತಿಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನರಸೀಪುರ ಗ್ರಾಮದಲ್ಲಿ ಕೊರೊನಾ ಸಮಯದಲ್ಲಿ ನಿರ್ಬಂಧಿಸಿದ ಬೆನ್ನಲ್ಲೇ ಮತ್ತೆ ಗ್ರಾಮಸ್ಥರ ವಿರೋಧ ಹಾಗೂ ಅಧಿಕಾರಿಗಳ ಸಮಾಲೋಚನೆಯ ನಂತರ ಔಷಧಿ ವಿತರಣೆಗೆ ತಡೆ ನೀಡಲಾಗಿದೆ.
Recommended Video
ನರಸೀಪುರದ ನಾಟಿವೈದ್ಯ ನಾರಾಯಣಮೂರ್ತಿ ಅವರು ನಿಧನರಾದ ಬೆನ್ನಲ್ಲೇ ಅವರ ಪುತ್ರ ರಾಘವೇಂದ್ರ ಔಷಧ ವಿತರಣೆಗೆ ಸರ್ಕಾರದಿಂದ ಅನುಮತಿ ಪಡೆದು ಕಳೆದ ಗುರುವಾರದಿಂದ ಔಷಧ ವಿತರಿಸಲು ಆರಂಭಿಸಿದ್ದರು, ಆದರೆ ಗ್ರಾಮಸ್ಥರಿಂದ ಭಾರಿ ವಿರೋಧ ವ್ಯಕ್ತವಾಗಿದೆ.
ರಾಜ್ಯ ಮತ್ತು ಹೊರ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ರೋಗಿಗಳು ಔಷಧವನ್ನು ಪಡೆಯಲು ಆಗಮಿಸುತ್ತಾರೆ ಇದರಿಂದ ಗ್ರಾಮದ ನೈರ್ಮಲ್ಯಕ್ಕೆ ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ಔಷಧಿ ವಿತರಣೆಗೆ ವಿರೋಧಿಸಿದ್ದಾರೆ.

ಔಷಧ ಪಡೆಯಲು ಆಗಮಿಸುವ ಜನರಿಗೆ ಶೌಚಾಲಯ ವ್ಯವಸ್ಥೆ ಇಲ್ಲ, ಇದರಿಂದ ಇಡೀ ಗ್ರಾಮವೇ ದುರ್ವಾಸನೆಯಿಂದ ಕೂಡಿದ್ದು ಗ್ರಾಮದ ಜನರಿಗೆ ಕೊರೊನಾ ಭೀತಿಯ ನಡುವೆ ಸಾಂಕ್ರಾಮಿಕ ಕಾಯಿಲೆಗಳ ಆತಂಕ ಎದುರಾಗಿದೆ.
ರಾಜ್ಯ ಮತ್ತು ಹೊರ ರಾಜ್ಯಗಳಿಂದ ಹಾಗೂ ದೂರದ ಊರುಗಳಿಂದ ಆಗಮಿಸಿದ ಗ್ರಾಹಕರು ತಮಗೆ ಔಷಧವನ್ನು ಕೊಡಿಸಲು ಬಂದೋಬಸ್ತ್ ಇದ್ದ ಪೊಲೀಸರಿಗೆ ಮನವಿ ಮಾಡಿದರು. ಆದರೆ ನಿಯಮದ ಪ್ರಕಾರ ಯಾರಿಗೂ ಔಷಧವನ್ನು ನೀಡುವಂತಿಲ್ಲ ಎಂದು ಮನವರಿಕೆ ಮಾಡಿದ ನಂತರ ಗ್ರಾಹಕರು ವಾಪಸ್ ತೆರಳಿದರು.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿಯೂ ಕೂಡ ಈ ಗ್ರಾಮದಲ್ಲಿ ಔಷಧ ವಿತರಣೆಗೆ ಗ್ರಾಮಸ್ಥರಿಂದ ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಪಾರ್ಸೆಲ್ ನೀಡಲು ಅನುಮತಿ ನೀಡಿದ್ದು, ಯಾರಿಗೂ ಸ್ಥಳದಲ್ಲಿ ಔಷಧಿ ವಿತರಿಸದಂತೆ ಸೂಚಿಸಿದ್ದಾರೆ.












Click it and Unblock the Notifications