ಭಜರಂಗದಳ ಕಾರ್ಯಕರ್ತನ ಹತ್ಯೆ; ಮೃತದೇಹ ಮೆರವಣಿಗೆ ವೇಳೆ ಶಿವಮೊಗ್ಗದಲ್ಲಿ ಕಲ್ಲು ತೂರಾಟ
ಶಿವಮೊಗ್ಗ, ಫೆಬ್ರವರಿ 21: ಹಿಜಾಬ್ ವಿವಾದದ ನಡುವೆಯೇ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಹತ್ಯೆ ಮಾಡಿದ ಐವರು ಆರೋಪಿಗಳಲ್ಲಿ ಸದ್ಯಕ್ಕೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಜಾಬ್ ವಿವಾದದಿಂದ ಸುದ್ದಿಯಾಗಿದ್ದ ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಭಜರಂಗದಳದ ಕಾರ್ಯಕರ್ತನ ಭೀಕರ ಹತ್ಯೆಯಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಜಿಲ್ಲೆಯಲ್ಲಿಯೇ ಘಟನೆ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಹಿನ್ನೆಲೆಯಲ್ಲಿ ಮಲೆನಾಡು ಬೆಚ್ಚಿಬಿದ್ದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸದ್ಯ ಎರಡು ಗುಂಪುಗಳು ರೊಚ್ಚಿಗೆದ್ದಿವೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ.

ಹರ್ಷನ ಮೃತದೇಹವನ್ನು ಮೆರವಣಿಗೆ ವೇಳೆ ಕಲ್ಲು ತೂರಾಟ
ಭಜರಂಗದಳ ಕಾರ್ಯಕರ್ತ ಹರ್ಷನ ಮೃತದೇಹವನ್ನು ಮೆರವಣಿಗೆ ಮಾಡುತ್ತಿದ್ದ ವೇಳೆ ಕೆಲ ಯುವಕರು ಕೇಸರಿ ಧ್ವಜ ಹಿಡಿದು, ಕೆಎಸ್ಆರ್ಟಿಸಿ ಬಸ್, ಮನೆ ಹಾಗೂ ಕಟ್ಟಡದ ಮೇಲೆ ಕಲ್ಲು ತೂರಾಟ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಮೆಗ್ಗಾನ್ ಆಸ್ಪತ್ರೆಯಿಂದ ಮೃತನ ನಿವಾಸದವರೆಗೆ ಮೆರವಣಿಗೆ ಮಾಡಲಾಗುತ್ತಿದ್ದು, ಬಸ್ ನಿಲ್ದಾಣದ ಮೂಲಕ ಸೀಗೆಹಟ್ಟಿಯ ನಿವಾಸದವರೆಗೆ ಮೆರವಣಿಗೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಮೆರವಣಿಗೆ ವೇಳೆ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು. ಆದರೆ ಮೆರವಣಿಗೆಯಲ್ಲಿ ಭಾಗವಹಿಸಿರುವ ಯುವಕರು ಸಿಕ್ಕ-ಸಿಕ್ಕವರ ಮೇಲೆ ಕಲ್ಲು ತೂರಾಟ ನಡೆಸಿದರು. ಜೊತೆಗೆ 2 ಬೈಕ್ಗಳಿಗೆ ಹಾಗೂ ಕಾರುಗಳಿಗೆ ಬೆಂಕಿಯನ್ನು ಹಚ್ಚಿದ್ದಾರೆ.

ಆ್ಯಂಬುಲೆನ್ಸ್ ಮೂಲಕ ಮೃತದೇಹ ರವಾನೆ ಮಾಡುವಾಗಲೇ ಕಾರ್ಯಕರ್ತರು ಅಮರ್ ರಹೇ, ಅಮರ್ ರಹೇ, ಹರ್ಷ ಅಮರ್ ರಹೇ ಎಂಬ ಉದ್ಘಾರದೊಂದಿಗೆ ಆ್ಯಂಬುಲೆನ್ಸ್ ಮುಂದೆ ಕೇಸರಿ ಧ್ವಜಗಳನ್ನು ಹಾರಿಸಿದ್ದಾರೆ.
ನಿಷೇಧಾಜ್ಞೆ ನಡುವೆಯೂ ಪೊಲೀಸರು ಮೆರವಣಿಗೆಗೆ ಅವಕಾಶ ನೀಡಿದ್ದರು. ಆದರೆ ಪೊಲೀಸರನ್ನೇ ತಳ್ಳಿ ಅಂಗಡಿಗಳಿಗೆ ನುಗ್ಗಿ ಕೆಲ ಯುವಕರು ದಾಂಧಲೆ ನಡೆಸಿದರು. ಮನೆ, ಬ್ಯಾಂಕ್ ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆದಿದೆ. ಇಬ್ಬರು ಪತ್ರಕರ್ತರು ಸೇರಿ ನಾಲ್ವರಿಗೆ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಶಿವಮೊಗ್ಗ ನಗರದಲ್ಲಿ ಆತಂಕದ ವಾತಾವರಣ ಉಂಟಾಗಿದೆ.
ಈ ಎಲ್ಲಾ ಘಟನೆಗಳು ಪೊಲೀಸರ ಎದುರೇ ನಡೆಯುತ್ತಿದ್ದರೂ ಮೂಕಪ್ರೇಕ್ಷಕರಂತೆ ಇದ್ದರು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲರಾದರು. ಇತ್ತ ಗಲಾಟೆ ಹಿನ್ನೆಲೆಯಲ್ಲಿ ನಗರದಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ.

ಹತ್ಯೆಯಾದ ಯುವಕನ ತಾಯಿಯಿಂದ ದೂರು ದಾಖಲು
28 ವರ್ಷದ ಹರ್ಷ ಎಂಬ ಹತ್ಯೆಯಾದ ಯುವಕನು ಶಿವಮೊಗ್ಗದ ಸೀಗೆಹಟ್ಟಿಯ ಕುಂಬಾರ ಬೀದಿ ನಿವಾಸಿಯಾಗಿದ್ದಾನೆ. ಈತನು ಶಿವಮೊಗ್ಗ ನಗರದಲ್ಲಿ ಇಂಜಿನಿಯರ್ ಒಬ್ಬರ ಹತ್ತಿರ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು ಮತ್ತು ಭಜರಂಗದಳದ ಕಾರ್ಯಕರ್ತನಾಗಿ ಹಿಂದುತ್ವ, ಗೋ ರಕ್ಷಣೆಯಂತಹ ವಿಚಾರಗಳಲ್ಲಿ ತೊಡಗಿಕೊಂಡಿದ್ದನು.
ಇದರಿಂದಾಗಿ ಮುಸ್ಲಿಂ ಯುವಕರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡಿರುತ್ತಾನೆ. ನಂತರ ದಿನಾಂಕಃ 20-02-2022 ರಂದು ರಾತ್ರಿ ಹೋಟೆಲ್ಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದಾನೆ.
ಯಾರೋ ದುಷ್ಕರ್ಮಿಗಳು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಟಿ. ರಸ್ತೆ ಕಾಮತ್ ಪೆಟ್ರೋಲ್ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್ನ ರಸ್ತೆಯಲ್ಲಿ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆಂದು ಮೃತನ ತಾಯಿ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0077/2022 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಸದರಿ ಪ್ರಕರಣದಲ್ಲಿ 2 ಜನ ಆರೋಪಿತರನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿರುತ್ತದೆ ಎಂದು ಶಿವಮೊಗ್ಗ ಪೊಲೀಸ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.












Click it and Unblock the Notifications