ಬೆಂಕಿಯುಂಡೆಯಂತಹ ಬಿಸಿಲಿನ ನಡುವೆ ಶಿವಮೊಗ್ಗ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ; ಅಡಿಕೆ ತೋಟಗಳು ಧ್ವಂಸ
Shivamogga Rains: ರಾಜ್ಯಾದ್ಯಂತ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲಿದೆ. ಈ ನಡುವೆಯೇ ಮಲೆನಾಡಿನ ಹೆಬ್ಬಾಗಿಲು ಅಂತಲೇ ಪ್ರಸಿದ್ಧಿಯಾಗಿರುವ ಶಿವಮೊಗ್ಗ ಜಿಲ್ಲೆಯ ಹಲವೆಡೆ ಭಾನುವಾರ ಬಿರುಗಾಳಿ ಸಹಿತ ರಣಭೀಕರ ಮಳೆ ಸುರಿದಿದೆ. ಪರಿಣಾಮ ಅಡಿಕೆ ತೋಟಗಳು ಧ್ವಂಸವಾಗಿದ್ದು, ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನಷ್ಠ ಆಗಿದೆ. ಘಟನೆಯ ವಿಡಿಯೋ ಇಲ್ಲಿದೆ ನೋಡಿ.
ಶಿವಮೊಗ್ಗ ಜಿಲ್ಲೆಯ ಕೈಮರ, ತಡಸ, ಅರತೊಳಲು, ಭದ್ರಾವತಿ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬಿರುಗಾಳಿ ಸಹಿತ ಭೀಕರ ಮಳೆಯಾಗಿದ್ದು, ಪರಿಣಾಮ ಅಡಿಕೆ ಮರಗಳು ಧರೆಗುರುಳಿವೆ. ಇದರಿಂದ ಅಡಿಕೆ ಬೆಳೆಗಾಗರರು ಕಂಗಾಲಾಗಿದ್ದಾರೆ. ಮಳೆಯ ಆರ್ಭಟಕ್ಕಿಂತ ಗಾಳಿಯ ವೇಗ ಹೆಚ್ಚಿದ್ದರಿಂದ ದಶಕಗಳಿಂದ ಪೋಷಿಸಿ ಬೆಳೆಸಿದ್ದ ಅಡಿಕೆ ಮರಗಳು ಬುಡಸಮೇತ ಧರೆಗುರುಳಿವೆ. ಅನೇಕ ತೋಟಗಳಲ್ಲಿ ಅಡಿಕೆ ಮರಗಳು ಒಂದರ ಮೇಲೊಂದು ಬಿದ್ದು ಸಂಪೂರ್ಣವಾಗಿ ನೆಲಸಮವಾಗಿರುವ ದೃಶ್ಯಗಳು ಮನಕಲಕುವಂತಿವೆ.

ಭೀಕರ ಮಳೆಗೆ ಕಂಗಲಾದ ಅಡಿಕೆ ಬೆಳೆಗಾರರು
ಅಡಿಕೆ ಬೆಳೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ರೈತರಿಗೆ ಈ ಮಳೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ. "ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಲೆ ಏರಿಕೆಯಾಗಿದ್ದರಿಂದ ಸ್ವಲ್ಪ ನೆಮ್ಮದಿಯಲ್ಲಿದ್ದೆವು. ಆದರೆ ಈ ಬಿರುಗಾಳಿ ಮಳೆಯೂ ನಮ್ಮ ಬದುಕಿನ ಆಧಾರವನ್ನೇ ಕಿತ್ತುಕೊಂಡಿದೆ. ಮರಗಳು ಬೆಳೆದು ಫಲ ನೀಡಲು ಕನಿಷ್ಠ 8-10 ವರ್ಷಗಳು ಬೇಕು, ಈಗ ಎಲ್ಲವೂ ನಾಶವಾಗಿದೆ," ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ರೈತರ ಕಣ್ಣಲ್ಲಿ ಕಣ್ಣೀರು ತರಿಸಿದ ಬಿರುಗಾಳಿ ಮಳೆ
ಕೆಲವೆಡೆ ವಿದ್ಯುತ್ ಕಂಬಗಳು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸೂಕ್ತ ಪರಿಹಾರ ಘೋಷಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಬೇಸಿಗೆಯ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆಯಂತೂ ತಂಪೆರೆದಿದೆ. ಆದರೆ ರೈತರ ಪಾಲಿಗೆ ಮಾತ್ರ ಈ ಮಳೆ ಕಣ್ಣೀರು ತರಿಸಿದೆ.
ಇದೀಗ ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಲಿದೆ. ಈ ನಡುವೆಯೇ ದಿಢೀರ್ ಶಿವಮೊಗ್ಗ ಜಿಲ್ಲೆಯ ವರುಣ ಆರ್ಟಭಟಿಸಿ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಹೀಗೆ ಈ ರೀತಿ ಆದರೆ ಮುಂಗಾರಿನ ವೇಳೆ ಇನ್ನೇನು ಗತಿ ಕಾದಿದೆಯೋ ಎನ್ನುವ ಆತಂಕ ಈ ಭಾಗಗಳ ರೈತರದ್ದಾಗಿದೆ.












Click it and Unblock the Notifications