ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ಶೀಘ್ರ ಕಾಮಗಾರಿ ಆರಂಭ
ಶಿವಮೊಗ್ಗ, ಫೆಬ್ರವರಿ 16; ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾದೀನ ಪ್ರಕ್ರಿಯೆಯನ್ನು ಫೆಬ್ರವರಿ 28ರೊಳಗಾಗಿ ಪೂರ್ಣಗೊಳಿಸಿ, ಮಾರ್ಗದ ನಿರ್ಮಾಣದ ಕಾಮಗಾರಿಗೆ ಅವಕಾಶ ಮಾಡಿಕೊಡಬೇಕು ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಹೊಸ ರೈಲು ಮಾರ್ಗದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲಿಸಿದರು. "ಹೊಸ ರೈಲು ಮಾರ್ಗದ ನಿರ್ಮಾಣಕ್ಕೆ ಅನುಮೋದನೆ ದೊರೆತು ವರ್ಷಗಳೇ ಕಳೆದಿವೆ. ಆದರೆ ಯೋಜನೆಯ ಅನುಷ್ಠಾನ ಕಾರ್ಯ ಮಂದಗತಿಯಲ್ಲಿ ಸಾಗಿರುವುದು ಬೇಸರದ ಸಂಗತಿ" ಎಂದರು.
"ಅನವಶ್ಯಕವಾಗಿ ಕಾಲಹರಣ ಮಾಡದೆ, ಸಂಬಂಧಿಸಿದ ಮಾರ್ಗದಲ್ಲಿ ಜಮೀನು ನೀಡುತ್ತಿರುವ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಧನ ಒದಗಿಸಿ, ಭೂಸ್ವಾದೀನ ಪ್ರಕ್ರಿಯೆಯನ್ನು ಫೆಬ್ರವರಿ 28ರೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ"ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯನ್ನು ಸಂಪರ್ಕಿಸುವ ರೈಲು ಮಾರ್ಗವಿದಾಗಿದೆ. ಈ ಯೋಜನೆಗೆ ಸುಮಾರು 994 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳು ಬರಲಿವೆ. 2021ರ ಡಿಸೆಂಬರ್ನಲ್ಲಿಯೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಭೂ ಸ್ವಾಧೀನದ ವಿಚಾರದಿಂದಾಗಿ ಯೋಜನೆ ವಿಳಂಬವಾಗುತ್ತಿದೆ.

ಜಮೀನು ಮಾಲೀಕರೊಂದಿಗೆ ಸಭೆ
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಗ್ರಾಮಗಳ ಜಮೀನುಗಳ ಮಾಲೀಕರೊಂದಿಗೆ ಮುಕ್ತ ಸಮಾಲೋಚನೆ ನಡೆಸಿ, ಸಹಕಾರ ನೀಡುವಂತೆ ಹಾಗೂ ತ್ವರಿತವಾಗಿ ಪರಿಹಾರ ಧನ ನೀಡುವ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ ನ್ಯಾಯಾಲಯಗಳಲ್ಲಿ ದಾವೆ ಹೂಡುವುದರಿಂದ ರೈತರಿಗೆ ಆಗಬಹುದಾದ ನಷ್ಟಗಳ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡುವಂತೆ ಸಂಸದ ಬಿ. ವೈ. ರಾಘವೇಂದ್ರ ಸೂಚಿಸಿದರು.
ಭೂಸ್ವಾಧೀನಪಡಿಸಿಕೊಳ್ಳುವ ರೈತರ ಜಮೀನಿಗೆ ಭೂದರ ಸಲಹಾ ಸಮಿತಿಯು ನಿಗದಿಪಡಿಸಿದಂತೆ ಪರಿಹಾರಧನ ನಿಗದಿಪಡಿಸಲಾಗಿದೆ. ಅದರಂತೆ ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸದರಿ ಪ್ರದೇಶದಲ್ಲಿನ ರೈತರ ಅಹವಾಲುಗಳನ್ನು ಅಧಿಕಾರಿಗಳು ಖುದ್ದಾಗಿ ಆಲಿಸಿ, ಪರಿಹಾರವನ್ನು ಕಂಡುಕೊಳ್ಳಬೇಕು ಹಾಗೂ ಅಲ್ಲಿನ ಆಸ್ತಿಪಾಸ್ತಿಗಳ ಮೌಲ್ಯವನ್ನು ಸರಿಯಾದ ಪ್ರಮಾಣದಲ್ಲಿ ದಾಖಲಿಸುವಂತೆಯೂ ಸಲಹೆ ನೀಡಿದರು.

ಯಡಿಯೂರಪ್ಪ ಕನಸಿನ ಯೋಜನೆ
90 ಕಿ. ಮೀ. ಉದ್ದದ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗ ಶಿಕಾರಿಪುರದ ಶಾಸಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸಿನ ಯೋಜನೆಯಾಗಿದೆ. 2019ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಜೊತೆ ಸಭೆ ನಡೆಸಿ ಯೋಜನೆಗೆ ಒಪ್ಪಿಗೆ ನೀಡಿದ್ದರು. ಬಳಿಕ ಕೋವಿಡ್, ಲಾಕ್ ಡೌನ್ ಕಾರಣದಿಂದಾಗಿ ಯೋಜನೆ ವಿಳಂಬವಾಗಿದೆ. ಭೂ ಸ್ವಾಧೀನ ವಿಚಾರದಲ್ಲಿ ಇರುವ ಅಡೆ-ತಡೆಗಳು ನಿವಾರಣೆಯಾದರೆ ಕಾಮಗಾರಿ ಆರಂಭವಾಗಲಿದೆ.

ಹೆಚ್ಚಿನ ಪರಿಹಾರಕ್ಕಾಗಿ ಬೇಡಿಕೆ
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗದ ವ್ಯಾಪ್ತಿಯಲ್ಲಿ ಬರುವ ರೈತರು ಸರ್ಕಾರ ನಿಗದಿ ಮಾಡಿರುವ ಪರಿಹಾರ ಮೊತ್ತದಲ್ಲಿ ಒಂದು ಸೈಟ್ ಕೂಡಾ ಬರುವುದಿಲ್ಲ. ನಮ್ಮ ಜಮೀನು ಯೋಜನೆಗಾಗಿ ಬಿಟ್ಟುಕೊಡುತ್ತಿದ್ದೇವೆ. ಮಕ್ಕಳ ಭವಿಷ್ಯಕ್ಕೆ ನಾವು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ, ಹೆಚ್ಚಿನ ಪರಿಹಾರ ಮೊತ್ತಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಪ್ರತಿ ಎಕರೆ ಕುಷ್ಕಿ ಜಮೀನಿಗೆ 1.5 ಕೋಟಿ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರಿಗೆ ಅದೇ ಗ್ರಾಮದಲ್ಲಿ ಪರ್ಯಾಯ ಜಮೀನು ನೀಡಬೇಕು ಎಂಬುದು ರೈತರ ಬೇಡಿಕೆ. ಪ್ರತಿ ಎಕರೆ ಅಡಿಕೆ ತೋಟಕ್ಕೆ 2.5 ಕೋಟಿ ಪರಿಹಾರ ನೀಡಬೇಕು. ನಿರಾಶ್ರಿತರ ರೈತರ ಕುಟುಂಬಕ್ಕೆ ಉದ್ಯೋಗ ಕೊಡಬೇಕು. ರೈತರು ಜಮೀನಿಗೆ ಹೋಗಲು ರಸ್ತೆ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

100 ಕೋಟಿ ಅನುದಾನ ಸಿಕ್ಕಿದೆ
ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗಕ್ಕೆ 2021-22ರ ಬಜೆಟ್ನಲ್ಲಿಯೇ 100 ಕೋಟಿ ಅನುದಾನ ಸಿಕ್ಕಿದೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ರೈಲು ಮಾರ್ಗ 90 ಕಿ. ಮೀ. ಇರಲಿದೆ. ಮಾರ್ಗದಲ್ಲಿ 22 ಪ್ರಮುಖ ಸೇತುವೆ, 62 ಕೆಳ ಸೇತುವೆ, 20 ರಸ್ತೆ ಸೇತುವೆಗಳು ನಿರ್ಮಾಣವಾಗಬೇಕಿದೆ. ಭೂ ಸ್ವಾಧೀನದ ಕಾರ್ಯಗಳು ಪೂರ್ಣಗೊಂಡು ಕಾಮಗಾರಿ ಆರಂಭವಾದರೆ ರೈಲು ಮಾರ್ಗ ನಿರ್ಮಾಣ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications